
ಬಹಿಷ್ಕಾರದ ಬೆದರಿಕೆಗಳ ನಡುವೆಯೂ, 2026ರ ಟಿ20 ವಿಶ್ವಕಪ್ಗೆ ಪಾಕಿಸ್ತಾನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸಲ್ಮಾನ್ ಅಲಿ ಆಘಾ ನಾಯಕತ್ವದ ತಂಡಕ್ಕೆ ಬಾಬರ್ ಅಜಂ ಮರಳಿದ್ದು, ಮೊಹಮ್ಮದ್ ರಿಜ್ವಾನ್, ಹ್ಯಾರಿಸ್ ರೌಫ್ ಅವರಂತಹ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಇನ್ನು ಬಾಂಗ್ಲಾದೇಶವೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳದಿದ್ದರೇ ನಾವು ಪಾಲ್ಗೊಳ್ಳುವುದಿಲ್ಲ ಎಂದು ಸುಳ್ಳು ಬೆದರಿಕೆಯೊಡ್ಡಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಇದೀಗ ತನ್ನ ನರಿ ಬುದ್ದಿ ತೋರಿದ್ದು, ಬಾಂಗ್ಲಾದೇಶವನ್ನು ನಡು ನೀರಿನಲ್ಲಿ ಕೈಬಿಟ್ಟು, ಟಿ20 ವಿಶ್ವಕಪ್ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿದೆ.
2026ರ ಟಿ20 ವಿಶ್ವಕಪ್ನಿಂದ ಹಿಂದೆ ಸರಿಯುವ ಬೆದರಿಕೆಗಳ ನಡುವೆ ಪಾಕಿಸ್ತಾನ 15 ಸದಸ್ಯರ ತಂಡವನ್ನು ಪ್ರಕಟಿಸಿ ಅಭಿಮಾನಿಗಳಿಗೆ ಸಮಾಧಾನ ನೀಡಿದೆ. ಐಸಿಸಿ ಜೊತೆಗಿನ ವಿವಾದದ ನಡುವೆಯೂ ತಂಡ ಪ್ರಕಟಿಸಿರುವುದು ಪಾಕಿಸ್ತಾನ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಟಿ20 ವಿಶ್ವಕಪ್ನಲ್ಲಿ ಸಲ್ಮಾನ್ ಅಲಿ ಆಘಾ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ನಡೆದ ಏಷ್ಯಾಕಪ್ನಲ್ಲೂ ಸಲ್ಮಾನ್ ಅಲಿ ಆಘಾ ಪಾಕಿಸ್ತಾನದ ನಾಯಕರಾಗಿದ್ದರು.
ಏಷ್ಯಾಕಪ್ನಿಂದ ಕೈಬಿಡಲಾಗಿದ್ದ ಮಾಜಿ ನಾಯಕ ಬಾಬರ್ ಅಜಂ ತಂಡಕ್ಕೆ ಮರಳಿರುವುದು ದೊಡ್ಡ ಸಮಾಧಾನ ತಂದಿದೆ. ಆದರೆ, ಅನುಭವಿ ಆಟಗಾರ ಮೊಹಮ್ಮದ್ ರಿಜ್ವಾನ್ ತಂಡದಲ್ಲಿಲ್ಲ. ಸ್ಪಿನ್ಗೆ ನೆರವಾಗುವ ಭಾರತದ ಪರಿಸ್ಥಿತಿ ಪರಿಗಣಿಸಿ ಅಬ್ರಾರ್, ಉಸ್ಮಾನ್ಗೆ ಸ್ಥಾನ ನೀಡಲಾಗಿದೆ. ಹಿರಿಯ ವೇಗಿ ಹ್ಯಾರಿಸ್ ರೌಫ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿಯ ನಿರ್ಧಾರ. ಹ್ಯಾರಿಸ್ ರೌಫ್ ಜೊತೆಗೆ ಮೊಹಮ್ಮದ್ ವಾಸಿಂ ಜೂನಿಯರ್ ಮತ್ತು ಹಸನ್ ಅಲಿ ಕೂಡ ಸ್ಥಾನ ಕಳೆದುಕೊಂಡಿದ್ದಾರೆ. ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
ಸಲ್ಮಾನ್ ಅಲಿ ಆಘಾ (ನಾಯಕ), ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್.
ಟಿ20 ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸಿದ್ದರೂ, ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಪಾಕ್ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಬಾಂಗ್ಲಾದೇಶವನ್ನು ವಿಶ್ವಕಪ್ನಿಂದ ಹೊರಗಿಟ್ಟ ಐಸಿಸಿ ಕ್ರಮಕ್ಕೆ ಪಾಕಿಸ್ತಾನ ಇನ್ನೂ ಪ್ರತಿಭಟಿಸುತ್ತಿದೆ. ಪ್ರಧಾನಿ ಶೆಹಬಾಜ್ ಷರೀಫ್ ಮರಳಿದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಫೆಬ್ರವರಿ 07: ಪಾಕಿಸ್ತಾನ-ನೆದರ್ಲೆಂಡ್ಸ್
ಫೆಬ್ರವರಿ 10: ಪಾಕಿಸ್ತಾನ - ಯುಎಸ್ಎ
ಫೆಬ್ರವರಿ 15: ಪಾಕಿಸ್ತಾನ- ಭಾರತ
ಫೆಬ್ರವರಿ 18: ಪಾಕಿಸ್ತಾನ- ನಮೀಬಿಯಾ
ಇನ್ನು ಭದ್ರತೆಯ ನೆಪವೊಡ್ಡಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬರೊಲ್ಲವೆಂದು ಪಟ್ಟುಹಿಡಿದಿದ್ದ ಬಾಂಗ್ಲಾದೇಶ ತಂಡವು ಇದೀಗ ಐಸಿಸಿ ಟೂರ್ನಿಯಿಂದಲೇ ಕಿಕೌಟ್ ಮಾಡಲಾಗಿದೆ. ಹೀಗಾಗಿ ಬಾಂಗ್ಲಾದೇಶದ ಬದಲಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ಇನ್ನು ಒಂದು ವೇಳೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ, ಉಗಾಂಡ ತಂಡಕ್ಕೆ ಅವಕಾಶ ಸಿಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.