IPL 2022 ಬಡ ಕ್ರಿಕೆಟಿಗರಿಗಾಗಿ ಹಾಸ್ಟೆ​ಲ್‌ ಕಟ್ಟುತ್ತಿರುವ ರಿಂಕು ಸಿಂಗ್‌! ಸೆಲ್ಯೂಟ್‌ ಮ್ಯಾನ್

Published : Apr 18, 2023, 11:23 AM IST
IPL 2022 ಬಡ ಕ್ರಿಕೆಟಿಗರಿಗಾಗಿ ಹಾಸ್ಟೆ​ಲ್‌ ಕಟ್ಟುತ್ತಿರುವ ರಿಂಕು ಸಿಂಗ್‌! ಸೆಲ್ಯೂಟ್‌ ಮ್ಯಾನ್

ಸಾರಾಂಶ

ಮತ್ತೊಮ್ಮೆ ಕ್ರಿಕೆಟ್‌ ಅಭಿಮಾನಿಗಳ ಮನಗೆದ್ದ ರಿಂಕು ಸಿಂಗ್ ಬಡಮಕ್ಕಳ ಕ್ರಿಕೆಟ್‌ಗಾಗಿ 50 ಲಕ್ಷದ ಹಾಸ್ಟೆಲ್ ಕಟ್ಟುತ್ತಿರುವ ಕೆಕೆಆರ್ ಸ್ಟಾರ್ ಕ್ರಿಕೆಟಿಗ ಐಪಿಎಲ್ ಟೂರ್ನಿ ಬಳಿಕ ರಿಂಕು ಸಿಂಗ್ ಅವರಿಂದ ಹಾಸ್ಟೆಲ್ ಉದ್ಘಾಟನೆ

ಅಲಿ​ಗ​ಢ​(​ಏ.18​): ಇತ್ತೀ​ಚೆ​ಗಷ್ಟೇ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ಕೊನೆ 5 ಎಸೆ​ತ​ಗ​ಳಲ್ಲಿ 5 ಸಿಕ್ಸರ್‌ ಸಿಡಿಸಿ ಸುದ್ದಿ​ಯಾ​ಗಿದ್ದ ಐಪಿ​ಎ​ಲ್‌ನ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಸ್ಪೋಟಕ ಬ್ಯಾಟರ್ ರಿಂಕು ಸಿಂಗ್‌, ಬಡ ಕ್ರಿಕೆಟಿಗರ ಕನಸಿಗೆ ನೀರೆರೆಯಲು ಹೊಸ ಹಾಸ್ಟೆಲ್‌ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆ​ದಿ​ದ್ದಾರೆ.

ತೀರಾ ಬಡ ಕುಟುಂಬ​ದಿಂದ ಬಂದಿ​ರುವ 25 ವರ್ಷದ ರಿಂಕು ಈಗಷ್ಟೇ ಆರ್ಥಿ​ಕ​ವಾಗಿ ಸ್ವಾವ​ಲಂಬಿ​ಯಾ​ಗು​ತ್ತಿದ್ದು, ಇದರ ನಡು​ವೆಯೇ 50 ಲಕ್ಷ ರುಪಾಯಿಗೂ ಹೆಚ್ಚು ಖರ್ಚು ಮಾಡಿ ಅಲಿ​ಗಢ ನಗ​ರ​ದಲ್ಲಿರುವ ತಾವು ಕಲಿತ ಕ್ರಿಕೆಟ್‌ ಅಕಾಡೆಮಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಉಳಿ​ದು​ಕೊ​ಳ್ಳ​ಬ​ಹು​ದಾದ ಹೊಸ ಹಾಸ್ಟೆಲ್‌ ನಿರ್ಮಿ​ಸುತ್ತಿದ್ದಾರೆ. ಹೊಸ ಪೆವಿ​ಲಿ​ಯನ್‌, ಶೌಚಾಲಯ ಕೂಡಾ ನಿರ್ಮಾ​ಣ​ವಾ​ಗು​ತ್ತಿದೆ. 

