
ಬೆಂಗಳೂರು(ಜ.23): ಹುಡುಗಿಯರ ಶೋಕಿಗಾಗಿ ಹಣ ಗಳಿಸಲು ನಗರದಲ್ಲಿ ಹಸುಗಳನ್ನು ಕಳವು ಮಾಡಿ ಆನ್ಲೈನ್ ಸಾರಿಗೆ ಸೇವೆ ಪಡೆದು ಸಾಗಿಸುತ್ತಿದ್ದ ಖದೀಮನೊಬ್ಬ ಅಮೃತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿ ಗ್ರಾಮದ ಕೆ.ಸೋಮಶೇಖರ್ ಅಲಿಯಾಸ್ ಸೋಮ ಬಂಧಿತನಾಗಿದ್ದು, ಆರೋಪಿಯಿಂದ 46000 ರು. ನಗದು, ನಾಲ್ಕು ಹಸುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಮಾರುತಿ ಲೇಔಟ್ನಲ್ಲಿ ಖಾಲಿ ಪ್ರದೇಶದಲ್ಲಿ ಕಟ್ಟಿದ್ದ ಹಸು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಖದೀಮನನನ್ನು ಸೆರೆ ಹಿಡಿದಿದೆ. ಸೋಮ ರೈತ ಕುಟುಂಬದ ಹಿನ್ನಲೆಯವನಾಗಿದ್ದು, ಆತನಿಗೆ ಹುಟ್ಟೂರಿನಲ್ಲಿ 10 ಎಕರೆ ಕೃಷಿ ಭೂಮಿ ಇದೆ. ಭೂಮಿ ನಂಬಿ ಆತನ ತಂದೆ-ತಾಯಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಮೋಜು ಮಸ್ತಿಗೆ ಶೋಕಿಗೆ ಬಿದ್ದು ಹಾದಿ ತಪ್ಪಿದ ಸೋಮ, ಕೊನೆಗೆ ಕಳ್ಳತನಕ್ಕಿಳಿದು ಜೈಲೂಟವನ್ನು ಸವಿದು ಬಂದಿದ್ದ. ಹೀಗಿದ್ದರೂ ತನ್ನ ಚಾಳಿ ಮಾತ್ರ ಆತ ಬಿಟ್ಟಿರಲಿಲ್ಲ. ರಾಜಾನುಕುಂಟೆ ಸಮೀಪ ನೆಲೆಸಿದ್ದ ಸೋಮ, ಕಳೆದ ಏಳೆಂಟು ತಿಂಗಳಿಂದ ನಗರ ಹೊರವಲಯದಲ್ಲಿ ಹಸುಗಳ್ಳತನಕ್ಕಿಳಿದಿದ್ದ. ಪ್ರದೇಶದಲ್ಲಿ ಇರುಳು ಹೊತ್ತಲ್ಲಿ ಕಟ್ಟುವ ಹಸುಗಳು ಆತನ ಟಾರ್ಗೆಟ್ ಆಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಪ್ರತಿಷ್ಠೆಗಾಗಿ ಸ್ನೇಹಿತನನ್ನೇ ಕೊಂದ ಗೆಳೆಯ!
3 ಯುವತಿಯರಿಗಾಗಿ ಹೆಂಡತಿ ತೊರೆದ ಕಳ್ಳ
ಆನ್ಲೈನ್ನಲ್ಲಿ ಟಾಟಾ ಏಸ್ / ಜೀಟೋ ವಾಹನ ಬುಕ್ ಮಾಡಿ ಬಾಡಿಗೆ ಪಡೆಯುತ್ತಿದ್ದ ಸೋಮ, ರಾತ್ರಿ ವೇಳೆ ಹಸುಗಳನ್ನು ವಾಹನಗಳಿಗೆ ತುಂಬಿಕೊಂಡು ಮಂಡ್ಯಕ್ಕೆ ಹೋಗಿ ಮಾರುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಹುಡುಗಿಯರ ಜತೆ ಮೋಜು ಮಾಡಿ ಕಳೆಯುತ್ತಿದ್ದ. ತನ್ನ ಸಂಪ ರ್ಕದಲ್ಲಿದ್ದ ಮೂರು ಯುವತಿಯರ ಸಲುವಾಗಿ ತಾನು ಹಸು ಕಳವು ಮಾಡಿದ್ದಾಗಿ ಸಹ ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿದ್ದಾನೆ. ಅಲ್ಲದೆ ಈ ಹುಡುಗಿಯರ ಸಂಗಕ್ಕೆ ಬಿದ್ದು ತನ್ನ ಪತ್ನಿಯನ್ನು ಆತ ತೊರೆದಿದ್ದಾನೆ ಎಂದು ಮೂಲಗಳು ಹೇಳಿವೆ.
* ಹುಡುಗಿಯರ ಶೋಕಿಗೆ ಬಿದ್ದು ಹಸುಗಳ ಕಳ್ಳತನ ಮಾಡುತ್ತಿದ್ದ ಖದೀಮ ಬಂಧನ
* ಹುಟ್ಟೂರಲ್ಲಿ 10 ಎಕರೆ ಭೂಮಿ ಇದ್ದರೂ ಮೋಜಿಗಾಗಿ ಕಳ್ಳತನಕ್ಕೆ ಇಳಿದಿದ್ದ ಸೋಮ
* ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದರೂ ಚಾಳಿ ಬಿಟ್ಟಿರದ ವಂಚಕ
* ಯುವತಿಯರ ಬೆನ್ನಿಗೆ ಬಿದ್ದು ಹೆಂಡತಿಗೆ ಕೈ ಕೊಟ್ಟಿದ್ದ ಖತರ್ನಾಕ್ ಗಂಡ .
* ಇತ್ತೀಚೆಗೆ ಮಾರುತಿ ಲೇಔಟ್ನಲ್ಲಿ ಹಸು ನಾಪತ್ತೆ ಪ್ರಕರಣದಲ್ಲಿ ಕೇಸು ದಾಖಲೆ
* ಅಮೃತಹಳ್ಳಿ ಠಾಣೆ ಪೊಲೀಸರಿಂದ ಸಿಸಿಟೀವಿ ಆಧರಿಸಿ ಕಾರ್ಯಾಚರಣೆ
* ಸಿಸಿಟೀವಿ ಆಧರಿಸಿ ಸೋಮಶೇಖರ್ನನ್ನು ಬಂಧಿಸಿದ ಅಮೃತಹಳ್ಳಿ ಪೊಲೀಸರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