'ಇದು ಸೋಲಲ್ಲ, ಭಾರತಕ್ಕೆ ಆದ ಅವಮಾನ': ಟೀಮ್ ಇಂಡಿಯಾ ಹೀನಾಯ ಸೋಲಿಗೆ ಪಾಕ್ ಮಾಜಿ ಆಟಗಾರರ ಕುಚೋದ್ಯ!

Published : Feb 23, 2026, 07:45 PM IST
Saqlain Mushtaq-Team India

ಸಾರಾಂಶ

Pakistan Players Mock India's Defeat to South Africa ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 76 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲನ್ನು ಪಾಕಿಸ್ತಾನದ ಮಾಜಿ ಆಟಗಾರರಾದ ಸಕ್ಲೈನ್ ಮುಷ್ತಾಕ್, ಶೋಯೆಬ್ ಅಖ್ತರ್ ಮತ್ತು ಉಮರ್ ಗುಲ್ ಸಂಭ್ರಮಿಸಿದ್ದಾರೆ.

ಕರಾಚಿ (ಫೆ.23): ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಪ್ರಮುಖ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅನುಭವಿಸಿದ 76 ರನ್‌ಗಳ ಬೃಹತ್ ಸೋಲು, ಮಾಜಿ ಪಾಕಿಸ್ತಾನಿ ಆಟಗಾರರಿಗೆ ಸಂಭ್ರಮಿಸಲು ದೊಡ್ಡ ಅವಕಾಶ ಮಾಡಿಕೊಟ್ಟಿದೆ. ಭಾರತದ ಈ ಮುಖಭಂಗವನ್ನು ಪಾಕಿಸ್ತಾನದ ಮಾಜಿ ಆಟಗಾರರು ಮನಬಂದಂತೆ ವ್ಯಂಗ್ಯವಾಡಿದ್ದಾರೆ.

"ಭಾರತಕ್ಕೆ ಇದು ಕೇವಲ ಸೋಲಲ್ಲ, ಅವಮಾನ": ಸಕ್ಲೈನ್ ಮುಷ್ತಾಕ್

ಪಾಕಿಸ್ತಾನದ ಖಾಸಗಿ ಟಿವಿ ಚಾನೆಲ್‌ನ ಡಿಬೇಟ್‌ನಲ್ಲಿ ಮಾತನಾಡಿದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್, ಟೀಮ್ ಇಂಡಿಯಾದ ವಿರುದ್ಧ ಕಟುವಾದ ಮಾತುಗಳನ್ನು ಆಡಿದ್ದಾರೆ. "ದಕ್ಷಿಣ ಆಫ್ರಿಕಾದ ಪ್ರತಿಯೊಂದು ತಂತ್ರವೂ ಇಂದು ಫಲ ನೀಡಿದೆ. ಅವರು ಭಾರತವನ್ನು ಹೆಮ್ಮೆಯ ಶಿಖರದಿಂದ ಕೆಳಕ್ಕೆ ಎಳೆದು ತಂದಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವಿಶ್ವದ ನಂಬರ್ 1 ತಂಡವಾದ ಭಾರತವನ್ನು ಹರಿಣಗಳು ಅಕ್ಷರಶಃ ಅವಮಾನಿಸಿವೆ," ಎಂದು ಲೇವಡಿ ಮಾಡಿದ್ದಾರೆ. ಅಹಮದಾಬಾದ್‌ನಲ್ಲಿ ಭಾರತ ಹೊಂದಿದ್ದ ಅಹಂಕಾರವನ್ನೆಲ್ಲ ದಕ್ಷಿಣ ಆಫ್ರಿಕಾ ಮಣ್ಣುಪಾಲು ಮಾಡಿದೆ ಎಂದು ಸಂಭ್ರಮಿಸಿದ್ದಾರೆ.

ಭಾರತದ ದೌರ್ಬಲ್ಯ ಬಯಲು: ಶೋಯೆಬ್ ಅಖ್ತರ್

ಮತ್ತೊಂದೆಡೆ, 'ರಾವಲ್ಪಿಂಡಿ ಎಕ್ಸ್‌ಪ್ರೆಸ್' ಖ್ಯಾತಿಯ ಶೋಯೆಬ್ ಅಖ್ತರ್, ಒತ್ತಡದ ಸಮಯದಲ್ಲಿ ಭಾರತದ ಬ್ಯಾಟಿಂಗ್ ಲೈನ್-ಅಪ್ ಹೇಗೆ ಕುಸಿಯುತ್ತದೆ ಎಂಬುದನ್ನು ಈ ಪಂದ್ಯ ಸಾಬೀತುಪಡಿಸಿದೆ ಎಂದಿದ್ದಾರೆ. "ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರಂತಹ ಆಟಗಾರರು ಒತ್ತಡವನ್ನು ನಿಭಾಯಿಸಲು ವಿಫಲರಾದರು. ಹಾರ್ದಿಕ್ ಪಾಂಡ್ಯ 20ನೇ ಓವರ್ ಎಸೆಯಲು ಸೂಕ್ತವಾದ ಬೌಲರ್ ಕೂಡ ಅಲ್ಲ," ಎಂದು ಅಖ್ತರ್ ಟೀಕಿಸಿದ್ದಾರೆ.

ಉಮರ್ ಗುಲ್ ವಿಶ್ಲೇಷಣೆ

ಮಾಜಿ ವೇಗಿ ಉಮರ್ ಗುಲ್ ಅವರು ಭಾರತದ ಬೌಲಿಂಗ್ ವಿಭಾಗದ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ. ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಸುಲಭವಾಗಿ ಬೇಟೆಯಾಡಿದರು. ಐದನೇ ಬೌಲರ್ ಆಯ್ಕೆಯಲ್ಲಿ ಭಾರತ ತಪ್ಪು ಮಾಡಿತು ಮತ್ತು ದುಬೆ-ಹಾರ್ದಿಕ್ ಜೋಡಿ ದುಬಾರಿಯಾದದ್ದು ಸೋಲಿಗೆ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಪ್ರಮುಖ ಸೂಪರ್‌-8 ಪಂದ್ಯದಲ್ಲಿ 188 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ಕೇವಲ 111 ರನ್‌ಗಳಿಗೆ ಆಲೌಟ್ ಆಗಿ, 76 ರನ್‌ಗಳ ಸೋಲೊಪ್ಪಿಕೊಂಡಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ರನ್‌ಗಳ ವಿಚಾರದಲ್ಲಿ ಭಾರತ ಅನುಭವಿಸಿದ ಅತಿದೊಡ್ಡ ಸೋಲಾಗಿದೆ. ಸೆಮಿಫೈನಲ್ ಹಾದಿ ಕಠಿಣವಾಗಿರುವ ಬೆನ್ನಲ್ಲೇ ಪಾಕ್ ಆಟಗಾರರ ಈ ವ್ಯಂಗ್ಯ ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾ 2 ಪಂದ್ಯ ಗೆದ್ದರೂ ಸೆಮಿಗೇರುವುದು ಗ್ಯಾರಂಟಿ ಇಲ್ಲ! ಭಾರತಕ್ಕೆ ವಿಲನ್ ಆದ ನೆಟ್ ರನ್‌ರೇಟ್!
ಟಿ20 ವಿಶ್ವಕಪ್‌: ವೆಸ್ಟ್‌ಇಂಡೀಸ್‌ಗೂ ಶಾಕ್‌ ನೀಡಿ ಗೆಲ್ಲುತ್ತಾ ಜಿಂಬಾಬ್ವೆ?