
ಮೆಲ್ಬೋರ್ನ್(ಅ.23): ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಭಾರತೀಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ಸ್ಪರ್ಧಾತ್ಮ ಗುರಿ ಬೆನ್ನಟ್ಟಲು ಕಣಕ್ಕಿಳಿದಿರುವ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ. ಈ ಬಹುನಿರೀಕ್ಷಿತ ಪಂದ್ಯ ವೀಕ್ಷಿಸಲು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿದೆ. ಇದರ ನಡುವೆ ಪವರ್ ಸ್ಟಾರ್ ಪನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಪೋಸ್ಟರ್ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ರಾರಾಜಿಸಿದೆ. ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿ ಸುಗುಮಾರ್ ಅಪ್ಪು ಗಂಧದ ಗುಡಿ ಪೋಸ್ಟರ್ ಹಿಡಿದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಹಾಜರಾಗಿದ್ದಾರೆ. ಇತ್ತ ಹಲವು ಅಪ್ಪು ಅಭಿಮಾನಿಗಳು ಪೋಸ್ಟರ್ ಜೊತೆ ಫೋಸ್ ನೀಡಿದ್ದಾರೆ.
ಅಪ್ಪು ಗಂಧದ ಗುಡಿ ಚಿತ್ರದ ಪ್ರಿ ರೀಲಿಸ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಅಮೋಘವರ್ಷ ನಿರ್ದೇಶನದ, ಪುನೀತ್ರಾಜ್ಕುಮಾರ್ ಅವರು ಕಾಣಿಸಿಕೊಂಡಿರುವ ಕೊನೆಯ ಚಿತ್ರ ‘ಗಂಧದಗುಡಿ’. ಕೊರೋನಾ ಸಂದರ್ಭದಲ್ಲಿ ಗುಡ್ಡ, ಕಾಡು, ಅರಣ್ಯ ಸುತ್ತಾಡಿ ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗಲೇ ಇದೊಂದು ಸಾಕ್ಷ್ಯ ಚಿತ್ರ ಮಾಡುವ ಯೋಚನೆ ಹೊಳೆದು, ಅದನ್ನು ‘ಗಂಧದಗುಡಿ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆ ಮಾಡಿದ್ದರು ಪುನೀತ್ ರಾಜ್ಕುಮಾರ್ ಅವರು. ಓಟಿಟಿ ಅಥವಾ ತಮ್ಮದೇ ಪಿಆರ್ಕೆ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಪುನೀತ್ರಾಜ್ಕುಮಾರ್ ಅಗಲಿದ ಮೇಲೆ ಈ ಸಾಕ್ಷ್ಯ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ಟೀಸರ್, ಟ್ರೇಲರ್ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದರ್ಶನ ಮಾಡುವ ಗಂಧದಗುಡಿ ಚಿತ್ರಮಂದಿರಗಳಲ್ಲಿ ಇದೇ ಅಕ್ಟೋಬರ್ 29ಕ್ಕೆ ತೆರೆ ಕಾಣುತ್ತಿದೆ. ಅದರ ಪ್ರೀ ರಿಲೀಸ್ ಈವೆಂಟ್ ಅನ್ನು ಪುನೀತ ಪರ್ವ ಹೆಸರಿನಲ್ಲಿ ನಡೆಯಿತು. ಇದೀಗ ಎಲ್ಲೆಡೆ ಪುನೀತ್ ಅವರ ಗಂಧದ ಗುಡಿ ಪೋಸ್ಟರ್ ರಾರಾಜಿಸುತ್ತಿದೆ. ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲೂ ಅಪ್ಪು ಪೋಸ್ಟರ್ ಕಾಣಿಸಿಕೊಂಡಿದೆ.
ಆರ್ಶದೀಪ್, ಪಾಂಡ್ಯ ಮಾರಕ ದಾಳಿ, ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ..!
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ರೋಚಕ ಪಂದ್ಯ ಕ್ಷಣಕ್ಷಣಕ್ಕೂ ರೋಚಕತೆ ಹೆಚ್ಚಿಸುತ್ತಿದೆ. ಪಾಕಿಸ್ತಾನ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಮಸೂದ್ ಹಾಗೂ ಇಫ್ತಿಕರ್ ಅಹಮ್ಮದ್ ಜೊತೆಯಾಟದಿಂದ ಪಾಕಿಸ್ತಾನ ದಿಟ್ಟ ಹೋರಾಟ ನೀಡಿತ್ತು. ಮಸೂದ್ 52 ರನ್ ಸಿಡಿಸಿದರೆ, ಇಫ್ತಿಕರ್ 51 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಶಾಹೀನ್ ಅಫ್ರಿದಿ 16 ರನ್ ಕಾಣಿಕೆ ನೀಡಿದರು. ಈ ಮೂಲಕ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿದೆ.
ಈ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದೆ. ಕೆಎಲ್ ರಾಹುಲ್ 4 ಹಾಗೂ ನಾಯಕ ರೋಹಿತ್ ಶರ್ಮಾ 4 ರನ್ ಸಿಡಿಸಿ ಪೆವಿಲಿಯನ್ ಸೇರಿದ್ದಾರೆ. ಸೂರ್ಯಕುಮಾರ್ ಯಾದವ್ 15 ರನ್ ಸಿಡಿಸಿ ಔಟಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.