‘3 ತಿಂಗಳ ಹಿಂದೆ ಕೆಲಸ ಆರಂಭ​ಗೊಂಡಿದ್ದು, ಕೆಕೆ​ಆರ್‌ ತಂಡ ಕೂಡಿ​ಕೊ​ಳ್ಳುವ ವರೆ​ಗೂ ಸ್ವತಃ ರಿಂಕು ಕಾಮ​ಗಾರಿ ಪರಿಶೀಲಿಸುತ್ತಿದ್ದರು. ಐಪಿ​ಎಲ್‌ ಮುಕ್ತಾ​ಯ​ಗೊಂಡ ಬಳಿಕ ರಿಂಕು ಸಿಂಗ್ ಈ ಹಾಸ್ಟೆಲ್‌ ಉದ್ಘಾ​ಟನೆ ಮಾಡ​ಲಿ​ದ್ದಾರೆ’ ಎಂದು ಅವರ ಬಾಲ್ಯದ ಕೋಚ್‌ ಮಸೂದ್‌ ಝಫರ್‌ ತಿಳಿ​ಸಿ​ದ್ದಾರೆ. 2018ರಲ್ಲಿ ರಿಂಕು ಅವರನ್ನು ಕೆಕೆ​ಆರ್‌ 80 ಲಕ್ಷ ರುಪಾಯಿ ನೀಡಿ ಖರೀ​ದಿ​ಸಿ​ತ್ತು.

7 ಸದಸ್ಯರ ಕುಟುಂಬ:

ರಿಂಕು ಅವರದ್ದು 7 ಸದಸ್ಯರ ಕುಟುಂಬ. ತಂದೆ, ತಾಯಿ ಜತೆ ರಿಂಕುಗೆ ನಾಲ್ವರು ಸಹೋದರರಿದ್ದಾರೆ. ತಂದೆ ಖಾನ್‌ಚಾಂದ್‌ ಗೃಹಬಳಕೆ ಗ್ಯಾಸ್‌ ಸಿಲಿಂಡರ್‌ಗಳ ಡೆಲಿವರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ರಿಂಕು ಹಾಗೂ ಕುಟುಂಬಕ್ಕೆ ಜೀವನ ಸಾಗಿಸುವುದು ಕಷ್ಟವಾಗಿತ್ತು. ಆದರೆ ಛಲ ಬಿಡದ ರಿಂಕು ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲ ಕುಟುಂಬದವರ ಜೀವನವನ್ನೂ ಬದಲಿಸಿದ್ದಾರೆ.

ಕಸ ಗುಡಿಸುವ ಕೆಲಸಕ್ಕೆ ಹೋಗ್ಬೇಕಿತ್ತು!:

ರಿಂಕು 8-9 ವರ್ಷಗಳ ಹಿಂದೆ ಉತ್ತರ ಪ್ರದೇಶ ಅಂಡರ್‌-16 ತಂಡದಲ್ಲಿ ಆಡುತ್ತಿದ್ದ ಸಮಯ. ಕುಟುಂಬ ನಿರ್ವಹಣೆಗೆ ಐವರು ಸಹೋದರರು ಸಿಕ್ಕ ಸಣ್ಣ ಸಣ್ಣ ಕೆಲಸಗಳನ್ನು ಮಾಡುತ್ತಾ ತಂದೆಗೆ ನೆರವಾಗುತ್ತಿದ್ದರು. ಆ ಸಮಯದಲ್ಲಿ ಅವರ ಸಹೋದರನೊಬ್ಬ ರಿಂಕುಗೆ ಕಸ ಗುಡಿಸುವ ಕೆಲಸವೊಂದಕ್ಕೆ ಸೇರಿಸಿದ್ದರಂತೆ. ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ರಿಂಕು ಈ ವಿಷಯವನ್ನು ಬಹಿರಂಗಪಡಿಸಿದ್ದರು. ‘ಟ್ಯೂಷನ್‌ ಸೆಂಟರ್‌ನಲ್ಲಿ ನೀನು ಕಸ ಗುಡಿಸಿ, ನೆಲ ಒರೆಸುತ್ತೀಯ ಎಂದು ಯಾರ ಬಳಿಯೂ ಹೇಳುವ ಅಗತ್ಯವಿಲ್ಲ. ನಿತ್ಯ ಬೆಳಗ್ಗೆ ನಿನ್ನ ಪಾಡಿಗೆ ಹೋಗಿ ಕೆಲಸ ಮುಗಿಸಿ ಬಂದರಾಯಿತು. ಯಾರಿಗೂ ವಿಷಯ ತಿಳಿಯುವುದಿಲ್ಲ’ ಎಂದು ರಿಂಕು ಸಿಂಗ್‌ರ ತಂದೆ ಅವರಿಗೆ ಹೇಳಿದ್ದರಂತೆ. ಆದರೆ ರಿಂಕುಗೆ ಆ ಕೆಲಸ ಇಷ್ಟವಿರಲಿಲ್ಲ. ಮಗ ಕೆಲಸಕ್ಕೆ ಕೈ ಜೋಡಿಸದೆ ಕ್ರಿಕೆಟ್‌ ಆಡುವುದಕ್ಕೆ ತಂದೆ ಒಪ್ಪುತ್ತಿರಲಿಲ್ಲ.

