
ಇಸ್ಲಾಮಾಬಾದ್[ಅ.18]: ಶ್ರೀಲಂಕಾ ವಿರುದ್ಧ ತವರಿನಲ್ಲಿ ಹೀನಾಯವಾಗಿ ಟಿ20 ಸರಣಿ ಸೋತ ಬೆನ್ನಲ್ಲೇ ಪಾಕಿಸ್ತಾನ ತಂಡದ ನಾಯಕನ ತಲೆದಂಡವಾಗಿದೆ. ಪಾಕಿಸ್ತಾನದ ಸರ್ಫರಾಜ್ ಅಹಮ್ಮದ್ ಅವರನ್ನು ಎಲ್ಲಾ ಮಾದರಿಯ ನಾಯಕತ್ವದ ಕೆಳಗಿಳಿಸಲಾಗಿದ್ದು, ಅಜರ್ ಅಲಿಗೆ ಟೆಸ್ಟ್ ಹಾಗೂ ಬಾಬರ್ ಅಜಂಗೆ ಟಿ20 ತಂಡಕ್ಕೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಸರ್ಫರಾಜ್ ಅವರನ್ನು ತಂಡದಿಂದಲೂ ಕೈಬಿಡಲಾಗಿದೆ.
ದಾದಾ ಘರ್ಜನೆ: ಕೊಹ್ಲಿ-ಶಾಸ್ತ್ರಿಗೆ ಚಳಿಜ್ವರ..!
ಪಾಕಿಸ್ತಾನ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ಸರ್ಫರಾಜ್ ಅವರನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೆ ಸರಿಯಾಗಿ 12 ತಿಂಗಳು ಬಾಕೀ ಇರುವಾಗಲೇ ಕ್ಯಾಪ್ಟನ್ಸಿಯಿಂದ ಗೇಟ್ ಪಾಸ್ ನೀಡಲಾಗಿದೆ. ಸರ್ಫರಾಜ್ ನಾಯಕತ್ವದಲ್ಲೇ ಪಾಕಿಸ್ತಾನ ತಂಡ ಚೊಚ್ಚಲ ಬಾರಿಗೆ 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಸಾಧನೆ ಮಾಡಿತ್ತು. ಅಲ್ಲದೇ ವರ್ಷಗಳ ಕಾಲ ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನ ನಂ.1 ಸ್ಥಾನ ಕಾಯ್ದುಕೊಂಡಿದೆ. ಆದರೆ ಲಂಕಾ ವಿರುದ್ಧ ತವರಿನಲ್ಲೇ ಪಾಕ್ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಠಿಣವಾದ ತೀರ್ಮಾನ ತೆಗೆದುಕೊಂಡಿದೆ.
ಇಂಡೋ-ಪಾಕ್ ಸರಣಿ ಬಗ್ಗೆ ಮೋದಿ, ಇಮ್ರಾನ್ ಕೇಳಿ; ದಾದಾ ಖಡಕ್ ಮಾತು
ಅಜರ್ ಅಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಕಳೆದ ವರ್ಷವೇ ಸೀಮಿತ ಓವರ್’ಗಳ ಕ್ರಿಕೆಟ್’ನಿಂದ ದೂರ ಸರಿದಿದ್ದರು. ಪ್ರಸ್ತುತ ಅಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಪಾಕಿಸ್ತಾನದ ಆಧಾರಸ್ತಂಭ ಎನಿಸಿದ್ದಾರೆ. ಅಲಿ ಇದುವರೆಗೂ 15 ಶತಕದ ನೆರವಿನಿಂದ 5600ಕ್ಕೂ ಅಧಿಕ ಟೆಸ್ಟ್ ರನ್ ಬಾರಿಸಿದ್ದಾರೆ.
ಬಾಬರ್ ಅಜಂ ಪ್ರಸ್ತುತ ಟಿ20 ಬ್ಯಾಟ್ಸ್’ಮನ್’ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದು, ಯುವ ಕ್ರಿಕೆಟಿಗನಿಗೆ ಚುಟುಕು ಕ್ರಿಕೆಟ್ ಮುನ್ನಡೆಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ಏಕದಿನ ತಂಡದ ನಾಯಕ ಯಾರು ಎನ್ನುವ ಕುತೂಹಲ ಹಾಗೆಯೇ ಉಳಿದಿದೆ. ಪಾಕಿಸ್ತಾನ ತಂಡದ ಏಕದಿನ ಸರಣಿ ಮುಂದಿನ ವರ್ಷ ಜುಲೈನಲ್ಲಿ ನೆದರ್’ಲ್ಯಾಂಡ್ ವಿರುದ್ಧ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಆ ವೇಳೆಯಲ್ಲೇ ನಾಯಕ ಯಾರು ಎನ್ನುವ ಕುತೂಹಲಕ್ಕೆ ಉತ್ತರ ಸಿಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.