Ranji Trophy : ಕರ್ನಾಟಕ ಸಂಭವನೀಯರ ಪಟ್ಟಿಯಲ್ಲಿ ರಾಹುಲ್‌, ಮಯಾಂಕ್‌ಗೆ ಸ್ಥಾನ

By Suvarna NewsFirst Published Dec 29, 2021, 7:58 AM IST
Highlights

* ರಣಜಿ ಕ್ರಿಕೆಟ್ ಟೂರ್ನಿಗೆ ಸಂಭಾವ್ಯ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ

* ಸಂಭವನೀಯ ಆಟಗಾರರ ಪಟ್ಟಿಯಲ್ಲಿ ರಾಹುಲ್, ಮಯಾಂಕ್‌ಗೆ ಸ್ಥಾನ

* ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಈ ಇಬ್ಬರು ಆಟಗಾರರು

ಬೆಂಗಳೂರು(ಡಿ.29): ಜನವರಿ 13ರಿಂದ ಆರಂಭಗೊಳ್ಳಲಿರುವ ರಣಜಿ ಟ್ರೋಫಿಗಾಗಿ (Ranji Trophy) ಕರ್ನಾಟಕ ರಾಜ್ಯ ಕ್ರಿಕೆಟ್‌ ಸಮಿತಿ(ಕೆಎಸ್‌ಸಿಎ) ಮಂಗಳವಾರ 28 ಸದಸ್ಯರ ಸಂಭವನೀಯರ ಪಟ್ಟಿಯನ್ನು ಪ್ರಕಟಿಸಿದೆ. ಭಾರತ ತಂಡದಲ್ಲಿ ಆಡುತ್ತಿರುವ ಕೆ.ಎಲ್‌.ರಾಹುಲ್‌(KL Rahul) , ಮಯಾಂಕ್‌ ಅಗರ್‌ವಾಲ್‌ (Mayank Agarwal) ಹೆಸರು ಸಹ ಪಟ್ಟಿಯಲ್ಲಿದೆ. ಕೆಲ ಅಂಡರ್‌-19 ಆಟಗಾರರಿಗೂ ಸ್ಥಾನ ದೊರೆತಿದೆ. ಕರ್ನಾಟಕ ಕ್ರಿಕೆಟ್‌ ತಂಡವು ಜನವರಿ 13ರಂದು ಕೋಲ್ಕತದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉತ್ತರಖಂಡ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮಾಜಿ ಚಾಂಪಿಯನ್‌ ಕರ್ನಾಟಕ ತಂಡವು ಎಲೈಟ್ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಡೆಲ್ಲಿ, ಮುಂಬೈ. ಹೈದರಾಬಾದ್, ಮಹಾರಾಷ್ಟ್ರ ಹಾಗೂ ಉತ್ತರಖಂಡ ತಂಡವು ಸ್ಥಾನ ಪಡೆದಿವೆ. 

ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವು ಜನವರಿ 23ರಿಂದ ಆರಂಭವಾಗಲಿದ್ದು, ಕೆ.ಎಲ್. ರಾಹುಲ್ ಹಾಗೂ ಮಯಾಂಕ್‌ ಅಗರ್‌ವಾಲ್‌, ರಣಜಿ ಟೂರ್ನಿಯ ಗ್ರೂಪ್ ಹಂತದ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದು, ಅ ಬಳಿಕ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಕರ್ನಾಟಕ ತಂಡವು ಬಹುತೇಕ ತಾರಾ ಆಟಗಾರರಿಂದ ಕೂಡಿದ್ದು, ಮನೀಶ್ ಪಾಂಡೆ(Manish Pandey), ದೇವದತ್ ಪಡಿಕ್ಕಲ್ (Devdutt Padikkal), ಕರುಣ್ ನಾಯರ್ (Karun Nair), ಪ್ರಸಿದ್ಧ್ ಕೃಷ್ಣ ಅವರ ಲಭ್ಯತೆ ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

ಕರ್ನಾಟಕ ಕ್ರಿಕೆಟ್ ತಂಡವು (Karnataka Cricket Team) ಇತ್ತೀಚೆಗಷ್ಟೆ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ (Syed Mushtaq Ali Trophy) ಹಾಗೂ ವಿಜಯ್ ಹಜಾರೆ ಟೂರ್ನಿಗಳಲ್ಲಿ (Vijay Hazare Trophy) ಉತ್ತಮ ಪ್ರದರ್ಶನ ತೋರಿತ್ತಾದರೂ ಕಪ್‌ ಗೆಲ್ಲಲು ವಿಫಲವಾಗಿತ್ತು. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವು ಫೈನಲ್‌ನಲ್ಲಿ ನೆರೆಯ ತಮಿಳುನಾಡು ತಂಡಕ್ಕೆ ಶರಣಾಗಿತ್ತು. ಇನ್ನು ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸಹಾ ಕರ್ನಾಟಕ ತಂಡವು, ತಮಿಳುನಾಡು ಎದುರು ಮುಗ್ಗರಿಸಿತ್ತು.

