ಪೊಲೀಸ್ ಪೇದೆ ನೇಮಕಾತಿಯಲ್ಲಿ ಅಕ್ರಮ: ಕಾಣದ ಖಾಕಿ ಕೈ ಉಳಿಸಲು ಕಸರತ್ತು?

By Kannadaprabha NewsFirst Published Nov 2, 2021, 2:09 PM IST
Highlights

*  ವಿಚಾರಣೆಗೆ ಪೊಲೀಸ್ ಅಧಿಕಾರಿಗಳ ಹಿಂದೇಟು
*  ಸಿಸಿಬಿಗೆ ಒಪ್ಪಿಸಿದ ಪೊಲೀಸ್ ನಗರಾಯುಕ್ತ
*  ತಲೆ ಮರೆಸಿಕೊಂಡ ಕೆಎಸ್‌ಆರ್‌ಪಿ ಪೇದೆ 
 

ಬೆಳಗಾವಿ(ನ.02): ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಗಾಗಿ(Recruitment) ಸ್ಪರ್ಧಾತ್ಮಕ ಪರೀಕ್ಷೆ ಸಮಯದಲ್ಲಿ ನಡೆದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಕಲು ಪ್ರಕರಣದಲ್ಲಿ ಖಾಕಿ ಕೈ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಪ್ರಕರಣವು ತಿರುವು ಪಡೆದುಕೊಂಡಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರನ್ನು ವಿಚಾರಣೆ ನಡೆಸಿದ್ದೇ ಆದಲ್ಲಿ ಇಲಾಖೆಗೆ ಮುಜುಗರವಾಗಲಿದೆ ಎಂಬ ಲೆಕ್ಕಾಚಾರ ಪೊಲೀಸ್ ಅಧಿಕಾರಿಗಳದ್ದಾಗಿದೆ ಎನ್ನಲಾಗುತ್ತಿದೆ.

ಅ.24ರಂದು ಪೊಲೀಸ್(Police) ಪೇದೆ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Exam) ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಬ್ಲೂಟೂತ್(Bluetooth) ಉಪಯೋಗಿಸಿ ನಕಲು(Copy) ಮಾಡುತ್ತಿದ್ದ ವೇಳೆ, ಇಬ್ಬರನ್ನು ಅಭ್ಯರ್ಥಿ(Candidate) ಹಾಗೂ 12 ಜನ ನಕಲು ಮಾಡಲು ಸಹಕಾರ ನೀಡಿದವರು ಸೇರಿದಂತೆ ಒಟ್ಟು 14 ಜನರ ವಿರುದ್ಧ ನಗರದ ಮೂರು ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು(Cases) ದಾಖಲಾಗಿವೆ. ಆದರೆ ಈ ಅಕ್ರಮ(Illegal) ದಂಧೆ ಹಿಂದಿರುವ ಓರ್ವ ಮುಖ್ಯಪೇದೆಯ ಪುತ್ರನನ್ನು ಬಂಧಿಸಲಾಗಿದೆ. ಈಗಾಗಲೇ ಪೊಲೀಸ್ ಬಲೆಯಲ್ಲಿರುವ ದಂಧೆಕೋರರ ವಿಚಾರಣೆ ಸಮಯದಲ್ಲಿ ನಗರದಲ್ಲಿರುವ ಕೆಎಸ್‌ಆರ್‌ಪಿ(KSRP) ಪೇದೆ ಹಾಗೂ ಮೂಲಗಳ ಪ್ರಕಾರ ಮುಖ್ಯಪೇದೆಯೂ ಈ ದಂಧೆಗೆ ಸಹಕಾರ ನೀಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮದ ಹಿಂದೆ ಖಾಕಿ ಕೈ..?

