* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕುಲ್ದೀಪ್ ಯಾದವ್ ಮಿಂಚಿಂಗ್
* 4 ಪಂದ್ಯಗಳನ್ನಾಡಿ 10 ವಿಕೆಟ್ ಕಬಳಿಸಿ ಮಿಂಚಿರುವ ಚೈನಾಮನ್ ಸ್ಪಿನ್ನರ್
* ಕೆಕೆಆರ್ ವಿರುದ್ದವೇ 4 ವಿಕೆಟ್ ಕಬಳಿಸಿದ ಲೆಗ್ ಸ್ಪಿನ್ನರ್
ಮುಂಬೈ(ಏ.13): ಎಲ್ಲಿ ಸೋತಿದ್ದೇವೆ ಅಲ್ಲೇ ನಿಂತು ಸಾಧಿಸಬೇಕು. ಯಾರು ನಿನ್ನನ್ನು ನಿರ್ಲಕ್ಷಿಸ್ತಾರೋ ಅವರ ಮುಂದೆನೇ ತಲೆಯೆತ್ತಿ ನಿಲ್ಲಬೇಕು. ಇದು ಯಾವುದೋ ಸಿನಿಮಾದ ಡೈಲಾಗ್ ಅಲ್ಲ . ಕುಲ್ದೀಪ್ ಯಾದವ್ (Kuldeep Yadav) ಅನ್ನೋ ಚೈನಾಮ್ಯಾನ್ ಸ್ಪಿನ್ನರ್ ತನಗಾದ ಅವಮಾನಕ್ಕೆ ಕಂಡುಕೊಂಡ ಆನ್ಸರ್ ಇದು. ಕಳೆದ ಎರಡು ಐಪಿಎಲ್ ಸೀಸನ್ ಕುಲ್ದೀಪ್ ಯಾದವ್ಗೆ ಹೆಚ್ಚು ಕಹಿ ಉಣಬಡಿಸಿತ್ತು. ಹಲ್ಲಿದ್ದವರಿಗೆ ಕಡಲೆ ಇರಲ್ಲ, ಕಡಲೆ ಇದ್ದವರಿಗೆ ಹಲ್ಲು ಇರಲ್ಲ ಅನ್ನೋ ಪರಿಸ್ಥಿತಿ ಬಂದೊದಗಿತ್ತು. ಕೆಕೆಆರ್ (Kolkata Knight Riders) ತಂಡದಲ್ಲಿದ್ದ ಮಿಸ್ಟ್ರಿ ಸ್ಪಿನ್ನರ್ ಅಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಾಗಿದ್ರು. 2020 ಹಾಗೂ 2021ರಲ್ಲಿ ಟ್ಯಾಲೆಂಟ್ಗೆ ತಕ್ಕಂತೆ ಚಾನ್ಸ್ ಸಿಗದೇ ಸಾಕಷ್ಟು ನೊಂದಿದ್ರು.
2021ರಲ್ಲಿ ಒಂದೂ ಚಾನ್ಸ್ ಕೊಡದೇ ಅವಮಾನಿಸಿತ್ತು ಕೆಕೆಆರ್:
ಹೌದು, ಕುಲ್ದೀಪ್ ಯಾದವ್ 13 ಮತ್ತು 14ನೇ ಐಪಿಎಲ್ ಸೀಸನ್ನಲ್ಲಿ ಕೆಕೆಆರ್ ತಂಡದ ಭಾಗವಾಗಿದ್ರು. ಆದ್ರೆ ಇದ್ರೂ ಇಲ್ಲದಂತಾಗಿದ್ರು. ಯಾಕಂದ್ರೆ ಕೆಕೆಆರ್ ಫ್ರಾಂಚೈಸಿ ಕುಲ್ದೀಪ್ ಯಾದವ್ರನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗೊಂದು, ಹೀಗೊಂದು ಚಾನ್ಸ್ ನೀಡ್ತು. ಕೊನೆಗೆ ಸೀಸನ್ ಎಂಡ್ ಆದ್ರೂ ಮಿಸ್ಟ್ರಿ ಸ್ಪಿನ್ನರ್ ಆಡಿದ್ದು ಜಸ್ಟ್ 5 ಪಂದ್ಯಗಳನ್ನ ಮಾತ್ರ. ಅಷ್ಟರ ಮಟ್ಟಿಗೆ ಕೆಕೆಆರ್ ಯುವ ಬೌಲರ್ನನ್ನ ಕಡೆಗಣಿಸ್ತು.
