
ಕ್ರಿಕೆಟ್ನ ದಂತಕಥೆ, ಅತಿ ಚಿಕ್ಕ ವಯಸ್ಸಿನಲ್ಲಿಯೇ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾಗಿರುವ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಹೇಳುವುದೇ ಬೇಡ ಬಿಡಿ. ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಶ್ರೇಷ್ಠ ಆಟಗಾರ ಎನ್ನಿಸಿಕೊಂಡವರು ಇವರು. ಭಾರತೀಯ ಕ್ರಿಕೆಟ್ನಲ್ಲಿ "ತೆಂಡೂಲ್ಕರ್" ಎಂಬ ಹೆಸರನ್ನು ಉಲ್ಲೇಖಿಸಿದಾಗಲೆಲ್ಲಾ, ಅದು ಕೇವಲ ಉಪನಾಮವಾಗಿ ಉಳಿಯದೆ ಲಕ್ಷಾಂತರ ಜನರ ಭಾವನೆಗಳಿಗೆ ಸಂಬಂಧಿಸಿದ ಭಾವನೆಯಾಗಿ ಪರಿಣಮಿಸುತ್ತದೆ. ಈ ಹೆಸರು ಭರವಸೆ, ನೆನಪುಗಳು ಮತ್ತು ಹೆಮ್ಮೆಯನ್ನು ಸಂಕೇತಿಸುತ್ತದೆ.
ಪಾಲಕರು ಒಂದು ಎತ್ತರವನ್ನು ತಲುಪಿದರೆ, ಮಕ್ಕಳೂ ಸುಲಭದಲ್ಲಿ ಆ ಎತ್ತರವನ್ನು ತಲುಪಲು ಸಾಧ್ಯವಾಗುವುದು ಕೇವಲ ರಾಜಕೀಯದಲ್ಲಿ ಮಾತ್ರ ಸಾಧ್ಯ. ರಾಜಕೀಯದ ಗಂಧಗಾಳಿ ಇಲ್ಲದಿದ್ದರೂ ಮಕ್ಕಳು, ಮೊಮ್ಮಕ್ಕಳು, ಪತಿ, ಪತ್ನಿ, ಅತ್ತೆ, ಮಾವ ಯಾರನ್ನೂ ಬಿಡದೇ ಕುಟುಂಬ ರಾಜಕಾರಣ ಮಾಡಿ, ರಾಜಕೀಯ ಪಕ್ಷವನ್ನೇ ಅಧೋಗತಿಗೆ ತರುತ್ತಿರುವ ಉದಾಹರಣೆಗಳು ನಮ್ಮ ಕಣ್ಣುಮುಂದೆಯೇ ಇವೆ. ಒಬ್ಬಾತ ರಾಜಕೀಯಕ್ಕೆ ಬಂದರೆ ಸಾಕು, ಆ ಮನೆಯಿಂದ ಹತ್ತಾರು ಮಂದಿ ರಾಜಕೀಯ ಅಂಗಳಕ್ಕೆ ಇಳಿಯುವುದು ಸರ್ವೇ ಸಾಮಾನ್ಯ. ಇದೇ ರೀತಿಯ, ಸ್ವಜನಪಕ್ಷಪಾತ ಕ್ರೀಡೆಯಲ್ಲಿ ಇದೆ ಎನ್ನುವುದು ನಿಜವಾದರೂ, ಇದೀಗ ಸಚಿನ್ ತೆಂಡೂಲ್ಕರ್ ಅವರು ಇದಕ್ಕೆ ವ್ಯತಿರಿಕ್ತ ಎನ್ನಿಸಿರುವ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ಗೆ ಸದ್ಯ ಅಪ್ಪನಷ್ಟು ಎತ್ತರಕ್ಕೆ ಏರುವುದು ಅಷ್ಟು ಸುಲಭದ ಮಾತಲ್ಲ. ಹಾಗೆಂದು ಶ್ರೀಮಂತರ ಮಕ್ಕಳಾದರೆ, ತಮ್ಮ ಮಕ್ಕಳು ತಮ್ಮದೇ ಕ್ಷೇತ್ರದಲ್ಲಿ ಅಲ್ಲದಿದ್ದರೂ ಅಧಿಕಾರವನ್ನು ಬಳಸಿಕೊಂಡು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಅದರಲ್ಲಿಯೂ ಭಾರತ ರತ್ನದಂಥ ಬಿರುದು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ಒಂದೇ ಒಂದು ಮಾತು, ಇಂದು ಅವರ ಮಗ ಅರ್ಜುನ್ನನ್ನು ಇನ್ನೆಲ್ಲಿಯೋ ನಿಲ್ಲಿಸಲು ಸಾಧ್ಯವಿದೆ. ಆದರೆ ಯಾರೂ ಊಹಿಸದ ಒಂದು ಘಟನೆ ಐಪಿಎಲ್ ಕ್ರೀಡಾಂಗಣದಲ್ಲಿ ನಡೆದಿದ್ದು, ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಐಪಿಎಲ್ SRH-LSG ಪಂದ್ಯದ ವೇಳೆ ಅರ್ಜುನ್ ತೆಂಡೂಲ್ಕರ್ ಆಟಗಾರರಿಗೆ ನೀರು ಹೊತ್ತುಕೊಂಡು ಮೈದಾನಕ್ಕೆ ಬಂದಿದ್ದು, ಅದೀಗ ಭಾರಿ ಸದ್ದು ಮಾಡುತ್ತಿದೆ. ಐಪಿಎಲ್ 2026ರಲ್ಲಿ LSG ತಂಡದ ಭಾಗವಾಗಿರುವ ಅರ್ಜುನ್, ಆಡುವ ಹನ್ನೊಂದರ ಬಳಗದಲ್ಲಿ (playing XI) ಇಲ್ಲದಿದ್ದರೂ, ತಂಡಕ್ಕೆ ಬೆಂಬಲ ನೀಡುವಲ್ಲಿ ಸಕ್ರಿಯರಾಗಿದ್ದಾರೆ. ಅಪ್ಪ ಸಚಿನ್ ತೆಂಡೂಲ್ಕರ್ ಆಗಿದ್ದರೂ, ಯಾವುದೇ ಸವಲತ್ತು ಬಯಸದೆ ಕಠಿಣ ಪರಿಶ್ರಮಕ್ಕೆ ಒತ್ತು ನೀಡಿರುವುದಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಅವರ ಮಾತು ಬಿಡಿ. ಆದರೆ ಭಾರತ ರತ್ನ ಪುತ್ರನ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.