ಆದರೆ, ಇದುವರೆಗೂ ಇಡೀ ಇಲಾಖೆಯನ್ನೆ(Police Department) ನಿದ್ದೆಗೆಡಿಸಿದ್ದಲ್ಲದೇ, ಮುಜುಗರಕ್ಕೀಡಾಗುವಂತೆ ಮಾಡಿರುವ ಇಬ್ಬರೂ ಪೇದೆಗಳನ್ನು ವಿಚಾರಣೆ ನಡೆಸದೇ ಇರುವುದು ಇದೀಗ ಜನರ ಅನುಮಾನಕ್ಕೆ ಕಾರಣವಾಗಿದೆ. ಪರೀಕ್ಷಾರ್ಥಿಗಳ ಹಾಗೂ ಸಹಕಾರ ನೀಡುತ್ತಿದ್ದ ಒಟ್ಟು 14 ಜನರ ವಿರುದ್ಧ ನಗರ ಪೊಲೀಸ್ ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದರಿಂದ ಈ ಪ್ರಕರಣದ ತನಿಖೆಯ(Investigation) ಸಂಪೂರ್ಣ ಜವಾಬ್ದಾರಿ ನಗರ ಪೊಲೀಸರ ಮೇಲಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ತನಿಖೆ ಕಾರ್ಯವನ್ನು ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರು ವಹಿಸಿದ್ದಾರೆ. ಈ ಪ್ರಕರಣ ನಡೆದು ಒಂದುವಾರ ಕಳೆದರೂ ಇದುವರೆಗೂ ಪ್ರಕರಣದಲ್ಲಿನ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರೂ ಪೊಲೀಸ್ ಪೇದೆಗಳ ವಿಚಾರಣೆ ನಡೆಸಿಲ್ಲ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಪೊಲೀಸರನ್ನು ವಿಚಾರಣೆ ನಡೆಸಿದ್ದೇ ಆದಲ್ಲಿ ಇಲಾಖೆಗೆ ಮುಜುಗರವಾಗಲಿದೆ ಎಂಬ ಲೆಕ್ಕಾಚಾರ ಪೊಲೀಸ್ ಅಧಿಕಾರಿಗಳದ್ದಾಗಿದೆ. ಒಂದು ಕಡೆ ಅಕ್ರಮದ ಹಿಂದಿರುವವರ ಬೆನ್ನು ಬಿದ್ದಿರುವ ಖಾಕಿ, ಮತ್ತೊಂದು ಕಡೆ ಅದೇ ಖಾಕಿ ಕಿಂಗ್‌ಪಿನ್‌ಗಳಿಗೆ(Kingpin) ಸಹಕಾರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಳಗಾವಿ: ಬ್ಲೂಟೂತ್‌ ಬಳಸಿ ಪೇದೆ ಪರೀಕ್ಷೆಯಲ್ಲಿ ನಕಲು..!

ತಲೆಮರೆಸಿಕೊಂಡಿರುವ ಪೇದೆ?

ಪರೀಕ್ಷೆ ವೇಳೆ ನಕಲು ಪ್ರಕರಣದಲ್ಲಿ ಭಾಗಿಯಾಗಿರುವ 14 ಜನರನ್ನು ಖಾಕಿ ಖೆಡ್ಡಾಗೆ ಬಿಳುತ್ತಿದ್ದಂತೆ ಕೆಎಸ್‌ಆರ್‌ಪಿ ಪೇದೆ ತಲೆ ಮರೆಸಿಕೊಂಡಿದ್ದಾನೆ. ನಕಲು ಮಾಡಲು ಸಹಕಾರ ನೀಡುತ್ತಿದ್ದ 12 ಜನರನ್ನು ಪ್ರಾಥಮಿಕ ವಿಚಾರಣೆ ವೇಳೆ ಕೆಎಸ್‌ಆರ್‌ಪಿ ಪೇದೆ ಇರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಪೇದೆ ಪತ್ತೆಗೆ ಮುಂದಾಗಿದ್ದಾರೆ. ಈ ವೇಳೆ ಪೇದೆ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೇ ಈ ಪೇದೆಯ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದ ವೇಳೆ ಕೆಎಸ್ಆರ್‌ಪಿ ಅಧಿಕಾರಿಗಳು(KSRP Officers) ಸಹಕಾರ ನೀಡಿಲ್ಲ ಮತ್ತು ಪೇದೆ ಕರ್ತವ್ಯದ ಮೇಲಿದ್ದ ಎಂದು ಮೊಂಡುವಾದ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. 

ನಕಲು ಪ್ರಕರಣದಲ್ಲಿ ಕೆಎಸ್ಆರ್‌ಪಿ ಪೇದೆ ಭಾಗಿಯಾಗಿಲ್ಲ ಎನ್ನುವುದಾದರೆ, ಆತ ತಲೆ ಮರೆಸಿಕೊಳ್ಳುವ ಔಚಿತ್ಯವಾದರೂ ಏನಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಆತನ ಹೆಸರು ಕೇಳಿ ಬರಲು ಕಾರಣವಾದರೂ ಏನೂ. ಇಡೀ ಇಲಾಖೆಯನ್ನೆ ಮುಜುಗರಕ್ಕೀಡು ಮಾಡುವಂತೆ ಮಾಡುತ್ತಿರುವ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿರುವ ಪರೀಕ್ಷೆ ನಕಲು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಪೇದೆ ಮಾಹಿತಿ ನೀಡಲು ಕೆಎಸ್‌ಆರ್‌ಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಾರೂ ಏಕೆ? ಎಂಬುವುದು ಇದೀಗ ಸಾರ್ವಜನಿಕ ವಲಯದಲ್ಲಿ ಯಕ್ಷಪ್ರಶ್ನೆಯಾಗಿದೆ.
 

click me!