
ಮುಂಬೈ(ಏ.12): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಸ್ಪೋಟಕ ಅರ್ಧಶತಕದ ನೆರವಿನಿಂದ ಇನ್ನೂ 27 ಎಸೆತ ಬಾಕಿ ಇರುವಂತೆಯೇ ಅನಾಯಾಸವಾಗಿ ಗೆಲುವಿನ ನಗೆ ಬೀರಿದೆ.
ಇನ್ನು ಮುಂಬೈ ಇಂಡಿಯನ್ಸ್ನ ಬ್ಯಾಟರ್ ರೋಹಿತ್ ಶರ್ಮಾ, ಮೈದಾನದಲ್ಲಿ ಕಾಲೆಳೆಯುವುದರಲ್ಲಿ ಎತ್ತಿದ ಕೈ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ಆರ್ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ವೇಳೆ ರೋಹಿತ್ ಶರ್ಮಾ, ಅರ್ಸಿಬಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು ಸ್ಲೆಡ್ಜಿಂಗ್ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
IPL 2024: ಲಖನೌ ಚಾಲೆಂಜ್ ಗೆಲ್ಲುತ್ತಾ ಡೆಲ್ಲಿ ಕ್ಯಾಪಿಟಲ್ಸ್?
"ಇವರಿಗೆ ವಿಶ್ವಕಪ್ ಸೆಲೆಕ್ಷನ್ಗಾಗಿ ಆಡಬೇಕಾಗಿದೆ. ಶಬ್ಬಾಶ್. ಇವರ ತಲೆಯಲ್ಲಿ ವಿಶ್ವಕಪ್ ಅವರದ್ದೇ ಚಿಂತಿಸುತ್ತಿದ್ದಾರೆ. ಶಬ್ಬಾಶ್ ಡಿಕೆ. ನೀವಂತೂ ವಿಶ್ವಕಪ್ ಆಡಲೇಬೇಕು ಡಿಕೆ" ಎಂದು ರೋಹಿತ್ ಶರ್ಮಾ ಹೇಳಿರುವುದು ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ.
ಹೀಗಿತ್ತು ನೋಡು ಆ ಕ್ಷಣ:
ಇನ್ನು 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆಯೇ ಜೂನ್ ತಿಂಗಳಿನಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಈ ಟೂರ್ನಿಗೆ ಮುಂಬರುವ ಮೇ ತಿಂಗಳಿನಲ್ಲಿ ಭಾರತ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಲಿದೆ. ಹೀಗಾಗಿ ಸೆಲೆಕ್ಷನ್ ಕಮಿಟಿ ಗಮನ ಸೆಳೆದು ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹಲವು ಆಟಗಾರರು ಐಪಿಎಲ್ನಲ್ಲಿ ಮಿಂಚುತ್ತಿದ್ದಾರೆ. ಇದೇ ಕಾರಣಕ್ಕೆ ರೋಹಿತ್ ಶರ್ಮಾ, ವಿಕೆಟ್ ಕೀಪರ್ ಬ್ಯಾಟರ್ ಡಿಕೆ ಕಾಲೆಳೆದಿದ್ದಾರೆ.
IPL 2024 ಸೂರ್ಯ-ಕಿಶನ್ ಆರ್ಭಟಕ್ಕೆ ತತ್ತರಿಸಿದ ಆರ್ಸಿಬಿ, ಫಾಫ್ ಪಡೆಗೆ ಹೀನಾಯ ಸೋಲು..!
ಇನ್ನು ಆರ್ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ಫಾಫ್ ಡು ಪ್ಲೆಸಿಸ್, ರಜತ್ ಪಾಟೀದಾರ್ ಹಾಗೂ ದಿನೇಶ್ ಕಾರ್ತಿಕ್ ಸ್ಪೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್ ಬಾರಿಸಿತ್ತು. ದಿನೇಶ್ ಕಾರ್ತಿಕ್ ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 53 ರನ್ ಚಚ್ಚಿದರು.
ಇನ್ನು ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್, ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ವಿಸ್ಪೋಟಕ ಅರ್ಧಶತಕದ ನೆರವಿನಿಂದ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಆರ್ಸಿಬಿ ಸತತ ನಾಲ್ಕನೇ ಸೋಲು ಅನುಭವಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.