ಹಾಡಹಗಲೇ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ವಿಮಾ ಏಜೆಂಟ್‌

By Kannadaprabha NewsFirst Published Sep 21, 2022, 8:42 AM IST
Highlights
  • ಹಾಡಹಗಲೇ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ವಿಮಾ ಏಜೆಂಟ್‌
  • ಹಿಂಗೂ ಇರ್ತಾರೆ. ಬೀಗ ಹಾಕದ ಮನೆಗಳ ಗುರುತಿಸಿ ಕೃತ್ಯ
  • 15 ಲಕ್ಷದ ಚಿನ್ನಾಭರಣ ವಶ. ಅಧಿಕಾರಿ ರೀತಿ ಡ್ರೆಸ್‌ ಮಾಡಿಕೊಂಡು ಹೋಗುತ್ತಿದ್ದ ಕಳ್ಳ

ಬೆಂಗಳೂರು (ಸೆ.21): ವಿಮಾ ಏಜೆಂಟ್‌ ಸೋಗಿನಲ್ಲಿ ಬೀಗ ಹಾಕದ ಮನೆಗಳನ್ನು ಗುರುತಿಸಿ ಹಾಡಹಗಲೇ ನುಗ್ಗಿ ಕಳವು ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್‌.ಟಿ.ನಗರ ನಿವಾಸಿ ಇಮ್ರಾನ್‌ ಉಲ್ಲಾಖಾನ್‌(36) ಬಂಧಿತ. ಆರೋಪಿಯಿಂದ .15.05 ಲಕ್ಷ ಮೌಲ್ಯದ 309 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಸ್ಮಾರ್ಟ್​ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ ರಸ್ತೆಗಳಲ್ಲಿ ಕಳ್ಳರ ಕಾಟ, ಕಂಬಗಳ ಕಳ್ಳತನ!

ಇತ್ತೀಚೆಗೆ ಕುಂತಿಗ್ರಾಮ 1ನೇ ಮುಖ್ಯರಸ್ತೆಯ ಮನೆಯೊಂದರ ಮಹಿಳೆ ಮಧ್ಯಾಹ್ನ 12ರ ಸಮಯದಲ್ಲಿ ಮನೆಗೆ ಬಾಗಿಲಿಗೆ ಚಿಲಕ ಹಾಕಿ, ಮನೆ ಹೊರಗಿರುವ ಸ್ನಾನದ ಮನೆಯಲ್ಲಿ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮುಗಿಸಿ ಹೊರ ಬಂದಾಗ, ಮನೆಯ ಬಾಗಿಲು ತೆರೆದಿದ್ದು ಒಳಹೋಗಿ ನೋಡಿದಾಗ ಬೀರುವಿನಲ್ಲಿ ಇರಿಸಿದ್ದ ಚಿನ್ನಾಭರಣ ಕಳವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾ ಏಜೆಂಟ್‌ ಆಗಿರುವ ಆರೋಪಿ ಇಮ್ರಾನ್‌, ವಿಮೆ ಮಾಡಿಸುವ ಸಲುವಾಗಿ ಬೆಳಗ್ಗೆ ನಗರದ ವಿವಿಧೆಡೆ ಓಡಾಡುತ್ತಿದ್ದ. ಈ ವೇಳೆ ಬಾಗಿಲಿಗೆ ಬೀಗ ಹಾಕದ ಮನೆಗಳನ್ನು ಗುರುತಿಸಿ, ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತಿದ್ದ. ಬಳಿಕ ಸೀದಾ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ಬಂಧನದಿಂದ ಹೆಬ್ಬಾಳ ಠಾಣೆಯಲ್ಲಿ ಎರಡು ಹಾಗೂ ಆರ್‌.ಟಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ಒಂದು ಮನೆಗಳವು ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿ ಇಮ್ರಾನ್‌ ನೋಡಲು ಅಧಿಕಾರಿ ರೀತಿ ಡ್ರೆಸ್‌ ಮಾಡಿಕೊಂಡು ಓಡಾಡುತ್ತಿದ್ದ. ಹೀಗಾಗಿ ಯಾರಿಗೂ ಈತನ ಬಗ್ಗೆ ಅನುಮಾನ ಬರುತ್ತಿರಲಿಲ್ಲ. ಈತನ ಪತ್ತೆಗೆ ಪೊಲೀಸರು ಸುಮಾರು 500 ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಸಿಕ್ಕ ಸಣ್ಣ ಸುಳಿವಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಗೆಳತಿಯ ಮನೆಯಿಂದಲೇ ಚಿನ್ನ ಕದ್ದ ಮಹಿಳೆ ಮೈಸೂರಿನಲ್ಲಿ ಸೆರೆ!

click me!