
ಬೆಂಗಳೂರು(ಏ.01): ಗುಜರಾತ್ ಟೈಟನ್ಸ್ (Gujarat Titans) ವರ್ಸಸ್ ಲಖನೌ ಸೂಪರ್ ಜೈಂಟ್ಸ್ (Lucknow Supergiants) ಪಂದ್ಯ ಸದ್ಯ ಮುಗಿದ ಅಧ್ಯಾಯ. ಆದ್ರೆ ಆ ಅಧ್ಯಾಯದಲ್ಲಿ ಯುವ ಆಟಗಾರನೊಬ್ಬ ಉದಯಿಸಿದ. ಘಟಾನುಘಟಿ ಬೌಲರ್ಗಳನ್ನ ಮೆಟ್ಟಿ ನಿಂತು ಶಹಬ್ಬಾಸ್ ಅನ್ನಿಸಿಕೊಂಡ. ಅದು ಜಸ್ಟ್ ಒಂದೇ ಗೇಮ್ನಿಂದ. ಅದು ಅಂತಿಂತ ಇನ್ನಿಂಗ್ಸ್ ಆಗಿರ್ಲಿಲ್ಲ. ಪ್ರಜರ್ ಟೆಸ್ಟಿಂಗ್ ಚಾಲೆಂಜ್ ಆಗಿತ್ತು. ಕೊನೆಗೆ ಸವಾಲು ಭೇದಿಸಿದ ಆಯುಷ್ ಬದೋನಿ (Ayush Badoni) ಕ್ರಿಕೆಟ್ ಲೋಕದಲ್ಲಿ ಟಾಕ್ ಆಫ್ ಟೌನ್ ಆದರು. ಗುಜರಾತ್ ವಿರುದ್ಧ ಕ್ಲಾಸ್ ಆಂಡ್ ಮಾಸ್ ಇನ್ನಿಂಗ್ಸ್ ಕಟ್ಟಿದ ಬದೋನಿ ಡೆಬ್ಯು ಐಪಿಎಲ್ನಲ್ಲಿ ಅರ್ಧಶತಕ ಗಳಿಸಿ ಎಲ್ಲರ ದಿಲ್ ಗೆದ್ರು. ಆದ್ರೆ ಈ ಯಂಗ್ ಬ್ಯಾಟರ್ ಇಂತಹ ದಿಟ್ಟ ಇನ್ನಿಂಗ್ಸ್ ಕಟ್ಟಿದ್ದೇಗೆ..? ಇವರ ಆಟಕ್ಕೆ ಪ್ರೇರಣೆ ಯಾರು..? ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡಿತ್ತು. ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ದಿಗ್ಗಜ ಆಟಗಾರದ ನೀಡಿದ ಟಿಪ್ಸ್ ಬದೋನಿ ಒಂದೇ ಪಂದ್ಯದಲ್ಲಿ ಸ್ಟಾರ್ ಆಗುವಂತೆ ಮಾಡಿದೆ.
ಗೌತಿ ಕೊಟ್ಟ ಟಿಪ್ಸ್ ಬದೋನಿ ಸಕ್ಸಸ್ ಕಾರಣ:
ಹೌದು, ಅಂದು ಬದೋನಿಯಿಂದ ಸೂಪರ್ ಡೂಪರ್ ಇನ್ನಿಂಗ್ಸ್ ಮೂಡಿ ಬರಲು ಕಾರಣರಾಗಿದ್ದು ಗೌತಮ್ ಗಂಭೀರ್(Gautam Gambhir). ಹೌದು, ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರೋ ಗೌತಿ, ಬದೋನಿಯ ಸಕ್ಸಸ್ ಹಿಂದಿನ ಸೂತ್ರದಾರ. ಗಂಭೀರ್ ತುಂಬಿದ ಆತ್ಮವಿಶ್ವಾಸದ ಮಾತುಗಳೇ ನನ್ನ ಯಶಸ್ವಿಗೆ ಕಾರಣ ಎಂದು ಬದೋನಿ ಹೇಳಿದ್ದಾರೆ. ಐಪಿಎಲ್ ತಂಡಕ್ಕೆ ಆಯ್ಕೆಯಾದ ಬಳಿಕ ಮೆಂಟರ್ ಗೌತಮ್ ಗಂಭೀರ್ ನನಗೆ ಆತ್ಮಸ್ಥೈರ್ಯ ತುಂಬಿದರು. ನೀನು ನಿನ್ನ ಸಹಜ ಆಟ ಆಡು. ಬೌಲರ್ ಬಗ್ಗೆ ತಲೆಕೆಡಿಸಿಕೊಳ್ಳದೇ ಬಾಲ್ ನೋಡಿ ಆಡು ಎಂದು ಹೇಳಿದರು. ಅದರಂತೆ ನಾನು ಬ್ಯಾಟಿಂಗ್ ಮಾಡಿ ಯಶಸ್ವಿಯಾದೆ ಎಂದು ಆಯುಷ್ ಬದೋನಿ ಹೇಳಿದ್ದಾರೆ.
22ರ ಬದೋನಿ ಡೆಬ್ಯು ಪಂದ್ಯದಲ್ಲಿ ತೋರಿದ ಅದ್ಭುತ ಪ್ರದರ್ಶನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ಬದೋನಿ ಓರ್ವ ಟ್ಯಾಲೆಂಟೆಡ್ ಕ್ರಿಕೆಟಿಗ. ಕನ್ಸಿಸ್ಟನ್ಸಿ ಫಾರ್ಮ್ ಮತ್ತು ಫಿಟ್ನೆಸ್ ಕಾಯ್ದುಕೊಂಡ್ರೆ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ. ಅಲ್ಲದೇ ಫ್ಯೂಚರ್ ಸ್ಟಾರ್ ಆಗಿ ಗುರುತಿಸಿಕೊಳ್ಳಲಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
IPL 2022 ಮಿಸ್ಟರ್ 360 ಎಬಿಡಿ ನೆನಪಿಸಿದ 22ರ ಹುಡುಗ ಆಯುಷ್ ಬದೋನಿ..!
ಚೆನ್ನೈ ವಿರುದ್ದವೂ ಅಬ್ಬರಿಸಿದ ಬದೋನಿ:
ಐಪಿಎಲ್ ಚೊಚ್ಚಲ ಪಂದ್ಯದಲ್ಲಿಯೇ ಸ್ಪೋಟಕ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದ ಪ್ರತಿಭಾನ್ವಿತ ಯುವ ಬ್ಯಾಟರ್ ಆಯುಷ್ ಬದೋನಿ, ಇದೀಗ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದವೂ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 210 ರನ್ ಬಾರಿಸುವ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಕಠಿಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಲಖನೌ ಉತ್ತಮ ಆರಂಭ ಪಡೆಯಿತಾದರೂ, ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿತು. 18 ಓವರ್ವರೆಗೂ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಿಡಿತದಲ್ಲಿಯೇ ಇತ್ತು. ಆದರೆ ಎವಿನ್ ಲೆವಿಸ್ ಹಾಗೂ ಆಯುಷ್ ಬದೋನಿ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅದರಲ್ಲೂ ಆಯುಷ್ ಬದೋನಿ ಕೇವಲ 9 ಎಸೆತಗಳಲ್ಲಿ ಎರಡು ಸಿಕ್ಸರ್ ಸಹಿತ 19 ರನ್ ಬಾರಿಸುವ ಮೂಲಕ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.