
ಬೆಂಗಳೂರು: ಟೀಂ ಇಂಡಿಯಾ ಮುಂದಿನ ಹೆಡ್ ಕೋಚ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಸದ್ಯ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಈ ರೇಸ್ನಲ್ಲಿರುವ ಪ್ರಮುಖರೆನಿಸಿದ್ದಾರೆ. ಗೌತಮ್ ಗಂಭೀರ್ ಮೆಂಟರ್ ಆಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಅವರನ್ನೇ ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ನೇಮಿಸಲು ಬಿಸಿಸಿಐ ಒಲವು ತೋರಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸದ್ಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರೊಂದಿಗಿನ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಇದೀಗ ಈ ಕುರಿತಂತೆ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ, ಡೆಲ್ಲಿ ಮೂಲದ ಮಾಜಿ ಕ್ರಿಕೆಟಿಗ ಗಂಭೀರ್ಗೆ ಕಿವಿಮಾತು ಹೇಳಿದ್ದಾರೆ.
ನಿಜಕ್ಕೂ ಪಾಕಿಸ್ತಾನದ ಆರ್ಥಿಕತೆಗಿಂತ ಐಪಿಎಲ್ 13 ಪಟ್ಟು ಮೌಲ್ಯಯುತವಾಗಿದೆಯೇ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಟೀಂ ಇಂಡಿಯಾ ಕೋಚ್ ಆಗುವವರಿಗೆ, "ನೀವು ನಿಜಕ್ಕೂ ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಯಬೇಕು ಎಂದಿದ್ದರೇ, ನಿಮ್ಮ ವರ್ತನೆಯನ್ನು ಬಲವಾಗಿ ಸಮರ್ಥಿಸುವವರು ಜತೆಗಿರಬೇಕು" ಎಂದು ESPNCricinfo ಜತೆಗಿನ ಮಾತುಕತೆ ವೇಳೆ ತಿಳಿಸಿದ್ದಾರೆ.
"ರಾಹುಲ್ ದ್ರಾವಿಡ್ ಅದ್ಭುತವಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರು ವಿಶ್ವಕಪ್ ಟೂರ್ನಿಯವರೆಗೂ ತಂಡದಲ್ಲಿ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಕೆಲವು ಹಿರಿಯ ಆಟಗಾರರು ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಈ ಆಟಗಾರರ ಸ್ಥಿತ್ಯಂತರ ಅವಧಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ಗುಣಮಟ್ಟವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಿದೆ" ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಸೂಪರ್ 8 ಕನಸು ನುಚ್ಚುನೂರು; ಯುಎಸ್ಎ & ಭಾರತ ಮುಂದಿನ ಹಂತಕ್ಕೆ ಲಗ್ಗೆ..!
"ಇದಕ್ಕಾಗಿ ಸಾಕಷ್ಟು ಸಮಯವನ್ನು ಕೊಡಬೇಕು. ಗೌತಮ್ ಗಂಭೀರ್ ಇದನ್ನು ಖಂಡಿತವಾಗಿಯೂ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಅವರು ಭಾರತಕ್ಕೆ, ಫ್ರಾಂಚೈಸಿ ಲೀಗ್ಗಳಲ್ಲಿ ಹಾಗೂ ಡೆಲ್ಲಿ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅವರಿಗೆ ಟೀಂ ಇಂಡಿಯಾ ಕೋಚ್ ಆಗುವ ಸಾಮರ್ಥ್ಯವಿದೆ. ಆದರೆ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗುವುದು ಇದೆಲ್ಲದವುಕ್ಕಿಂತ ಕೊಂಚ ವಿಭಿನ್ನವಾದದ್ದು. ಹೀಗಾಗಿ ಅವರಿಗೆ ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಕೊಂಚ ಕಾಲಾವಕಾಶ ನೀಡಬೇಕು. ಅವರು ಟೀಂ ಇಂಡಿಯಾ ಕೋಚ್ ಆಗುವ ಸವಾಲು ಸ್ವೀಕರಿಸಿದರೆ, ಸದ್ಯದ ಪರಿಸ್ಥಿತಿ ಮಾತ್ರವಲ್ಲದೇ ಟೀಂ ಇಂಡಿಯಾ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು" ಎಂದು ಗೌತಿಗೆ ಕುಂಬ್ಳೆ ಕಿವಿಮಾತು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.