ಕೈ ಬೆರಳಿಗೆ ಗಾಯ: ಭಾರತ ವಿರುದ್ಧ 2ನೇ ಟೆಸ್ಟ್‌ಗೆ ಈ ಬಾಂಗ್ಲಾ ಆಟಗಾರ ಡೌಟ್‌!

By Naveen KodaseFirst Published Sep 24, 2024, 12:17 PM IST
Highlights

ಬಾಂಗ್ಲಾದೇಶ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್, ಭಾರತ ಎದುರಿನ ಎರಡನೇ ಟೆಸ್ಟ್ ಪಂದ್ಯ ಆಡೋದು ಅನುಮಾನ ಎನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಕಾನ್ಪುರ: ಭಾರತ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ್ದ ಬಾಂಗ್ಲಾದೇಶಕ್ಕೆ 2ನೇ ಟೆಸ್ಟ್‌ಗೂ ಮುನ್ನ ಆಘಾತ ಎದುರಾಗಿದೆ. ಆರಂಭಿಕ ಪಂದ್ಯದ ವೇಳೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಹಿರಿಯ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಸೆ.27ರಿಂದ ಆರಂಭಗೊಳ್ಳಲಿರುವ 2ನೇ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.

ಈ ಬಗ್ಗೆ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಸೋಮವಾರ ಪ್ರಕಟಣೆ ಹೊರಡಿಸಿದೆ. ಶಕೀಬ್‌ ಕೈ ಬೆರಳಿನ ಗಾಯದ ಬಗ್ಗೆ ವೈದ್ಯರು ನಿಗಾ ಇಟ್ಟಿದ್ದಾರೆ. ಅವರನ್ನು ಪರೀಕ್ಷಿಸಲಾಗಿದೆ. 2ನೇ ಪಂದ್ಯದಲ್ಲಿ ಶಕೀಬ್‌ ಆಡುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದಿದೆ. ಆರಂಭಿಕ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಎಸೆದ ಚೆಂಡು ಶಕೀಬ್‌ ಕೈಗೆ ಬಡಿದಿತ್ತು. ಪಂದ್ಯದ 2 ಇನ್ನಿಂಗ್ಸ್‌ಗಳಲ್ಲಿ ಶಕೀಬ್‌ ಒಟ್ಟು 57 ರನ್‌ ಸಿಡಿಸಿದ್ದರು. ಯಾವುದೇ ವಿಕೆಟ್ ಪಡೆದಿರಲಿಲ್ಲ.

Latest Videos

ಸೆ.29ಕ್ಕೆ ಅಲ್ಲ, 28ರಂದೇ ಬೆಂಗಳೂರು ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಉದ್ಘಾಟನೆ?

ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ನಿರ್ಮಾಣಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಉದ್ಘಾಟನೆ ಸೆ.28ರಂದು ನೆರವೇರಲಿದೆ ಎಂದು ತಿಳಿದುಬಂದಿದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ 93ನೇ ವಾರ್ಷಿಕ ಮಹಾ ಸಭೆ ಬೆಂಗಳೂರಿನಲ್ಲಿ ಸೆ.29ರಂದು ನಡೆಯಲಿದೆ. ಅದೇ ದಿನ ಎನ್‌ಸಿಎ ಕೂಡಾ ಉದ್ಘಾಟನೆಗೊಳ್ಳಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಎನ್‌ಸಿಎ ಉದ್ಘಾಟನೆಯ ಆಹ್ವಾನ ಪತ್ರಿಕೆ ಕಳುಹಿಸಿದ್ದು, ಅದರಲ್ಲಿ ಸೆ.28ರಂದು ಉದ್ಘಾಟನೆ ನೆರವೇರಲಿದೆ ಎಂದು ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

ಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತ ನ್ಯೂಜಿಲೆಂಡ್

45 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿಯು 3 ವಿಶ್ವಶ್ರೇಷ್ಠ ಮೈದಾನಗಳನ್ನು ಹೊಂದಿದ್ದು, 45 ಪ್ರ್ಯಾಕ್ಟೀಸ್ ಪಿಚ್‌, ಒಳಾಂಗಣ ಕ್ರಿಕೆಟ್‌ ಪಿಚ್‌, ಒಲಿಂಪಿಕ್ಸ್‌ ದರ್ಜೆಯ ಈಜುಕೊಳ, ಜಿಮ್‌ ಕೂಡಾ ಇದೆ. 2000ದಿಂದಲೂ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಎನ್‌ಸಿಎ ಕಾರ್ಯಾಚರಿಸುತ್ತಿದೆ. ಆದರೆ 2022ರ ಫೆಬ್ರವರಿಯಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಜಯ್‌ ಶಾ ದೇವನಹಳ್ಳಿ ಬಳಿ ಹೊಸ ಎನ್‌ಸಿಎಗೆ ಶಿಲಾನ್ಯಾಸ ಮಾಡಿದ್ದರು.

ಇರಾನಿ ಕಪ್‌: ಶಾರ್ದೂಲ್‌, ಶ್ರೇಯಸ್‌ ಆಡುವ ಸಾಧ್ಯತೆ

ಲಖನೌ: ಅ.1ರಿಂದ 5ರ ವರೆಗೆ ಲಖನೌ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಶೇಷ ಭಾರತ ವಿರುದ್ಧದ ಇರಾನಿ ಕಪ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಶಾರ್ದೂಲ್‌ ಠಾಕೂರ್‌ ಹಾಲಿ ರಣಜಿ ಚಾಂಪಿಯನ್‌ ಮುಂಬೈ ತಂಡದ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ. 

ಟೆಸ್ಟ್‌ ವಿಶ್ವಕಪ್: ರೋಹಿತ್ ಶರ್ಮಾ ನೇತೃತ್ವದ ಭಾರತವೇ ನಂ.1

ಇತ್ತೀಚೆಗೆ ಅಜಿಂಕ್ಯ ರಹಾನೆ ನಾಯಕತ್ವದಲ್ಲೇ ಮುಂಬೈ ತಂಡ ರಣಜಿ ಟ್ರೋಫಿ ಗೆದ್ದಿತ್ತು. ಅವರೇ ಇರಾನಿ ಕಪ್‌ನಲ್ಲೂ ತಂಡ ಮುನ್ನಡೆಸುವ ನಿರೀಕ್ಷೆಯಿದೆ. ಶ್ರೇಯಸ್‌ ಹಾಗೂ ಶಾರ್ದೂಲ್‌ ಕೂಡಾ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಎಂಸಿಎ ಮಂಗಳವಾರ ತಂಡ ಪ್ರಕಟಿಸುವ ನಿರೀಕ್ಷೆಯಿದೆ.
 

click me!