
ರಾಯ್ಪುರ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ. ಬುಮ್ರಾಗೆ ಈಗ ವಿಶ್ರಾಂತಿಯ ಅಗತ್ಯವಿಲ್ಲ, ಸತತವಾಗಿ ಪಂದ್ಯಗಳನ್ನು ಆಡದೆ ಹೇಗೆ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಒಬ್ಬರನ್ನು ಹೊರಗಿಡುತ್ತೀರಿ ಎಂದು ಕೈಫ್ ಪ್ರಶ್ನಿಸಿದ್ದಾರೆ.
ಕೈಫ್ ಟೀಕೆ
ಜಸ್ಪ್ರೀತ್ ಬುಮ್ರಾ ಇತ್ತೀಚೆಗೆ ಹೆಚ್ಚು ಪಂದ್ಯಗಳನ್ನು ಆಡಿಲ್ಲ ಎಂದು ಕೈಫ್ ಹೇಳಿದ್ದಾರೆ. ಬುಮ್ರಾಗೆ ಯಾಕೆ ವಿಶ್ರಾಂತಿ ನೀಡಲಾಗುತ್ತಿದೆ? ಯಾವ ಕೆಲಸದ ಹೊರೆಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ? ಅವರು ತುಂಬಾ ಪಂದ್ಯಗಳನ್ನು ಆಡಿ ಬಂದಿದ್ದಾರೆಯೇ? ಸಾಕಷ್ಟು ವಿಶ್ರಾಂತಿ ಪಡೆದ ನಂತರವೇ ಅವರು ಬಂದಿದ್ದಾರೆ. ಹಾಗಾಗಿ ಈ ನಿರ್ಧಾರದಲ್ಲಿ ನನಗೆ ಯಾವುದೇ ತರ್ಕ ಕಾಣುತ್ತಿಲ್ಲ ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಅರ್ಷದೀಪ್ ಸಿಂಗ್ಗೆ ವಿಶ್ರಾಂತಿ ನೀಡಿ ಹರ್ಷಿತ್ ರಾಣಾರನ್ನು ಸೇರಿಸಿಕೊಳ್ಳಬಹುದಿತ್ತು, ಆದರೆ ಬುಮ್ರಾರನ್ನು ಕೈಬಿಟ್ಟ ನಿರ್ಧಾರ ತಪ್ಪು ಎಂದು ಅವರು ಹೇಳಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಹರ್ಷಿತ್ ರಾಣಾರನ್ನು ಸೇರಿಸಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಬ್ಯಾಟಿಂಗ್ ಬಲಪಡಿಸಲು ಬುಮ್ರಾರನ್ನು ಹೊರಗಿಡಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ. ಬುಮ್ರಾಗಾಗಿ ತಂಡದ ಸಂಯೋಜನೆ ಬದಲಾಗಬೇಕು, ಸಂಯೋಜನೆಗಾಗಿ ಬುಮ್ರಾರನ್ನು ಬದಲಿಸಬಾರದು ಎಂದು ಕೈಫ್ ಸ್ಪಷ್ಟಪಡಿಸಿದರು.
ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ವಿಶ್ರಾಂತಿ ಬಳಿಕವೇ ತಂಡ ಕೂಡಿಕೊಂಡಿದ್ದರೂ, ಮತ್ತೆ ಬುಮ್ರಾಗೆ ವರ್ಕ್ಲೋಡ್ ನೆಪದಲ್ಲಿ ರೆಸ್ಟ್ ನೀಡಿರುವುದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಸಮಾಧಾನಕ್ಕೆ ಕಾರಣವಾಗಿದೆ.
ಮೊಹಮ್ಮದ್ ಸಿರಾಜ್ ಅವರನ್ನು ಉದಾಹರಣೆಯಾಗಿ ನೀಡಿ ಕೈಫ್, ಬುಮ್ರಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಿರಾಜ್ ಅವಕಾಶ ಸಿಕ್ಕಾಗಲೆಲ್ಲಾ ದೇಶೀಯ ಕ್ರಿಕೆಟ್ ಆಡುತ್ತಾರೆ. ಅವರು ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಆಡುತ್ತಾರೆ. ಆದರೆ ಬುಮ್ರಾ ಹಾಗಲ್ಲ. ಹಾಗಾಗಿ ಒಂದು ಪಂದ್ಯ ಆಡಿದ ತಕ್ಷಣ ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ ಎಂದು ಕೈಫ್ ಹೇಳಿದರು.
ಕಳೆದ ಜನವರಿಯಲ್ಲಿ ಆದ ಗಾಯದ ನಂತರ ಬಿಸಿಸಿಐ ಬುಮ್ರಾ ಫಿಟ್ನೆಸ್ ಬಗ್ಗೆ ಹೆಚ್ಚು ಜಾಗರೂಕವಾಗಿದೆ. ಆದರೆ ಸರಣಿಯ ನಿರ್ಣಾಯಕ ಪಂದ್ಯಗಳಲ್ಲಿಯೂ ಭಾರತದ ಪ್ರಮುಖ ವೇಗಿಯನ್ನು ಹೊರಗಿಡುವುದು ತಂಡದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಅಭಿಮಾನಿಗಳು ಮತ್ತು ಮಾಜಿ ಆಟಗಾರರಲ್ಲಿದೆ. ಸರಣಿಯಲ್ಲಿ ಭಾರತ ಸದ್ಯ 2-0 ಅಂತರದಲ್ಲಿ ಮುನ್ನಡೆಯಲ್ಲಿದೆ. ಭಾನುವಾರ ಗುವಾಹಟಿಯಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ.
ಟಿ20 ಸರಣಿ ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಮೂರನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಈ ಮೂಲಕ ಉಳಿದೆರಡು ಪಂದ್ಯಗಳನ್ನು ತನ್ನ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಲು ಬಳಸಿಕೊಳ್ಳುವ ಸಾಧ್ಯತೆಯಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡುತ್ತಿರುವ ಕೊನೆಯ ಟಿ20 ಸರಣಿ ಇದಾಗಿದೆ. ಕಿವೀಸ್ ಎದುರಿನ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬಳಿಕ ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.