
ತಿರುವನಂತಪುರಂ(ಮೇ.03): ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡಿದ್ದ ಮಾಜಿ ಆಟಗಾರ ಎಸ್.ಶ್ರೀಶಾಂತ್ಗೆ ಕೇರಳ ಕ್ರಿಕೆಟ್ ಸಂಸ್ಥೆ(ಕೆಸಿಎ) ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಫಿಕ್ಸಿಂಗ್ ಮಾಡಿ ಬ್ಯಾನ್ ಆಗಿದ್ದ ಶ್ರೀಶಾಂತ್, ಕೇರಳದ ಆಟಗಾರರನ್ನು ರಕ್ಷಿಸಬೇಕಾಗಿಲ್ಲ ಎಂದು ಕಿಡಿಕಾರಿದೆ. ಸಂಜು ವಿಜಯ್ ಹಜಾರೆ ಆಡಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ಶ್ರೀಶಾಂತ್, ಕೇರಳ ಕ್ರಿಕೆಟ್ ಸಂಸ್ಥೆ ಯಾರನ್ನೂ ಬೆಳೆಯಲು ಬಿಡುತ್ತಿಲ್ಲ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಸಿಎ, ‘ಶ್ರೀಶಾಂತ್ಗೆ ಕೇರಳ ಕ್ರಿಕೆಟ್ ಬಗ್ಗೆ ಅರಿವಿಲ್ಲ. ಇನ್ನೂ ಫಿಕ್ಸಿಂಗ್ ಪ್ರಕರಣದಲ್ಲಿ ಖುಲಾಸೆಗೊಳ್ಳದ ಶ್ರೀಶಾಂತ್ ಕೇರಳದ ಕ್ರಿಕೆಟಿಗರ ರಕ್ಷಣೆಗೆ ಬರುವುದು ಬೇಡ’ ಎಂದಿದೆ. ಅಲ್ಲದೆ ಸಂಸ್ಥೆಯ ಹೆಸರಿಗೆ ಮಸಿ ಬಳಿಯುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.
ಶ್ರೀಶಾಂತ್ಗೆ ವಿವಾದಗಳು ಹೊಸದಲ್ಲ. ಕ್ರಿಕೆಟ್ ಕರಿಯರ್ನಲ್ಲಿ ವಿವಾದಗಳಿಂದಲೇ ಮುಳುಗಿದ್ದಾರೆ. ಸ್ಲೆಡ್ಜಿಂಗ್ ಸೇರಿಂತೆ ಹಲವು ಘಟನೆಗಳು ನಡೆದಿದೆ. ಕ್ರಿಕೆಟ್ನಿಂದ ಹೊರಗುಳಿದ ಬಳಿಕವೂ ಕೇರಳ ಕ್ರಿಕೆಟ್ ಸಂಸ್ಥೆ ಜೊತೆ ಗುದ್ದಾಟ ನಡೆಯುತ್ತಲೇ ಇದೆ.
2023ರಲ್ಲಿ ಶ್ರೀಶಾಂತ್ಗೆ ಲೆಜೆಂಡ್ಸ್ ಲೀಗ್ನಿಂದ ನೋಟಿಸ್
2023ರಲ್ಲಿ ಶ್ರೀಶಾಂತ್ ವಿವಾದಲ್ಲಿ ಸಿಲುಕಿದ್ದರು. ಗೌತಮ್ ಗಂಭೀರ್ ತಮ್ಮನ್ನು ಫಿಕ್ಸರ್ ಎಂದು ಕರೆದಿದ್ದಾರೆ ಎಂದಿದ್ದ ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್(ಎಲ್ಎಲ್ಸಿ) ಆಯುಕ್ತರು ನೋಟಿಸ್ ಜಾರಿಗೊಳಿಸಿತ್ತು. ಶ್ರೀಶಾಂತ್ ಈ ಕುರಿತು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದರು. ಶ್ರೀಶಾಂತ್ ನಿಯಮ ಉಲ್ಲಂಘಿಸಿದ್ದಾಗಿ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದ್ದು, ತಾವು ಹಾಕಿರುವ ವಿಡಿಯೋವನ್ನು ಸಾಮಾಜಿಕ ತಾಣಗಳಿಂದ ಅಳಿಸಿ ಹಾಕುವಂತೆ ಸೂಚಿಸಲಾಗಿತ್ತು. ಈ ನಡುವೆ ಅಂಪೈರ್ಗಳು ಕೂಡಾ ಇಬ್ಬರ ನಡುವಿನ ವಾಗ್ವಾದದ ಬಗ್ಗೆ ವರದಿ ಸಲ್ಲಿಸಿದ್ದು, ‘ಫಿಕ್ಸರ್’ ಎಂದು ಗಂಭೀರ್ ಕರೆದಿದ್ದಾಗಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ಹೇಳಲಾಗಿತ್ತು.