ಸಂಭವನೀಯರ ಪಟ್ಟಿ: ಕೆ.ಎಲ್ ರಾಹುಲ್‌, ಮಯಾಂಕ್ ಅಗರ್‌ವಾಲ್‌, ಮನೀಶ್ ಪಾಂಡೆ, ಕರುಣ್ ಪಾಂಡೆ‌, ದೇವದತ್ ಪಡಿಕ್ಕಲ್‌, ರವಿಕುಮಾರ್ ಸಮರ್ಥ್‍, ನಿಶ್ಚಲ್‌, ಅಭಿನವ್‌ ಮನೋಹರ್, ಸಿದ್ಧಾರ್ಥ್‍, ಅನೀಶ್‌, ಅನೀಶ್ವರ್‌, ವಿಶಾಲ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಸುಚಿತ್‌, ಪ್ರವೀಣ್‌ ದುಬೆ, ಕಾರ್ಯಪ್ಪ, ರಿತೇಶ್‌, ಶುಭಾಂಗ್‌, ಪ್ರಸಿಧ್ ಕೃಷ್ಣ, ರೋನಿತ್ ಮೋರೆ‌, ವೈಶಾಖ್‌, ವೆಂಕಟೇಶ್‌, ವಿದ್ಯಾಧರ್ ಪಾಟಿಲ್‌, ಶರತ್‌ ಶ್ರೀನಿವಾಸ್‌, ಶರತ್‌ ಬಿ.ಆರ್‌, ಕೃತಿಕ್‌ ಕೃಷ್ಣ, ಚಿನ್ಮಯ್‌.

ಅಂಡರ್‌-19 ಕ್ರಿಕೆಟ್‌ ಪಂದ್ಯದ ವೇಳೆ ಕೋವಿಡ್‌ ಕೇಸ್‌ ಪತ್ತೆ: ಪಂದ್ಯ ರದ್ದು!

ಶಾರ್ಜಾ: ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿರುವುದು ತಡವಾಗಿ ಬೆಳಕಿಗೆ ಬಂದ ಕಾರಣ, ಪಂದ್ಯವನ್ನು ಮೊಟಕುಗೊಳಿಸಿದ ಪ್ರಸಂಗ ಮಂಗಳವಾರ ನಡೆದಿದೆ. ಬಾಂಗ್ಲಾದ ಇನ್ನಿಂಗ್ಸ್‌ನಲ್ಲಿ 32.4 ಓವರ್‌ ಆಟ ನಡೆದಿತ್ತು. 

World Record Ducks: ಅಬ್ಬಬ್ಬಾ...2021ರಲ್ಲಿ ಸೊನ್ನೆ ಸುತ್ತೋದ್ರಲ್ಲೇ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ವಿಶ್ವದಾಖಲೆ!

ಕೋವಿಡ್‌ ಪರೀಕ್ಷಾ ವರದಿ ಬರುವ ಮೊದಲೇ ಆಟ ಶುರುವಾಗಿತ್ತು. ಪಂದ್ಯದ ನಡುವೆ ಬಂದ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಕಾರಣ ಪಂದ್ಯ ರದ್ದುಗೊಳಿಸಲಾಯಿತು. ನೆಟ್‌ ರನ್‌ರೇಟ್‌ ಆಧಾರದಲ್ಲಿ ಬಾಂಗ್ಲಾ, ‘ಬಿ’ ಗುಂಪಲ್ಲಿ ಮೊದಲ ಸ್ಥಾನ ಪಡೆದಿದ್ದು ಸೆಮೀಸ್‌ನಲ್ಲಿ ಭಾರತವನ್ನು ಎದುರಿಸಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಲಂಕಾ-ಪಾಕಿಸ್ತಾನ ಸೆಣಸಲಿವೆ.
 

click me!