5 ವರ್ಷದ ಹಿಂದೆ ತಾಯಿಯನ್ನು ಕಳೆದುಕೊಂಡ ಖ್ಯಾತ ಕ್ರಿಕೆಟಿಗನ ಮನೆಯಲ್ಲಿ ಮತ್ತೆ ಶೋಕ; ದುಃಖದಲ್ಲಿ ಮುಳುಗಿದ ದಿಗ್ಗಜ ಆಟಗಾರ!

Published : Jun 24, 2026, 04:42 PM IST
shoaib akhtar

ಸಾರಾಂಶ

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ನಿಧನರಾಗಿದ್ದಾರೆ. ಈ ದುಃಖದ ಸುದ್ದಿಯನ್ನು ಅಖ್ತರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್ ಲೋಕ ಸಂತಾಪ ಸೂಚಿಸಿದೆ.

ಇಸ್ಲಾಮಾಬಾದ್ (ಜೂ.24): ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ವೇಗದ ಮತ್ತು ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಅವರ ಬದುಕಿನಲ್ಲಿ ಭಾರಿ ವೈಯಕ್ತಿಕ ದುರಂತವೊಂದು ಸಂಭವಿಸಿದೆ. ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರು ವಿಧಿವಶರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಈ ಕಹಿ ಸುದ್ದಿಯನ್ನು ಸ್ವತಃ ಶೋಯೆಬ್ ಅಖ್ತರ್ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಖಚಿತಪಡಿಸಿದ್ದಾರೆ. ಆದರೆ, ಶಾಹಿದ್ ಅವರ ಸಾವಿಗೆ ನಿಖರವಾದ ಕಾರಣವೇನೆಂಬುದು ಇನ್ನು ಬಹಿರಂಗವಾಗಿಲ್ಲ.

"ನನ್ನ ಪ್ರೀತಿಯ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರು ಅಲ್ಲಾಹನ ಪಾದ ಸೇರಿದ್ದಾರೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ನನಗೆ ಅತ್ಯಂತ ತೀವ್ರ ಆಘಾತ ಮತ್ತು ದುಃಖವಾಗುತ್ತಿದೆ. ಅವರ ಅಂತ್ಯಕ್ರಿಯೆಯ (ನಮಾಜ್-ಎ-ಜನಾಜಾ) ಸಮಯ ಮತ್ತು ಸ್ಥಳದ ವಿವರಗಳನ್ನು ನಾಳೆ ಬೆಳಗ್ಗೆ ತಿಳಿಸಲಾಗುವುದು," ಎಂದು ಶೋಯೆಬ್ ಅಖ್ತರ್ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ರಶೀದ್ ಲತೀಫ್ ಕೂಡ ಫೇಸ್‌ಬುಕ್‌ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದು, "ನಾವೆಲ್ಲರೂ ಅಲ್ಲಾಹನಿಗೆ ಸೇರಿದವರು ಮತ್ತು ಆತನ ಬಳಿಗೇ ಮರಳುವವರು. ಶೋಯೆಬ್ ಅಖ್ತರ್ ಅವರ ಸಹೋದರ ಶಾಹಿದ್ ಅಖ್ತರ್ ಇನ್ನಿಲ್ಲ. ಹೆಚ್-8 ಸ್ಮಶಾನದ ಬಳಿ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಗಳು ನಡೆಯಲಿವೆ. ಮೃತರ ಆತ್ಮಕ್ಕಾಗಿ ಪ್ರಾರ್ಥಿಸಿ" ಎಂದು ಬರೆದುಕೊಂಡಿದ್ದಾರೆ.

ಸುಮಾರು 5 ವರ್ಷಗಳ ಹಿಂದಷ್ಟೇ ಶೋಯೆಬ್ ಅಖ್ತರ್ ಅವರ ತಾಯಿ ಮರಣ ಹೊಂದಿದ್ದರು. ಆ ವೈಯಕ್ತಿಕ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಈಗ ಹಿರಿಯ ಸಹೋದರನನ್ನೂ ಕಳೆದುಕೊಂಡು ಅಖ್ತರ್ ಕುಟುಂಬದ ಮತ್ತೊಬ್ಬ ಪ್ರೀತಿಯ ಸದಸ್ಯರನ್ನು ಕಳೆದುಕೊಂಡಂತಾಗಿದೆ.

ಸದ್ಯ ಕ್ರಿಕೆಟ್ ವಿಶ್ಲೇಷಕರಾಗಿ ಬ್ಯುಸಿ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಶೋಯೆಬ್ ಅಖ್ತರ್ ಸಕ್ರಿಯ ಕ್ರಿಕೆಟ್ ವಿಶ್ಲೇಷಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಮುಖ ಕ್ರಿಕೆಟ್ ಟೂರ್ನಿಗಳ ಸಮಯದಲ್ಲಿ ಅವರು ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇತ್ತೀಚೆಗಷ್ಟೇ ಭಾರತ ತಂಡ ಮುಡಿಗೇರಿಸಿಕೊಂಡ 2026ರ ಟಿ20 ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲೂ ಅವರು ಪಾಕಿಸ್ತಾನಿ ಮಾಧ್ಯಮಗಳಲ್ಲಿ ನಿರಂತರವಾಗಿ ವಿಶ್ಲೇಷಣೆ ನಡೆಸುತ್ತಿದ್ದರು. ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ಲೋಪದೋಷಗಳು ಹಾಗೂ ತಂಡದ ಕಳಪೆ ಪ್ರದರ್ಶನದ ವಿರುದ್ಧವೂ ಅವರು ಸದಾ ಧ್ವನಿ ಎತ್ತುತ್ತಿರುತ್ತಾರೆ. ಸದ್ಯ ಸಹೋದರನ ಅಗಲಿಕೆಗೆ ಕ್ರಿಕೆಟ್ ಲೋಕದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಾರ್ದಿಕ್ ಪಾಂಡ್ಯ ತಂಡಕ್ಕೆ ಕರೆತರಲು ಈ ಬಿಗ್ ಹಿಟ್ಟರ್‌ನನ್ನು ಬಿಟ್ಟು ಕೊಡುತ್ತಾ ಆರ್‌ಸಿಬಿ?
ಲಖನೌ ಸೂಪರ್ ಜೈಂಟ್ಸ್ ತೊರೆದ ಬೆನ್ನಲ್ಲೇ ಮೌನ ಮುರಿದ ರಿಷಭ್ ಪಂತ್..! 3 ಪದಗಳ ಭಾವನಾತ್ಮಕ ಸಂದೇಶ ರವಾನಿಸಿದ LSG ಮಾಜಿ ನಾಯಕ