
ರಾಂಚಿ(10): ಪ್ರಚಂಡ ಲಯದಲ್ಲಿರುವ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರದಿಂದ ಇಲ್ಲಿ ಆರಂಭಗೊಳ್ಳಲಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಆ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆಯಲು ಕಾತರಿಸುತ್ತಿದೆ.
ವಿಶಾಖಪಟ್ಟಣಂನಲ್ಲಿ ನಡೆದಿದ್ದ ಮೊದಲ ಟೆಸ್ಟ್ನಲ್ಲಿ 203 ರನ್ಗಳಿಂದ ಗೆದ್ದಿದ್ದ ಭಾರತ, ಪುಣೆಯಲ್ಲಿ ನಡೆದಿದ್ದ 2ನೇ ಪಂದ್ಯ ದಲ್ಲಿ ಇನ್ನಿಂಗ್ಸ್ ಹಾಗೂ 137 ರನ್ಗಳಿಂದ ಗೆಲುವು ಸಾಧಿಸಿತ್ತು. 1992ರಿಂದ ಈ ವರೆಗೂ ದಕ್ಷಿಣ ಆಫ್ರಿಕಾ ವಿರುದ್ಧ ಹಲವು ಸರಣಿಗಳನ್ನು ಆಡಿದ್ದರೂ ಒಮ್ಮೆಯೂ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿಲ್ಲ. ಈ ಬಾರಿ ಇತಿಹಾಸದ ಪುಟಗಳನ್ನು ಸೇರಲು ವಿರಾಟ್ ಕೊಹ್ಲಿ ಪಡೆಗೆ ಅವಕಾಶವಿದೆ. 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿರುವ ಭಾರತ, 3ನೇ ಪಂದ್ಯವನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಕಾರಣ, ವಿಶ್ವ ಚಾಂಪಿಯನ್ಶಿಪ್ ನಲ್ಲಿ 4 ಪಂದ್ಯಗಳಿಂದ ತಂಡ 200 ಅಂಕ ಕಲೆಹಾಕಿದೆ. ತನ್ನ ಹತ್ತಿರದ ಪ್ರತಿಸ್ಪರ್ಧಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾಕ್ಕಿಂತ ಭಾರತ 140 ಅಂಕ ಮುಂದಿದ್ದು, ಈ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಂಡರೆ ತಂಡದ ಅಂಕ 240ಕ್ಕೇರಲಿದೆ. ಹೀಗಾಗಿ ತಂಡದ ಆಟದ ತೀವ್ರತೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಭರ್ಜರಿ ಲಯದಲ್ಲಿ ಆಟಗಾರರು: ಭಾರತ ಬ್ಯಾಟಿಂ ಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಈ ಹಿಂದಿನ ಎರಡೂ ಪಂ ದ್ಯಗಳಲ್ಲಿ ಸಾಂಘಿಕ ಪ್ರದರ್ಶನ ಮೂಡಿಬಂದಿತ್ತು. ಮೊದಲ ಟೆಸ್ಟ್ನಲ್ಲಿ ರೋಹಿತ್ 2 ಶತಕ ಬಾರಿಸಿ ದ್ದರು. ಕರ್ನಾಟಕದ ಮಯಾಂಕ್ ಅಗರ್ವಾಲ್ ಎರಡೂ ಪಂದ್ಯಗಳಲ್ಲಿ ಶತಕ ಬಾರಿಸಿ, ಆರಂಭಿಕ ಸ್ಥಾನವನ್ನು ಕಾಯಂಗೊಳಿಸಿಕೊಳ್ಳುವತ್ತ ಸಾಗಿದ್ದಾರೆ. ವಿರಾಟ್ ಕೊಹ್ಲಿ, ಪುಣೆಯಲ್ಲಿ ದ್ವಿಶತಕ ಸಿಡಿಸಿ ಮಿಂಚಿ ದ್ದರು. ಚೇತೇಶ್ವರ್ ಪೂಜಾರ ಸರಣಿಯಲ್ಲಿ 2 ಅರ್ಧಶತಕ ಗಳಿಸಿದ್ದು, ಈ ಪಂದ್ಯದಲ್ಲಿ ಮೂರಂಕಿ ಮೊತ್ತ ತಲುಪಲು ಎದುರು ನೋಡುತ್ತಿದ್ದಾರೆ. ಸರಣಿಯಲ್ಲಿ ಭಾರತ ಕೇವಲ 16 ವಿಕೆಟ್ಗಳನ್ನು ಮಾತ್ರ ಕಳೆದುಕೊಂಡಿದೆ. ಆದರೆ ಭಾರತೀಯ ಬೌಲರ್ಗಳು ಎರಡೂ ಪಂದ್ಯಗಳಲ್ಲಿ ಎದುರಾಳಿ ಯನ್ನು 2 ಬಾರಿ ಆಲೌಟ್ ಮಾಡಿದ್ದಾರೆ. ವಿಶಾಖಪಟ್ಟಣಂ, ಪುಣೆಯಲ್ಲಿ ಟಾಸ್ ಭಾರತದ ಕೈಹಿಡಿದಿದ್ದು, ಇಲ್ಲಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿ ಟಾಸ್ ಗೆದ್ದರೆ ಕುತೂಹಲ ಹೆಚ್ಚಲಿದೆ.
