
ಬೆಂಗಳೂರು(ಜೂ.25): ಭಾರತೀಯ ಕ್ರಿಕೆಟ್ ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಡಲ್ಪಟ್ಟಿರುವ ದಿನವೆಂದರೆ ಅದು ಜೂನ್ 25, 1983. ಇಂದಿಗೆ ಭರ್ತಿ 38 ವರ್ಷಗಳ ಹಿಂದೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ದೈತ್ಯ ಕೆರಿಬಿಯನ್ನರನ್ನು ವಿಶ್ವಕಪ್ ಫೈನಲ್ನಲ್ಲಿ ಮಣಿಸಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಏಕದಿನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರೊಂದಿಗೆ ಭಾರತ ಕ್ರಿಕೆಟ್ ತಂಡದ ಭವಿಷ್ಯವೇ ಬದಾಲಾಗಿ ಹೋಯಿತು.
ಮೊದಲೆರಡು ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡ ಕೇವಲ ಒಂದು ಪಂದ್ಯದಲ್ಲಿ ಪಾತ್ರ ಗೆಲುವಿನ ರುಚಿ ಕಂಡಿತ್ತು. ಹೀಗಾಗಿ ಹೆಚ್ಚೇನು ನಿರೀಕ್ಷೆಯಿಲ್ಲದೇ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಅಮೋಘ ಪ್ರದರ್ಶನದ ಮೂಲಕ ಸೆಮಿಫೈನಲ್ ಪ್ರವೇಶಿಸಿತ್ತು. 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ತಂಡ ಗ್ರೂಪ್ ಹಂತದಲ್ಲಿ 6 ಪಂದ್ಯಗಳನ್ನಾಡಿ 4 ಗೆಲುವು ದಾಖಲಿಸುವ ಮೂಲಕ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತ್ತು. ಆತಿಥೇಯ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್ನಲ್ಲಿ ಬಗ್ಗುಬಡಿದು ಫೈನಲ್ ಪ್ರವೇಶಿಸಿತ್ತು ಕಪಿಲ್ ಡೆವಿಲ್ಸ್ ಪಡೆ. ಮೊದಲೆರಡು ಏಕದಿನ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡಕ್ಕೆ ಶಾಕ್ ನೀಡುವ ಮೂಲಕ ಕಪಿಲ್ ದೇವ್ ಪಡೆ ಚಾರಿತ್ರಿಕ ಸಾಧನೆ ಮಾಡಿತ್ತು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ 8 ವರ್ಷ ಭರ್ತಿ; ಧೋನಿ ನಾಯಕತ್ವಕ್ಕೆ ಐಸಿಸಿ ಸೆಲ್ಯೂಟ್
ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 183 ರನ್ಗಳಿಗೆ ಸರ್ವಪತನ ಕಂಡಿತು. ಗಾರ್ಡನ್ ಗ್ರೀನಿಡ್ಜ್, ಡೆಸ್ಮಂಡ್ ಹೇನ್ಸ್, ಸರ್, ವೀವ್ ರಿಚರ್ಡ್ಸ್ ಹಾಗೂ ನಾಯಕ ಕ್ಲೈವ್ ಲಾಯ್ಡ್ ಅವರಂತಹ ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ಹೊಂದಿದ್ದ ವೆಸ್ಟ್ ಇಂಡೀಸ್ ತಂಡ ಅನಾಯಾಸವಾಗಿ ಗೆಲುವು ಸಾಧಿಸಲಿದೆ ಎಂದೇ ಭಾವಿಸಿದ್ದರು. ಆದರೆ ಮೊಯಿಂದರ್ ಅಮರ್ನಾಥ್ ಮಿಂಚಿನ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 140 ರನ್ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು. ಈ ಮೂಲಕ ಟೀಂ ಇಂಡಿಯಾ 43 ರನ್ಗಳ ಅಂತರದ ಗೆಲುವು ದಾಖಲಿಸುವ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಮೆರೆದಾಡಿತು.
1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!
ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಭಾರತ ಕ್ರಿಕೆಟ್ ತಂಡದ ದಿಕ್ಕೇ ಬದಲಾಯಿತು. ಹಲವು ಯುವ ಜನತೆ ಕ್ರಿಕೆಟ್ನತ್ತ ಆಸಕ್ತಿ ಬೆಳೆಸಿಕೊಂಡರು. ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಕಪಿಲ್ ಡೆವಿಲ್ಸ್ ಪಡೆ ಸಾಧಿಸಿ ತೋರಿಸಿತ್ತು. ಈ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ಹಲವು ಹಿರಿಕಿರಿಯ ಕ್ರಿಕೆಟಿಗರು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.