
ಕೋಲ್ಕತಾ: ಬಹುನಿರೀಕ್ಷಿತ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಇದರ ಜತೆಗೆ ಬರೋಬ್ಬರಿ 2019ರ ಬಳಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಕೆಆರ್ ಎದುರು ಆರ್ಸಿಬಿ ಗೆಲುವಿನ ಕೇಕೆ ಹಾಕುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಎರಡು ಅಂಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ರಜತ್ ಪಾಟೀದಾರ್ ಪಡೆ ಯಶಸ್ವಿಯಾಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲಿಳಿದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕ್ವಿಂಟನ್ ಡಿ ಕಾಕ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆ ಬಳಿಕ ನಾಯಕ ಅಜಿಂಕ್ಯ ರಹಾನೆ ಹಾಗೂ ಸುನಿಲ್ ನರೈನ್ ಸ್ಪೋಟಕ 95 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಈ ಜತೆಯಾಟದ ವೇಳೆಯಲ್ಲಿ ಸುನಿಲ್ ನರೈನ್ ಅವರ ಬ್ಯಾಟ್ ವಿಕೆಟ್ಗೆ ಅಪ್ಪಳಿಸಿ ಸ್ಟಂಪ್ ಉರುಳಿದರೂ ಅಂಪೈರ್ ಔಟ್ ನೀಡಲಿಲ್ಲ. ಯಾಕೆ ಅಂಪೈರ್ ಔಟ್ ನೀಡಲಿಲ್ಲ? ರೂಲ್ಸ್ ಏನು ಹೇಳುತ್ತೆ ನೋಡೋಣ ಬನ್ನಿ.
ಇನ್ನಿಂಗ್ಸ್ನ 8ನೇ ಓವರ್ನ 4ನೇ ಎಸೆತದಲ್ಲಿ ಚೆಂಡು ನರೈನ್ ತಲೆಯ ಮೇಲೆ ಹೋಯಿತು. ಹೀಗಾಗಿ ಚೆಂಡನ್ನು ನರೈನ್ ಟಚ್ ಮಾಡುವ ಸಾಹಸ ಮಾಡಲಿಲ್ಲ. ಆದರೆ ಅವರ ಬ್ಯಾಟ್ ಅವರಿಗೆ ಅರಿವಿಲ್ಲದಂತೆಯೇ ವಿಕೆಟ್ಗೆ ಅಪ್ಪಳಿಸಿತು. ಆಗ ಬೇಲ್ಸ್ ಕೂಡಾ ಉರುಳಿ ಬಿತ್ತು. ಆಗ ಫೀಲ್ಡಿಂಗ್ ಮಾಡುತ್ತಿದ್ದ ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಔಟ್ಗಾಗಿ ಮನವಿಯನ್ನು ಕೂಡಾ ಮಾಡಿದರು. ಆದರೆ ಲೆಗ್ಅಂಪೈರ್ ಆ ಚೆಂಡನ್ನು ಔಟ್ ಬಾಲ್ ಎಂದು ತೀರ್ಪು ನೀಡಿದರು. ಹೀಗಾಗಿ ಆ ಚೆಂಡು ಡೆಡ್ ಬಾಲ್ ಎನಿಸಿಕೊಂಡಿತು.
ಇದನ್ನೂ ಓದಿ: IPL 2025: ಕೋಲ್ಕತಾದಲ್ಲೇ ಕೆಕೆಆರ್ಗೆ ಸೋಲುಣಿಸುತ್ತಾ ಆರ್ಸಿಬಿ?
ಹೀಗಿತ್ತು ನೋಡಿ ವಿಡಿಯೋ:
ಇಂತಹ ಸಂದರ್ಭದಲ್ಲಿ ಅಂಪೈರ್ ತೀರ್ಪು ಮಹತ್ವದ ಪಾತ್ರ ವಹಿಸಲಿದೆ. ರೂಲ್ಸ್ ಕೂಡಾ ಇದನ್ನೇ ಹೇಳುತ್ತದೆ. ರೂಲ್ಸ್ ಪ್ರಕಾರ, ಒಂದು ವೇಳೆ ಚೆಂಡು ಡೆಡ್ ಬಾಲ್ ಎಂದು ಘೋಷಿಸಿದ ಬಳಿಕ ದೇಹದ ಯಾವುದೇ ಅಂಗ ಅಥವಾ ಬ್ಯಾಟ್ ವಿಕೆಟ್ಗೆ ತಗುಲಿದರೆ ಆಗ ಅದನ್ನು ಹಿಟ್ ವಿಕೆಟ್ ಎಂದು ಘೋಷಿಸಲಾಗುವುದಿಲ್ಲ. ಒಂದು ವೇಳೆ ಚೆಂಡು ವೈಡ್ ಎಂದು ಘೋಷಿಸದೇ ಇದ್ದಿದ್ದರೇ ಬಹುಶಃ ಸುನಿಲ್ ನರೈನ್ ಹಿಟ್ ವಿಕೆಟ್ಗೆ ಬಲಿಯಾಗುತ್ತಿದ್ದರು.