ಮೂವರು ಸ್ಪಿನ್ನರ್ಸ್ ಕಣಕ್ಕೆ?: ರಾಂಚಿ ಪಿಚ್ ಸ್ಪಿನ್ ಸ್ನೇಹಿ ಪಿಚ್ ಆಗಿರಲಿದ್ದು, ಭಾರತ ಮೂವರು ಸ್ಪಿನ್ನ ರ್ಗಳೊಂದಿಗೆ ಆಡುವ ಸಾಧ್ಯತೆ ಇದೆ. ಶುಕ್ರವಾರ ಸಂಜೆ ಗಾಯಾಳು ಕುಲ್ದೀಪ್ ಯಾದವ್ ಬದಲಿಗೆ ಜಾರ್ಖಂಡ್ನ ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಶಾಬಾಜ್ ತವರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಇಶಾಂತ್ ಶರ್ಮಾ ಹಾಗೂ ಮೊಹಮದ್ ಶಮಿ ವೇಗದ ಬೌಲರ್ಗಳಾಗಿ ಆಡುವ ನಿರೀಕ್ಷೆ ಇದೆ.
ಆಫ್ರಿಕಾಕ್ಕೆ ಗಾಯಾಳುಗಳ ಸಮಸ್ಯೆ: ಸ್ಪಿನ್ನರ್ ಕೇಶವ್ ಮಹರಾಜ್ ಹಾಗೂ ಆರಂಭಿಕ ಏಡನ್ ಮಾರ್ಕ್ ರಮ್ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದಾರೆ. ತಂಡದ ಅಗ್ರ ಬ್ಯಾಟ್ಸ್ಮನ್ ಗಳು ವೈಫಲ್ಯ ಕಂಡರೂ, ಎರಡೂ ಪಂದ್ಯಗಳಲ್ಲಿ ಕೇಶವ್ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡದ ಮಾನ ಉಳಿಸಲು ಪ್ರಯತ್ನಿಸಿದ್ದರು. ಅವರ ಅನುಪಸ್ಥಿತಿ ಡು ಪ್ಲೆಸಿ ಪಡೆಯನ್ನು ಕಾಡಲಿದೆ. ವೇಗಿಗಳಾದ ಕಗಿಸೋ ರಬಾಡ, ವರ್ನೊನ್ ಫಿಲಾಂಡರ್ ಹಾಗೂ ಏನ್ರಿಚ್ ನೊರ್ಟೆ, ಭಾರತೀ ಯರಷ್ಟು ಪರಿಣಾಮಕಾರಿಯಾಗುತ್ತಿಲ್ಲ. ದಕ್ಷಿಣ ಆಫ್ರಿಕಾ ವೈಟ್ವಾಶ್ ತಪ್ಪಿಸಿಕೊಳ್ಳಬೇಕಿದ್ದರೆ ಪವಾಡವೇ ಆಗಬೇಕಿದೆ.
