ಪರ ಪತ್ನಿ ಮೇಲಿನ ವ್ಯಾಮೋಹ, ಶಿವಮೊಗ್ಗ ಅನಾಮಧೇಯ ಗಲಭೆ ಪತ್ರದ ರಹಸ್ಯ ಬಯಲು!

By Suvarna NewsFirst Published Aug 25, 2022, 3:43 PM IST
Highlights

ಶಿವಮೊಗ್ಗ ಅನಾಮಧೇಯ ಗಲಭೆ ಪತ್ರದ ರಹಸ್ಯ ಬಯಲು. ಪರ ಪತ್ನಿ ಮೇಲಿನ ವ್ಯಾಮೋಹದಿಂದ ಕಿಡಿಗೇಡಿಯಿಂದ ಈ ಕೃತ್ಯ!

ಶಿವಮೊಗ್ಗ (ಆ.25): ನಗರದಲ್ಲಿ ಸಂಚಲನ ಮೂಡಿಸಿದ್ದ ಅನಾಮಧೇಯ ಪತ್ರ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಶಿವಮೊಗ್ಗ ನಗರದ ಕೋಮು ಗಲಭೆಯನ್ನು ವೈಯಕ್ತಿಕ ಕಾರಣಕ್ಕೆ ಬಳಕೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ ಈಗ ಪೊಲೀಸ್‌ ಅತಿಥಿಯಾಗಿದ್ದಾನೆ. ಪರ ಪತ್ನಿ ವ್ಯಾಮೋಹದಿಂದ ಈ ಕುಚೋದ್ಯ ನಡೆದಿರುವುದು ಬಹಿರಂಗವಾಗಿದೆ. ನಗರದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ದಿನಾಚರಣೆಯಂದು ಸಾವರ್ಕರ್‌ ಭಾವಚಿತ್ರ ತೆರವುಗೊಳಿಸಿದ ವೇಳೆ ಉಂಟಾದ ಗಲಭೆ ಪ್ರಕರಣದ ಹಿನ್ನೆಲೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ನಡುವೆ ಕಳೆದ ಶನಿವಾರ ನಗರದಲ್ಲಿ ಅನಾಮಧೇಯ ಪತ್ರ ಪತ್ತೆಯಾಗಿ ತಲ್ಲಣ ಸೃಷ್ಟಿಯಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸೂಳೆಬೈಲಿನ ಅಯೂಬ್‌ನನ್ನು ಬಂಧಿಸಿ ತನಿಖೆ ನಡೆಸಿದಾಗ ಅಸಲಿ ಕಥೆ ಬಯಲಾಗಿದೆ. ಸೂಳೆಬೈಲಿನ ಗೃಹಿ​ಣಿ​ಯೊ​ಬ್ಬ​ಳ​ನ್ನು ಅಯೂಬ್‌ ಪ್ರೀತಿಸುತಿದ್ದನಂತೆ. ಆಕೆಯ ಗಂಡ​ನ​ನ್ನು ಜೈಲಿಗೆ ಅಟ್ಟಿದರೆ ಆತನ ಪತ್ನಿ ಜೊತೆಗೆ ಸುಖವಾಗಿ ಇರಬಹುದು ಎಂಬ ದೂರಾಲೋಚನೆಯಿಂದ ಆತನ ಮೇಲೆ ಆರೋಪ ಬರುವಂತೆ ಯೋಜನೆ ರೂಪಿಸಿದ್ದಾನೆ. ಶಿವಮೊಗ್ಗದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ವಿಚಾರವಾಗಿ ನಡೆದ ಗಲಭೆಯನ್ನು ಮಹಿ​ಳೆಯ ಗಂಡನ ಮೇಲೆ ಹಾಕಿ ಗಣೇಶ ಹಬ್ಬದ ಸಂದರ್ಭ ಕೋಮು ಗಲಭೆ ಎಬ್ಬಿಸುವ ರೀತಿಯಲ್ಲಿ ಏನಾದರು ಮಾಡಬೇಕೆಂದು ಸಂಚು ರೂಪಿಸಿ ಅಯೂಬ್‌ ಪತ್ರ ಬರೆದಿದ್ದಾನೆ ಎಂಬುದು ವಿಚಾ​ರ​ಣೆ​ಯಿಂದ ಬೆಳಕಿಗೆ ಬಂದಿದೆ.

ಬಲೆಗೆ ತಾನೆ ಬಿದ್ದ!: ಕಳೆದ ಶನಿವಾರ ರಾತ್ರಿ ಶಿವಮೊಗ್ಗದ ಗಾಂಧಿ ಬಜಾರ್‌ನ ಗಂಗಾ ಪರಮೇಶ್ವರಿ ದೇವಾಲಯದೊಳಗಿನ ನವಗ್ರಹಗಳ ಪಕ್ಕದಲ್ಲಿ ಪತ್ರ ಎಸೆದು ಹೋಗಿದ್ದು, ಈ ಪತ್ರ ಸಿಕ್ಕವರು ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಕೂಡ ಪತ್ರದ ಕವರ್‌ ಮೇಲೆ ಬರೆದಿದ್ದಾನೆ. ಕೂಡಲೇ, ದೇವಾಲಯದ ಪಕ್ಕದ ನಿವಾಸಿ ಬೆದರಿಕೆ ಪತ್ರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ.

