ಕಲಬುರಗಿ: ಮಾರಕಾಸ್ತ್ರದಿಂದ ಕೊಚ್ಚಿ ಬಿಜೆಪಿ ಮುಖಂಡನ ಕಗ್ಗೊಲೆ

By Kannadaprabha NewsFirst Published Mar 1, 2024, 10:37 AM IST
Highlights

ಕೊಲೆಯಾದ ಮಹಾಂತಪ್ಪ ಹೊಲಕ್ಕೆ ಹೋದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಠಾತ್‌ ದಾಳಿ ನಡೆಸಿ, ಕೊಲೆಮಾಡಿ ಪರಾರಿಯಾಗಿದ್ದಾರೆ. 

ಕಲಬುರಗಿ(ಮಾ.01):  ಆಳಂದ ತಾಲೂಕಿನ ಬಿಜೆಪಿ ಮುಖಂಡ ಹಾಗೂ ಸಹಕಾರಿ ಧುರೀಣರಾಗಿದ್ದ ಮಹಾಂತಪ್ಪ ಎಸ್. ಆಲೂರೆ (47) ಅವರನ್ನು ದುಷ್ಕರ್ಮಿಗಳು ಗುರುವಾರ ಬೆಳಗಿನ ಜಾವ ಮಾದನಹಿಪ್ಪರಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ಸ್ವಗ್ರಾಮ ಸರಸಂಬಾದಲ್ಲಿಯೇ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಚುಚ್ಚಿ, ಕೊಚ್ಚಿ ಕಗ್ಗೊಲೆ ಮಾಡಿದ್ದಾರೆ. ಕೊಲೆಯಾದ ಮಹಾಂತಪ್ಪ ಹೊಲಕ್ಕೆ ಹೋದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಠಾತ್‌ ದಾಳಿ ನಡೆಸಿ, ಕೊಲೆಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಗೊಳಿಸಿದೆ.

ರಾಡ್‌ನಿಂದ ಕೈಗೊಂಡ ದುಷ್ಕರ್ಮಿಗಳ ದಾಳಿಗೆ ತೀವ್ರಗಾಯಗೊಂಡಿದ್ದ ಆಲೂರೆ ಅವರನ್ನು ಆಳಂದನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಸೋಲ್ಲಾಪೂರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯ ಕೈ ಕಾಲು ಕತ್ತರಿಸಿ ಹತ್ಯೆ! ಇಬ್ಬರು ಪೊಲೀಸರ ವಶಕ್ಕೆ

ಮಾದನಹಿಪ್ಪರಗಾ ಠಾಣೆಯ ಪಿಎಸ್‍ಐ ವೀರೇಶ ಅವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಡಿವೈಎಸ್‍ಪಿ ಮಹ್ಮದ್ ಶರೀಫ್, ಸಿಪಿಐ ಚನ್ನಯ್ಯಾ ಹಿರೇಮಠ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದಾರೆ.

ಘಟಕನೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ಪ್ರಕರಣವನ್ನು ಭೇದಿಸಲು ಎಲ್ಲ ಮಗ್ಗಲುಗಳಿಂದ ಜಾಲವನ್ನು ಬಿಸಿ ತನಿಖೆ ಆರಂಭಿಸಿದ್ದಾರೆ. ಮೃತರಿಗೆ ಪತ್ನಿ ಸೇರಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ತಂದೆ ತಾಯಿ ಸೇರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಸಹಕಾರಿ ಧುರೀಣ ಆಲೂರೆ ಅವರು ನಾಲ್ಕು ಬಾರಿ ಸರಸಂಬಾ ಗ್ರಾಮ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ವರ್ಷಗಳಿಂದ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಪ್ರಬಲ ಬೆಂಬಲಿಗರಾಗಿದ್ದ ಆಲೂರೆ ಅವರ ಕೊಲೆ ನಡೆದ ಘಟನೆಯ ಸುದ್ದಿ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿದೆ. ಅಲ್ಲದೆ ಕುಟುಂಬಸ್ಥರ ಹಾಗೂ ಬಂಧು ಬಾಂಧವರ ರೋಧನೆ ಮುಗಿಲು ಮುಟ್ಟಿದೆ.

ಆಲೂರೆ ಅವರು ಮುಂಬರುವ ಜಿಪಂ ಚುನಾವಣೆಯ ಸ್ಫರ್ಧಾ ಆಕಾಂಕ್ಸಿಯಾಗಿದ್ದುಕೊಂಡು ಸಿದ್ಧತೆಯಲ್ಲಿ ತೊಡಗಿ ರಾಜಕೀಯದಲ್ಲಿ ಸಕ್ರಿಯವಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದರಲ್ಲದೆ, ಶ್ರೀ ಧನಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರ ಸಂಘದ ವಿವಿಧ ಗ್ರಾಮಗಳಲ್ಲಿ ಐದು ಶಾಖೆಗಳು ತೆರೆದು ರೈತ ಸಮುದಾಯದಲ್ಲಿ ಸಹಕಾರಿ ಧುರೀಣರಾಗಿ ಮೆಚ್ಚಿಗೆ ಪಡೆದಿದ್ದು ಅಷ್ಟೇ ಅಲ್ಲದೆ ಸಹಕಾರ ಸಂಘದ ಮೂಲಕ ಅನೇಕ ಜನಪರ ಕಾರ್ಯಗಳು ಸಹ ಅವರು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಿದ ವ್ಯಕ್ತಿಯನ್ನು ಕೊಲೆಗಿಡಾಗಿದ್ದರಿಂದ ಅಭಿಮಾನಿಗಳು ಕಂಬನಿಮಿಡಿದಿದ್ದಾರೆ.

ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!

ಮಾಜಿ ಶಾಸಕ ಭೇಟಿ:

ಆಲೂರೆ ಅವರ ಮೇಲೆ ದಾಳಿಯಾದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಸುಭಾಷ ಗುತ್ತೇದಾರ, ಬಿಜೆಪಿ ಮಂಡಲ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಮತ್ತಿತರರು ಸೋಲಾಪೂರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೆ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಗುತ್ತೇದಾರ ಅವರು, ಈ ಘಟನೆಯ ಕುರಿತು ತನಿಖೆ ನಡೆಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊಲೆಯಾದ ಮಹಾಂತಪ್ಪ ಹೊಲಕ್ಕೆ ಹೋದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಠಾತ್‌ ದಾಳಿ ನಡೆಸಿ, ಕೊಲೆಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಗೊಳಿಸಿದೆ.

click me!