ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು

By Sathish Kumar KHFirst Published Feb 24, 2024, 1:29 PM IST
Highlights

ಬೆಂಗಳೂರಿನ ಕೋರಮಂಗಲದಲ್ಲಿ ರಾತ್ರಿ ವೇಳೆ ಕಸ ಎಸೆಯಲು ಹೋದ ಯುವತಿಯನ್ನು ನಾಲ್ವರ ಪುಂಡರ ಗುಂಪು ತಬ್ಬಿಕೊಂಡು ಖಾಸಗಿ ಅಂಗಾಂಗ ಮುಟ್ಟಿ ಓಡಿಹೋದ ಘಟನೆ ನಡೆದಿದೆ.

ಬೆಂಗಳೂರು (ಫೆ.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಪ್ಪಿಕೊಂಡು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಕೋರಮಂಗದಲ್ಲಿ ನಡೆದಿದೆ.

ಹೌದು, ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಿಡಿಗೇಡಿಗಳು ಹಾಗೂ ಪುಡಿ ರೌಡಿಗಳ ಕಾಟ ಹೆಚ್ಚಳವಾಗುತ್ತಿದೆ. ಪೊಲೀಸರು ಹಾಗೂ ಕಾನೂನಿನ ಶಿಕ್ಷೆಯ ಭಯ ಇಲ್ಲದಂತಾಗಿದೆ. ಜನವಸತಿ ಹಾಗೂ ಸಾರ್ವಜನಿಕ ಸ್ಥಳದಲ್ಲಿಯೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಘಟನೆಗಳು ಆಗಿಂದಾಗ್ಗೆ ವರದಿ ಆಗುತ್ತಲಿವೆ. ಅದೇ ರೀತಿ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರಮಂಗಲ ಆಟೋ ಸ್ಟಾಂಡ್ ಬಳಿಯಲ್ಲಿ ಕಸ ಎಸೆಯಲು ಹೋಗಿದ್ದ ಯುವತಿಯನ್ನು ಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಕೋಟಿ ಕೋಟಿ ಕೊಟ್ರೂ ಬಾರ್ ಲೈಸೆನ್ಸ್ ಸಿಗೊಲ್ಲ, ಅಂಥದ್ರಲ್ಲಿ ದಿನಸಿ ಅಂಗಡೀಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೇಳ್ತಾನೆ!

ಬೆಂಗಳೂರಿನಲ್ಲಿ ವಾಸವಿರುವ ಎಲ್ಲ ಜನರು ಬಿಬಿಎಂಪಿ ವಾಹನಗಳಿಗೆ ಹಸಿ ಮತ್ತು ಒಣ ಕಸವನ್ನು ಬೇರೆ ಬೇಎ ಮಾಡಿ ಕೊಡಬೇಕು ಎಂಬ ನಿಯಮವಿದೆ. ಆದರೆ, ಕೆಲವರು ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದರೆ ಸಂಜೆ ವೇಳೆಗೆ ಮನೆಗೆ ಬರುತ್ತಾರೆ. ಅಂತಹ ಮನೆಗಳಲ್ಲಿ ವಾಸಿಸುವ ಜನರು ರಸ್ತೆಬದಿ ಅಥವಾ ಕಾಲುವೆಗಳ ಬಳಿ ಇರುವ ಸ್ಥಳದಲ್ಲಿ ಕಸ ಎಸೆದು ಬರುತ್ತಾರೆ. ಅದೇ ರೀತಿ ಕೋರಮಂಗಲದ ಆಟೋ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಕಸವನ್ನು ಎಸೆಯಲು ಹೋಗಿದ್ದ ಯುವತಿ ಈಗ ಲೈಂಗಿಕ ಕಿರುಕುಳ ಅನುಭವಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಫೆ.18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದಳು. ಈ ವೇಳೆ ಕೊರಮಂಗಲ ಆಟೋ ಸ್ಟಾಂಡ್ ಬಳಿ ಕುಳಿತಿದ್ದ ಪುಂಡರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ-ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿದೆ. ನಂತರ, ನಿರ್ಜನ ಪ್ರದೇಶದಲ್ಲಿ ಕಸ ಎಸೆದು ವಾಪಸ್ ಬರುವಾಗ ಅವರನ್ನು ಹಿಂಬಾಲಿಸಿದ ಪುಂಡರ ಗುಂಪಿನಲ್ಲಿದ್ದ ನಾಲ್ವರು, ಯುವತಿಯನ್ನು ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ಈ ವೇಳೆ ತಡೆಯಲು ಮುಂದಾದ ಯುವತಿಯ ಸ್ನೇಹಿತನಿಗೂ ಥಳಿಸಿದ್ದಾರೆ.

ಮದುವೆಯಾಗಲು ಖ್ಯಾತ ಟಿವಿ ನಿರೂಪಕನನ್ನು ಅಪಹರಿಸಿದ ಉದ್ಯಮಿ ಮಹಿಳೆ!

ನಂತರ, ಯುವತಿಯ ಬಾಯಿ ಮುಚ್ಚಿ ಹಿಡಿದುಕೊಂಡು ಆಕೆಯ ಖಾಸಗಿ ಅಂಗಗಳನ್ನು ಕೆಟ್ಟದಾಗಿ ಸ್ಪರ್ಶ ಮಾಡಿದ್ದಾರೆ. ಇದಕ್ಕೆ ಯುವತಿ ತೀವ್ರ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಯುವತಿ ಗಾಯಗೊಂಡಿದ್ದಾಳೆ. ನಂತರ, ಯುವಕ ರಕ್ಷಣೆಗಾಗಿ ಕೂಗಿಕೊಂಡಾಗ ಆತನಿಗೆ ಮತ್ತೆ ಥಳಿಸಿ ಅಲ್ಲಿಂದ ಇಬ್ಬರನ್ನೂ ಬಿಟ್ಟು ಪರಾರಿ ಆಗಿದ್ದಾರೆ. ಇನ್ನು ಗಾಯಗೊಂಡ ಯುವತಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ, ಆಡುಗೋಡಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ನಾಲ್ವರು ಕೂಡ ಅಪ್ರಾಪ್ತ ಬಾಲಕರು ಎಂದು ತಿಳಿದುಬಂದಿದೆ.

click me!