ಸ್ಪೋಟಕ ಬ್ಯಾಟಿಂಗ್ ನಡೆಸಿದ ನರೈನ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಯಾವಾಗಲೂ ಅಬ್ಬರಿಸುವ ಸುನಿಲ್ ನರೈನ್, ಇದೀಗ ಮತ್ತೊಮ್ಮೆ ಆರ್ಸಿಬಿ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಆರ್ಸಿಬಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ನರೈನ್ ಕೇವಲ 26 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಸಿಡಿಸಿ ಮಿಂಚಿದರು. ಇನ್ನು ಬೌಲಿಂಗ್ನಲ್ಲಿಯೂ ನರೈನ್ ಶಿಸ್ತುಬದ್ಧ ದಾಳಿ ನಡೆಸಿ ಗಮನ ಸೆಳೆದರು. ಬೌಲಿಂಗ್ನಲ್ಲಿ ನರೈನ್ 4 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ಆರ್ಸಿಬಿ, ಸಿಎಸ್ಕೆ ಕೈಬಿಟ್ಟ ಸೆಹ್ವಾಗ್; ಇದೇ ನಾಲ್ಕು ತಂಡಗಳು ಪ್ಲೇ ಆಫ್ಗೇರಲಿವೆ ಎಂದ ವೀರೂ!
ಶುಭಾರಂಭ ಮಾಡಿದ ಆರ್ಸಿಬಿ
ಪ್ರತಿ ಬಾರಿಯೂ ‘ಈ ಸಲ ಕಪ್ ನಮ್ದೇ’ ಎನ್ನುತ್ತಲೇ ಐಪಿಎಲ್ಗೆ ಕಾಲಿಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಆರಂಭಿಕ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಟೂರ್ನಿಗೆ ಆರ್ಸಿಬಿ ರಾಯಲ್ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ, ಆರಂಭಿಕ ಆಘಾತದ ಹೊರತಾಗಿಯೂ ಕೊನೆಯಲ್ಲಿ ಮುಗ್ಗಿರಿಸಿ 8 ವಿಕೆಟ್ಗೆ 174 ರನ್ ಕಲೆಹಾಕಿತು. ಈಡನ್ ಗಾರ್ಡನ್ನಲ್ಲಿ ಆರ್ಸಿಬಿಗೆ ಸಿಕ್ಕ ಮೊತ್ತ ದೊಡ್ಡದೇನೂ ಆಗಿರಲಿಲ್ಲ. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಗುರಿಯನ್ನು ಮತ್ತಷ್ಟು ಸುಲಭವಾಗಿಸಿತು. ತಂಡ 16.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: ಧನಶ್ರೀ ವರ್ಮಾ ತಮಗೆ ಐಪಿಎಲ್ನಲ್ಲಿ ಸಹಾಯ ಮಾಡಿದ್ರು: ಚಹಲ್ ಹೇಳಿಕೆ ವೈರಲ್
ಸೋಲಿನ ಸರಪಳಿ ಕಳಚಿದ ಆರ್ಸಿಬಿ
ಕೆಕೆಆರ್ ವಿರುದ್ಧ ಆರ್ಸಿಬಿ ಕಳೆದೆರಡು ಆವೃತ್ತಿಗಳ ಒಟ್ಟು 4 ಪಂದ್ಯಗಳಲ್ಲೂ ಸೋಲನುಭವಿಸಿತ್ತು. ಅಲ್ಲದೆ, ಕೋಲ್ಕತಾದಲ್ಲಿ ಕೆಕೆಆರ್ ವಿರುದ್ಧ 2019ರ ಬಳಿಕ ಗೆದ್ದಿರಲಿಲ್ಲ. ಶನಿವಾರದ ಗೆಲುವಿನೊಂದಿಗೆ ಆರ್ಸಿಬಿ ಸೋಲಿನ ಸರಪಳಿ ಕಳಚಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.