ಪತ್ರದಲ್ಲಿ, ‘ಓರ್ವ ಮಾರ್ವಾಡಿಯನ್ನು ಅರ್ಧಂಬರ್ಧ ಕೊಲೆ ಮಾಡಲಾಗಿದೆ, ಆತನನ್ನ ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ಮಾರ್ವಾಡಿ, ಉದ್ದಿಮೆದಾರ ಹಾಗೂ ಹರ್ಷನ ಸಹಚರನ ಕೊಲೆಯಾಗಬೇಕು’ಎಂದು ಉಲ್ಲೇಖಿಸಲಾಗಿತ್ತು. ‘ಮಾರುಕಟ್ಟೆಯಲ್ಲಿ ಶೌಚಾಲಯದ ಬಳಿ ಮೂವರು ಗಾಂಜಾ ಸೇದುತ್ತಿದ್ದವರು ಈ ಬಗ್ಗೆ ಮಾತನಾಡಿಕೊಂಡಿರುವುದನ್ನ ತಾನು ಕೇಳಿಸಿಕೊಂಡು ಭಯಭೀತನಾಗಿದ್ದೇನೆ. ಅಲ್ಲದೆ ಈ ಕಾರ್ಯಕ್ಕೆ ಮೂವರನ್ನು ಮಂಗಳೂರಿನಿಂದ ಕರೆಸಬೇಕು ಎಂದು ಮಾತನಾಡಿಕೊಂಡಿದ್ದಾರೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಮತ್ತೆ ಜೀವ ಬೆದರಿಕೆ, ಈ ಸಲ ಪತ್ರದ ಮೂಲಕ

ಕೃತ್ಯದ ವೇಳೆ ಮೊಬೈಲ್‌ ಫೋನ್‌ ಜೊತೆಗೆ ಯಾವುದೇ ವಾಹನ ಬಳಸಬಾರದು. ಅಲ್ಲದೆ ಯಾವುದೇ ಕಾರಣಕ್ಕೂ ಯಾರಿಗೂ ಈ ಬಗ್ಗೆ ತಿಳಿಯಬಾರದು. ಗಲಾಟೆ ನಡೆದರೆ ಮಾತ್ರ ಗಣೇಶ ಹಬ್ಬ ನಿಲ್ಲಿಸಲು ಸಾಧ್ಯ ಎಂದು ಮಾತನಾಡುತ್ತಿದ್ದರು. ಬಳಿಕ ನಾನು ಕಷ್ಟಪಟ್ಟು ಆ ವ್ಯಕ್ತಿಗಳು ಯಾರೆಂದು ನೋಡಿದಾಗ ಆತ ನನ​ಗೆ ಪರಿ​ಚಿ​ತನೇ ಆದ ವ್ಯಕ್ತಿಯಾಗಿದ್ದಾನೆ (ಹೆಸರು ಉಲ್ಲೇಖಿಸಿದ್ದ). ಈತ ಗಾಂಜಾ ಮಾರಾಟ ಮಾಡುವುದು ಜೊತೆಗೆ ಗಾಂಜಾ ಸೇವನೆಯನ್ನೂ ಮಾಡುತ್ತಾನೆ. ಅಲ್ಲದೆ ಈತ ಆಜಾದ್‌ ನಗರದಲ್ಲಿ ರೌಡಿಸಂ ಮಾಡಿಕೊಂಡು ಇದ್ದವನು. ಹಾಗಾಗಿ ಪೊಲೀಸರು ಈತನನ್ನು ಬಂಧಿಸಿ ಮುಂದೆ ನಡೆಯುವ ಗಲಭೆಯನ್ನು ನಿಯಂತ್ರಿಸಬಹುದು’ ಎಂದು ಬರೆದಿದ್ದ ಎಂದು ತಿಳಿದು ಬಂದಿದೆ.

ಗೃಹ ಸಚಿವ, ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಇಬ್ಬರ ಬಂಧನ

ಪೊಲೀಸರು ಪತ್ರದ ಜಾಡು ಹಿಡಿದು ಮೊಹಮ್ಮದ್‌ ಆ ಮಹಿ​ಳೆಯ ಗಂಡ​ನ​ನ್ನು ವಿಚಾರಣೆ ನಡೆಸಿದಾಗ, ಆತ ಆರೋಪಗಳನ್ನು ನಿರಾಕರಿಸಿ ಇತ್ತೀಚಿಗಷ್ಟೇ ಅಯೂಬ್‌ ಖಾನ್‌ ಎಂಬಾತ ಈ ಕೃತ್ಯ ನಡೆಸಿರುವ ಸಾಧ್ಯತೆ ಕುರಿತು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ನಂತ​ರ ಅಯೂಬ್‌ ಖಾನ್‌ ಮಹಿ​ಳೆಯ ಜತೆ ಸಂಬಂಧ ಹೊಂದಲು ಅನಾಮಧೇಯ ಪತ್ರ ಬರೆದಿರುವುದನ್ನು ವಿಚಾ​ರ​ಣೆಯ ವೇಳೆ ಒಪ್ಪಿಕೊಂಡಿದ್ದು, ಪ್ರಕರಣ ಇತ್ಯರ್ಥ ಕಂಡಿದೆ.

click me!