Belagavi: ಬಸ್‌ ಹಾಗೂ ‌ದ್ವಿಚಕ್ರ ವಾಹನದ ಮಧ್ಯೆ ಅಪಘಾತ: ಸ್ಥಳದಲ್ಲೇ ಮೂವರ ಸಾವು

By Govindaraj SFirst Published Mar 18, 2023, 11:21 PM IST
Highlights

ಬಸ್‌ ಹಾಗೂ ‌ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಶನಿವಾರ ರಾಯಬಾಗ ತಾಲೂಕಿನ ಹಾರೂಗೇರಿ ಹಾಗೂ ಕುಡಚಿ‌ ರಸ್ತೆಯಲ್ಲಿ ನಡೆದಿದೆ. 

ಬೆಳಗಾವಿ (ಮಾ.18): ಬಸ್‌ ಹಾಗೂ ‌ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಶನಿವಾರ ರಾಯಬಾಗ ತಾಲೂಕಿನ ಹಾರೂಗೇರಿ ಹಾಗೂ ಕುಡಚಿ‌ ರಸ್ತೆಯಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಹಾಳಸಿರಬೂರ ಗ್ರಾಮದ ಭಗವಂತ  ಶಿವರಾಯ ಕಾಂಬಳೆ (45) ವಿಶ್ವನಾಥ್  ಕಾಂಬಳೆ (24) ಹಾಗೂ ಕುಮಾರ ಬಾಳಪ್ಪ ಕಾಂಬಳೆ (35) ಮೃತಪಟ್ಟ ದುರ್ದೈವಿಗಳು. 

ಮೃತಪಟ್ಟ ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು, ಈ ವೇಳೆ ಎದುರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾಗೂ ಮೂವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರಿಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ಸಿಗ್ನಲ್‌ಗೆ ಕಾಯುತ್ತಿದ್ದ ಸ್ಕೂಟರ್‌ಗೆ ಟಿಪ್ಪರ್‌ ಡಿಕ್ಕಿ: ಮಂಗಳೂರು ನಗರದ ನಂತೂರು ವೃತ್ತದಲ್ಲಿ ಶನಿವಾರ ಮಧ್ಯಾಹ್ನ ಸಿಗ್ನಲ್‌ಗೆ ಕಾಯುತ್ತಿದ್ದ ಸ್ಕೂಟರ್‌ಗೆ ಟಿಪ್ಪರ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟರ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಸುತ್ತಾನ್‌ಬತ್ತೇರಿ ನಿವಾಸಿ ಸಾಮ್ಯುವೆಲ್‌ ಜೇಸುದಾಸ್‌(66) ಹಾಗೂ ಅವರ ಸಂಬಂಧಿ ಭೂಮಿಕಾ(17) ಎಂದು ಗುರುತಿಸಲಾಗಿದೆ. ನಂತೂರು ವೃತ್ತ ಬಳಿ ಆಕ್ಟೀವಾ ಸ್ಕೂಟರ್‌ ಸಿಗ್ನಲ್‌ಗೆ ಕಾಯುತ್ತಿದ್ದಾಗ ಪಂಪ್‌ವೆಲ್‌ ಕಡೆಯಿಂದ ಬಂದ ಟಿಪ್ಪರ್‌ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. 

ಈ ಘಟನೆಯಲ್ಲಿ ಟಿಪ್ಪರ್‌ ಚಕ್ರ ಸವಾರರ ಮೇಲೆ ಚಲಿಸಿದ ಪರಿಣಾಮ ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಚಾಲಕನನ್ನು ಟಿಪ್ಪರ್‌ನಿಂದ ಎಳೆದು ಯದ್ವಾತದ್ವಾ ಥಳಿಸಿದ್ದಾರೆ, ಅಲ್ಲದೆ ಟಿಪ್ಪರ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ವಲ್ಪ ಹೊತ್ತು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಟಿಪ್ಪರ್‌ ಚಾಲಕ ಸತೀಶ್‌ ಗೌಡ ಪಾಟೀಲ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಂಚಾರಿ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್‌ನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ: ಧರೆಗುರುಳಿದ ಮರಗಿಡಗಳು

ಟಿಪ್ಪರ್‌ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ. ಗಂಭೀರ ಗಾಯಾಳುಗಳನ್ನು ತಕ್ಷಣವೇ ವೆನ್ಲಾಕ್‌ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ನತದೃಷ್ಟಸವಾರರು ಕೆಲಸದ ನಿಮಿತ್ತ ನಂತೂರಿಗೆ ಬಂದಿದ್ದರು. ಅಷ್ಟರಲ್ಲೇ ನಿಂತಿದ್ದ ಸ್ಕೂಟರ್‌ಗೆ ಟಿಪ್ಪರ್‌ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಟಿಪ್ಪರ್‌ ಸ್ಥಳೀಯದ್ದಾಗಿದ್ದು, ಚಾಲಕ ಉತ್ತರ ಕರ್ನಾಟಕ ಮೂಲದವನಾಗಿದ್ದಾನೆ. ಘಟನೆ ವೇಳೆ ನಂತೂರಿನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಅವೈಜ್ಞಾನಿಕ ಸಿಗ್ನಲ್‌ ಹಾಗೂ ರಸ್ತೆಯಿಂದಾಗಿ ನಂತೂರಿನಲ್ಲಿ ಆಗಾಗ ಅಪಘಾತ ಸಂಭವಿಸುತ್ತಿರುತ್ತದೆ.

click me!