IPL 2023: ವೆಂಕಟೇಶ್‌ ಆಯ್ಯರ್‌ ಸಿಡಿಸಿದ ಶತಕ ಸೆಲೆಬ್ರೆಟ್‌ ಮಾಡಿದ ಸುಹಾನ ಖಾನ್‌

ಕೊನೆಗೆ ಅಲಿಗಢದ ಪ್ರತಿಷ್ಠಿತ ಶಾಲೆಯೊಂದು ಶಾಲಾ ವಿಶ್ವಕಪ್‌ ಆಯೋಜಿಸಿದಾಗ ಅದರಲ್ಲಿ ಪಾಲ್ಗೊಂಡಿದ್ದ ರಿಂಕು, ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿ ಬೈಕ್‌ವೊಂದನ್ನು ಬಹುಮಾನವಾಗಿ ಪಡೆದರು. ಆ ಟೂರ್ನಿಯಲ್ಲಿ ರಿಂಕು ಆಟವನ್ನು ನೋಡಿದ್ದ ಖಾನ್‌ಚಾಂದ್‌ಗೆ ತಮ್ಮ ಮಗನ ಪ್ರತಿಭೆಯ ಅರಿವಾಗಿದ್ದೇ ಆಗ. ಆ ನಂತರ ರಿಂಕು ಅವರ ಕನಸಿಗೆ ಖಾನ್‌ಚಾಂದ್‌ ಅಡ್ಡಿಯಾಗಲಿಲ್ಲ.

ಕ್ರಿಕೆಟ್‌ ಹಾದಿ ಸುಗಮವಾಗಿರಲಿಲ್ಲ:

2 ಬಾರಿ ಉತ್ತರ ಪ್ರದೇಶ ಅಂಡರ್‌-16 ಟ್ರಯಲ್ಸ್‌ನಲ್ಲಿ ಕಡೆಗಣಿಸಲ್ಪಟ್ಟಿದ್ದ ರಿಂಕು, ಕ್ರಿಕೆಟ್‌ ಬಿಟ್ಟುಬಿಡುವ ಬಗ್ಗೆಯೂ ಚಿಂತಿಸಿದ್ದರಂತೆ. ಆದರೆ 2012ರ ವಿಜಯ್‌ ಮರ್ಚೆಂಟ್‌ ಟ್ರೋಫಿಯ ಪಂದ್ಯವೊಂದರಲ್ಲಿ 154 ರನ್‌ ಸಿಡಿಸಿದ ಬಳಿಕ ರಿಂಕು ಆತ್ಮವಿಶ್ವಾಸ ವೃದ್ಧಿಸಿತು. ಕೆಲವೇ ವರ್ಷಗಳಲ್ಲಿ ಅವರು ಯು.ಪಿ. ಅಂಡರ್‌-19 ತಂಡಕ್ಕೆ ಕಾಲಿಟ್ಟು ಆ ಬಳಿಕ ನೇರವಾಗಿ ಯು.ಪಿ. ಏಕದಿನ ತಂಡಕ್ಕೆ ಆಯ್ಕೆಯಾದರು. ಅಲ್ಲಿಂದಾಚೆಗೆ ಹಿಂದಿರುಗಿ ನೋಡಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