
ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ದಿಢೀರ್ ನಿವೃತ್ತಿ ಘೋಷಿಸಿ ತವರಿಗೆ ಮರಳಿದ್ದರು. ಇದು ಕ್ರಿಕೆಟ್ ವಲಯವನ್ನೇ ಕೆಲ ಕಾಲ ಅಚ್ಚರಿಗೀಡಾಗುವಂತೆ ಮಾಡಿತ್ತು. ಭಾರತದ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ಅಶ್ವಿನ್ ವಿದಾಯದ ಪಂದ್ಯವನ್ನೂ ಆಡಲಿಲ್ಲ. ಆದರೆ ಇದೀಗ ರವಿಚಂದ್ರನ್ ಅಶ್ವಿನ್ ಸ್ವತಃ ಈ ಕುರಿತಂತೆ ಮೌನ ಮುರಿದಿದ್ದು, ತಾವೇಕೆ ದಿಢೀರ್ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.
'ನಾನು ಈ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡೆನೇ ಎನ್ನುವ ಪ್ರಶ್ನೆ ಯಾವಾಗಲೂ ನಮ್ಮಲ್ಲಿಯೇ ಇರುತ್ತದೆ. ಈ ರೀತಿಯ ಪ್ರಶ್ನೆಯನ್ನು ಸಾಮಾನ್ಯವಾಗಿ ನೀವು ನಿಮ್ಮನ್ನೇ ಕೇಳಿಕೊಳ್ಳುತ್ತೀರಿ. ಆದರೆ ನನ್ನ ವಿಷಯದಲ್ಲಿ ಇದು ಕೊಂಚ ವಿಭಿನ್ನ. ಅದನ್ನು ನಾನು ಹೇಗೆ ವಿವರಿಸಬೇಕು ಎಂದು ಅರ್ಥವಾಗುತ್ತಿಲ್ಲ. ನಾನು ಎಂದಿಗೂ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ವ್ಯಕ್ತಿಯಾಗಿರಲೇ ಇಲ್ಲ. ನನ್ನ ಜೀವನದಲ್ಲಿ ನಾನು ಯಾವತ್ತಿಗೂ ಅಭದ್ರತೆಯ ಭಾವನೆಯನ್ನು ಅನುಭವಿಸಿಯೇ ಗೊತ್ತಿಲ್ಲ. ಇಂದು ನನ್ನದು, ಆದರೆ ನಾಳೆ ನನ್ನದೇ ಎಂದು ನಾನು ನಂಬುವುದಿಲ್ಲ. ಈ ರೀತಿಯ ಆಟಿಟ್ಯೂಟ್ ಇಟ್ಟುಕೊಂಡಿದ್ದಕ್ಕಾಗಿಯೇ ಬಹುಶಃ ನಾನು ಈ ಹಂತಕ್ಕೆ ತಲುಪಿದ್ದಾಗಿರಬಹುದು' ಎಂದು ಅಶ್ವಿನ್ ಸ್ಕೈ ಸ್ಪೋರ್ಟ್ಸ್ ಪಾಡ್ಕಾಸ್ಟ್ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಯಾರು ಈ ತನುಷ್ ಕೋಟ್ಯಾನ್? ಅಶ್ವಿನ್ ಸ್ಥಾನಕ್ಕೆ ಟೀಂ ಇಂಡಿಯಾಗೆ ಆಯ್ಕೆಯಾದ ಈ ಕನ್ನಡಿಗನ ಹಿನ್ನೆಲೆ ಏನು?
ಈ ಮೊದಲು ಟೀಂ ಇಂಡಿಯಾ ಮಾಜಿ ಆಟಗಾರ ಎರಪಳ್ಳಿ ಪ್ರಸನ್ನ, ರವಿಚಂದ್ರನ್ ಅಶ್ವಿನ್ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರ ನಿವೃತ್ತಿ ಭಾರತ ತಂಡಕ್ಕೆ ಆದ ನಷ್ಟ ಎಂದು ಹೇಳಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಅಶ್ವಿನ್ ಮಾತನಾಡಿದ್ದಾರೆ.
'ಜನರು ನನ್ನನ್ನು ಸಂಭ್ರಮಿಸುವುದರ ಬಗ್ಗೆ ನನಗೆ ನಂಬಿಕೆಯಿಲ್ಲ. ಯಾಕೆಂದರೆ ನಾನು ಯಾವಾಗಲೂ ನನ್ನಿಂದ ಸಾಧ್ಯವಾದಷ್ಟು ನಿರ್ಲಕ್ಷ್ಯವಾಗಿ ವಿಷಯಗಳನ್ನು ಬಿಡಲು ಬಯಸುತ್ತೇನೆ. ಭಾರತದಲ್ಲಿ ಒಮ್ಮೊಮ್ಮೆ ನಾವು ಪಡೆಯುವ ಗೌರವಗಳನ್ನು ನಾನು ನಂಬುವುದಿಲ್ಲ. ನಮಗಿಂತಲೂ ಕ್ರೀಡೆ ಸಾರ್ವಕಾಲಿಕವಾದದ್ದು' ಎಂದು ಅಶ್ವಿನ್ ಹೇಳಿದ್ದಾರೆ.
ಮೆಲ್ಬರ್ನ್ನಲ್ಲೇ ಏಕೆ ಬಾಕ್ಸಿಂಗ್ ಡೇ ಟೆಸ್ಟ್ ಆಯೋಜಿಸುತ್ತಾರೆ? ಏನಿದರ ಸ್ಪೆಷಾಲಿಟಿ?
38 ವರ್ಷದ ರವಿಚಂದ್ರನ್ ಅಶ್ವಿನ್ 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರು ಮಾದರಿಯಿಂದ 765 ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ 106 ಟೆಸ್ಟ್ ಪಂದ್ಯಗಳನ್ನಾಡಿ 537 ವಿಕೆಟ್ ಕಬಳಿಸುವ ಮೂಲಕ ಸದ್ಯ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ಗಳ ಪೈಕಿ 7ನೇ ಸ್ಥಾನದಲ್ಲಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ 6 ಶತಕಗಳನ್ನು ಸಿಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.