
ನಾಗ್ಪುರ: ರಣಜಿ ಟ್ರೋಫಿ ಫೈನಲ್ನಲ್ಲಿ ವಿದರ್ಭ ಹಾಗೂ ಕೇರಳ ತಂಡಗಳು ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಪೈಪೋಟಿ ನಡೆಸುತ್ತಿವೆ. ಮೊದಲ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದ ವಿದರ್ಭ, 2ನೇ ದಿನವಾದ ಗುರುವಾರ ಆ ಮೊತ್ತಕ್ಕೆ ಇನ್ನೂ 125 ರನ್ ಸೇರಿಸಿ, 379 ರನ್ ಗೆ ಆಲೌಟ್ ಆಯಿತು.
ಮೊದಲ ದಿನ 138 ರನ್ ಗಳಿಸಿದ್ದ ದಾನಿಶ್ ಮಾಲೇವಾ 153 ರನ್ಗೆ ಔಟಾದರು. ಕೆಳ ಕ್ರಮಾಂಕದಿಂದ ತಕ್ಕಮಟ್ಟಿಗಿನ
ಕೊಡುಗೆ ಮೂಡಿಬಂತು. ಮೊದಲ ಓವರಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಕೇರಳ ಆಘಾತಕ್ಕೊಳಗಾಯಿತು. ರೋಹನ್ ಕುನ್ನು ಮಲ್ ಶೂನ್ಯಕ್ಕೆ ಔಟಾದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಅಕ್ಷಯ್ ಚಂದ್ರನ್ 14 ರನ್ ಗಳಿಸಿ ಔಟಾದರು. 14ಕ್ಕೆ 2 ವಿಕೆಟ್ ಕಳೆದುಕೊಂಡ ತಂಡಕ್ಕೆ ವಿದರ್ಭ ಮೂಲದ, ಈ ಋತುವಿನಲ್ಲಿ ಕೇರಳ ಪರ ಆಡುತ್ತಿರುವ ಆದಿತ್ಯ ಸರ್ವಟೆ ಆಸರೆಯಾದರು. ಅಹಮದ್ ಇಮ್ರಾನ್ (37) ಜೊತೆ ಸೇರಿ 3 ವಿಕೆಟ್ಗೆ 93 ರನ್ ಸೇರಿಸಿದರು. ಆದಿತ್ಯ 66 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. 2ನೇ ದಿನದಂತ್ಯಕ್ಕೆ3 ವಿಕೆಟ್ಗೆ 131 ರನ್ ಗಳಿಸಿರುವ ಕೇರಳ ಇನ್ನೂ 248 ರನ್ ಹಿನ್ನಡೆಯಲ್ಲಿದೆ.
ಸ್ಕೋರ್: ವಿದರ್ಭ 379/10 (ದಾನಿಶ್ 153, ನಚಿಕೇತ್ 32, ನಿಧೀಶ್ 3-61, ಈಡನ್ ಆ್ಯಪಲ್ 3-102), ಕೇರಳ 131/3 (ಆದಿತ್ಯ 66 *, ಇಮ್ರಾನ್ 37, ದರ್ಶನ್ 2-22)
ನಿವೃತ್ತ ರಣಜಿ ಕ್ರಿಕೆಟಿಗರಿಗೆ ಈ ವರ್ಷದಿಂದ ಹೊಸ ಲೀಗ್!
ನವದೆಹಲಿ: ನಿವೃತ್ತ ರಣಜಿ ಆಟಗಾರರನ್ನು ಮಾತ್ರ ಒಳಗೊಂಡ ಫ್ರಾಂಚೈಸಿ ಆಧಾರಿತ ಹೊಸ ಲೀಗ್ ಶುರುವಾಗಲಿದ್ದು, ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್ ಮಾರ್ಗದರ್ಶಕರಾಗಿ ಇರಲಿದ್ದಾರೆ. ಈ ಟೂರ್ನಿಗೆ ಎಪಿಕ್ ವಿಕ್ಟ್ರಿ ಕ್ರಿಕೆಟ್ ಲೀಗ್ ಎಂದು ಹೆಸರಿಡಲಾಗಿದೆ. ಪಂದ್ಯಾವಳಿಯು ಈ ವರ್ಷದ ಜೂನ್ ಅಥವಾ ಜುಲೈನಲ್ಲಿ ನಡೆಯುವ ನಿರೀಕ್ಷೆಯಿದೆ. 6 ತಂಡಗಳು ಭಾಗವಹಿಸಲಿದ್ದು, ಒಟ್ಟು 18 ಪಂದ್ಯಗಳು ನಡೆಯಲಿವೆ. ಲೀಗ್ನಲ್ಲಿ ಭಾಗವಹಿಸಲು ನಿವೃತ್ತ ಆಟಗಾರರ ನೋಂದಣಿ ಪ್ರಕ್ರಿಯೆ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.