ಕಾನೂನಿನ ಲೋಪದಿಂದಾಗಿ ಫಿಕ್ಸಿಂಗ್ ಕೇಸ್ನಿಂದ ಶ್ರೀಶಾಂತ್ ಬಚಾವಾದರು! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ತನಿಖಾಧಿಕಾರಿ
ಧೋನಿ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀಶಾಂತ್
ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ‘ಐ ಹ್ಯಾವ್ ದಿ ಸ್ಟ್ರೀಟ್ಸ್-ಎ ಕುಟ್ಟಿ ಕ್ರಿಕೆಟ್ ಸ್ಟೋರಿ’ ಎನ್ನುವ ಹೆಸರಿನ ತಮ್ಮ ಆತ್ಮಕಥನವನ್ನು ಬಿಡುಗಡೆಗೊಳಿಸಿದ್ದು, ತಮ್ಮ ಕ್ರಿಕೆಟ್ ಬದುಕಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಎಂ.ಎಸ್.ಧೋನಿಯೊಂದಿಗೆ ನಡೆದ ಪ್ರಸಂಗವೊಂದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಶ್ವಿನ್, ಧೋನಿ ಆಟದ ನಡುವೆಯೂ ಹೇಗೆ ತಮ್ಮ ಎಲ್ಲ ಸಹ ಆಟಗಾರರ ಮೇಲೆ ಕಣ್ಣಿಡುತ್ತಿದ್ದರು ಎನ್ನುವುದನ್ನು ಬರೆದಿದ್ದಾರೆ.‘2010ರಲ್ಲಿ ದ.ಆಫ್ರಿಕಾ ಪ್ರವಾಸದ ವೇಳೆ ಪಂದ್ಯವೊಂದರಲ್ಲಿ ಶ್ರೀಶಾಂತ್ ಮೀಸಲು ಆಟಗಾರರಾಗಿದ್ದರು. ಉಳಿದ ಮೀಸಲು ಆಟಗಾರರ ಜೊತೆ ಡಗೌಟ್ನಲ್ಲಿ ಕೂರುವಂತೆ ಶ್ರೀಶಾಂತ್ಗೆ ಧೋನಿ ಸೂಚಿಸಿದ್ದರು. ಆದರೆ ಶ್ರೀಶಾಂತ್, ಡ್ರೆಸ್ಸಿಂಗ್ ಕೋಣೆಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ನಾನು ಡ್ರಿಂಕ್ಸ್ ತೆಗೆದುಕೊಂಡು ಹೋದಾಗ ಶ್ರೀಶಾಂತ್ ಎಲ್ಲಿ ಎಂದು ಕೇಳಿದರು. ಡ್ರೆಸ್ಸಿಂಗ್ ರೂಂನಲ್ಲಿದ್ದಾರೆ ಎಂದೆ. ರಂಜೀಬ್ ಸರ್ (ತಂಡದ ಮ್ಯಾನೇಜರ್)ಗೆ ಶ್ರೀಶಾಂತ್ರನ್ನು ನಾಳೆಯೇ ಭಾರತಕ್ಕೆ ವಾಪಸ್ ಕಳುಹಿಸಿ ಎಂದು ಹೇಳು ಎಂದು ನನಗೆ ಧೋನಿ ಸೂಚಿಸಿದ್ದರು’ ಎಂದು ಅಶ್ವಿನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.