ಇಂದು ಕ್ರೀಡಾಂಗಣಕೆ ್ಕ ಧೋನಿ! ರಾಂಚಿ ಎಂದಾಕ್ಷಣ ಮೊದಲು ನೆನಪಾಗುವುದು ಎಂ.ಎಸ್.ಧೋನಿ. ರಾಂಚಿಯಲ್ಲಿ ಪಂದ್ಯ ನಡೆಯುವಾಗ ಧೋನಿ ಬರದಿದ್ದರೆ ಹೇಗೆ?. ಕ್ರಿಕೆಟ್ನಿಂದ ಸದ್ಯ ದೂರ ಉಳಿದಿರುವ ಧೋನಿ, ಶನಿವಾರ ಕ್ರೀಡಾಂಗಣಕ್ಕೆ ಆಗಮಿಸಿ ಭಾರತ ತಂಡವನ್ನು ಬೆಂಬಲಿ ಸಲಿದ್ದಾರೆ ಎಂದು ಅವರ ವ್ಯವಸ್ಥಾಪಕ ಮಿಹಿರ್ ದಿವಾಕರ್ ತಿಳಿಸಿದ್ದಾರೆ. ಈ ಪಂದ್ಯದ ವೇಳೆ ಧೋನಿ, ಭಾರತ ತಂಡಕ್ಕೆ ತಮ್ಮ ಮನೆಯಲ್ಲಿ ಔತಣಕೂಟ ವನ್ನು ಏರ್ಪಡಿಸಲಿದ್ದಾರೆ ಎನ್ನಲಾಗಿದೆ.
1500 ಟಿಕೆಟ್ ಮಾರಾಟ! ಮುಂದಿನ ದಿನಗಳಲ್ಲಿ ರಾಂಚಿಯಲ್ಲಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುವ ಮುನ್ನ ಎರಡು ಬಾರಿ ಯೋಚಿಸಬೇಕು ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಫಿಸ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಕಾರಣ, ಕೇವಲ 1500 ಟಿಕೆಟ್ಗಳು ಮಾರಾಟವಾಗಿವೆ. ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ೧೦೦೦೦ಕ್ಕೂ ಹೆಚ್ಚು ಉಚಿತ ಟಿಕೆಟ್ಗಳನ್ನು ವಿತರಿಸಿದೆ.
ಅಂಕಿ-ಅಂಶ
04 ರನ್ ಟೆಸ್ಟ್ನಲ್ಲಿ ನಾಯಕನಾಗಿ 5000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಕೇವಲ 4 ರನ್ ಅಗತ್ಯವಿದೆ.
ರೋಹಿತ್ ಶರ್ಮಾ ಈ ವರ್ಷ ಆಡಿರುವ ಕೇವಲ 3 ಇನ್ನಿಂಗ್ಸ್ಗಳಲ್ಲಿ 13 ಸಿಕ್ಸರ್ ಸಿಡಿಸಿದ್ದಾರೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1 ]
ಸಂಭವನೀಯ ಆಟಗಾರರ ಪಟ್ಟಿ ಭಾರತ: ಮಯಾಂಕ್, ರೋಹಿತ್, ಪೂಜಾರ, ಕೊಹ್ಲಿ(ನಾಯಕ), ರಹಾನೆ, ಜಡೇಜಾ, ಸಾಹ, ಅಶ್ವಿನ್, ಶಮಿ, ನದೀಮ್, ಇಶಾಂತ್.
ದ.ಆಫ್ರಿಕಾ: ಎಲ್ಗರ್, ಜುಬೇರ್, ಬ್ರುಯನ್, ಡು ಪ್ಲೆಸಿ (ನಾಯಕ), ಬವುಮಾ, ಡಿ ಕಾಕ್, ಮುತ್ತುಸ್ವಾಮಿ, ಫಿಲಾಂಡರ್, ನೋರ್ಟೆ/ ಎನ್ಗಿಡಿ, ಡೇನ್ ಪೀಟ್, ಕಗಿಸೋ ರಬಾಡ. ಪಿಚ್ ರಿಪೋರ್ಟ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.