ಹೋಗ್ಲಿ 2021ರಲ್ಲಾದ್ರು ಕುಲ್ದೀಪ್ ಯಾದವ್ರನ್ನ ಸಂಪೂರ್ಣ ಬಳಸಿಕೊಳ್ತಾರೆ ಅಂದ್ರೆ ಅದು ಸುಳ್ಳಾಯ್ತು. ಇಡೀ ಟೂರ್ನಿ ಪೂರ್ತಿ ಬೆಂಚ್ಗೆ ಸೀಮಿತವಾದ್ರು. ವಾಟರ್ಬಾಯ್ ಆಗಿ ಓಡಾಡಿದ್ದೇ ಬಂತು, ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲು ಅವಕಾಶ ಸಿಗ್ಲಿಲ್ಲ. ಸಪ್ಪೆ ಮೊರೆಯೊಂದಿಗೆ ಟೂರ್ನಿಗೆ ಗುಡ್ಬೈ ಹೇಳಿದ್ರು. ಇದರಿಂದ ಕುಲ್ದೀಪ್ ಅಕ್ಷರಶಃ ಝರ್ಜರಿತರಾಗಿದ್ರು.
IPL 2022: ಮುಂಬೈ ಇಂಡಿಯನ್ಸ್ಗೂ ಮೆಗಾ ಹರಾಜಿಗೂ ಆಗಿ ಬರಲ್ವಾ..?
ಡೆಲ್ಲಿ ಸೇರಿಕೊಂಡು ಜಬರ್ದಸ್ತ್ ಪರ್ಫಾಮೆನ್ಸ್ :
13 ಮತ್ತು 14ನೇ ಸೀಸನ್ನಲ್ಲಿ ಸೂಕ್ತ ಅವಕಾಶವಿಲ್ಲದೇ ಕಂಗೆಟ್ಟಿದ್ದ ಕುಲ್ದೀಪ್ ಯಾದವ್ 2022ನೇ ಐಪಿಎಲ್ ಅನ್ನ ಸೀರಿಯಸ್ ತೆಗೆದುಕೊಂಡ್ರು. ಡೆಲ್ಲಿ, ಕೆಕೆಆರ್ ಮಾಡದಂತೆ ಆರಂಭಿಕ ಪಂದ್ಯಗಳಿಂದಲೇ ಚೈನಾಮ್ಯಾನ್ ಸ್ಪಿನ್ನರ್ಗೆ ಅವಕಾಶ ನೀಡ್ತು. ಪರಿಣಾಮ ಕುಲ್ದೀಪ್ ಈವರೆಗೆ ಆಡಿದ 4 ಪಂದ್ಯಗಳಲ್ಲೇ 10 ವಿಕೆಟ್ ಕಬಳಿಸಿ ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ. ಕೆಕೆಆರ್ ವಿರುದ್ಧ 4 ವಿಕೆಟ್ ಕಬಳಿಸಿ ಗೆಲುವಿನ ರೂವಾಗಿಯಾಗಿದ್ರು. ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ವಿಕೆಟ್ ಕಳೆದುಕೊಂಡು 215 ರನ್ ಬಾರಿಸಿತ್ತು. ಈ ಗುರಿ ಬೆನ್ನತ್ತಿದ ಬಲಿಷ್ಠ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಕೇವಲ 171 ರನ್ಗಳಿಗೆ ಆಲೌಟ್ ಮಾಡುವಲ್ಲಿ ಕುಲ್ದೀಪ್ ಯಾದವ್ ಪ್ರಮುಖ ಪಾತ್ರವಹಿಸಿದರು. ಒಂದು ವರ್ಷ ಸುಮ್ಮನೆ ಬೆಂಚ್ ಕಾಯುವಂತೆ ಮಾಡಿದ್ದ ಕೆಕೆಆರ್ ವಿರುದ್ದ ಸೇಡು ತೀರಿಸಿಕೊಳ್ಳುವಲ್ಲಿ ಕುಲ್ದೀಪ್ ಯಶಸ್ವಿಯಾಗಿದ್ದಾರೆ.
ಅಲ್ಲಿಗೆ ಯಾವ ಕೆಕೆಆರ್ ತನ್ನನ್ನ ಕಡೆಗಣಿಸಿತ್ತೋ, ಅವರಿಗೆ ಜಬರ್ದಸ್ತ್ ಪರ್ಫಾಮೆನ್ಸ್ನಿಂದ ತಕ್ಕ ಉತ್ತರ ಕೊಟ್ಟಿದ್ದಾರೆ. ನನ್ನಲ್ಲಿ ಇನ್ನೂ ವಿಕೆಟ್ ದಾಹವಿದೆ. ನಾನಿನ್ನೂ ಎದುರಾಳಿಗೆ ತಂಡಕ್ಕೆ ದುಸ್ವಪ್ನರಾಗಿ ಕಾಡಬಲ್ಲೆ ಅನ್ನೋದನ್ನ ಕುಲ್ದೀಪ್ ಯಾದವ್ ಪ್ರೂವ್ ಮಾಡಿದ್ದಾರೆ.