ಗಣಪತಿ ತರಲು ಹೋಗುತ್ತಿದ್ದ ವೇಳೆ ಅಪಘಾತ; ಟಾಟಾ ಏಸ್ ಆಟೋ ಪಲ್ಟಿ ,ಸ್ಥಳದಲ್ಲೇ ಇಬ್ಬರ ಸಾವು! 

By Suvarna NewsFirst Published Sep 7, 2024, 1:00 PM IST
Highlights

ಗಣಪತಿ ತರಲು ಹೋಗುತ್ತಿದ್ದಾಗ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.7) : ಗಣಪತಿ ತರಲು ಹೋಗುತ್ತಿದ್ದಾಗ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. 

Latest Videos

ಮೃತರನ್ನ 20 ವರ್ಷದ ಧನುಷ್ ಹಾಗೂ ಶ್ರೀಧರ್ ಎಂದು ಗುರುತಿಸಲಾಗಿದೆ. ಲಿಂಗನಹಳ್ಳಿ ಪಟ್ಟಣದ 9 ಜನ ಯುವಕರು ಬೆಳಗ್ಗೆ ಏಳು ಗಂಟೆಗೆ ಗಣಪತಿ ತರಲೆಂದು 15 ಕಿ.ಮೀ. ದೂರದ ತರೀಕೆರೆ ಪಟ್ಟಣಕ್ಕೆ ಟಾಟಾ ಏಸ್ ಲಾಗೇಜ್ ಆಟೋದಲ್ಲಿ ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟಾಟಾ ಏಸ್ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದರೆ ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಭಾರತದಲ್ಲೇ ಮೊದಲ 'ಅಷ್ಟವಿನಾಯಕ ದೇವಸ್ಥಾನ' ಇರೋದು ಮಹಾರಾಷ್ಟ್ರ ಅಲ್ಲ, ಹುಬ್ಬಳ್ಳಿಯಲ್ಲಿ!

ಆಟೋದಲ್ಲಿದ್ದ ಇನ್ನಿತರ ಮೂರು ಜನ ಯುವಕರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗಿರುವ ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು ತೀವ್ರವಾದ ರಕ್ತಸ್ರಾವವಾಗಿದೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಯುವಕರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಟೋ ಬಿದ್ದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಲಿಂಗದಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!