Ind vs Eng ರಾಂಚಿಯಲ್ಲಿ ಇಂಗ್ಲೆಂಡ್‌ಗೆ ಸ್ಪಿನ್ ಟೆಸ್ಟ್?

Published : Feb 22, 2024, 02:34 PM IST
Ind vs Eng ರಾಂಚಿಯಲ್ಲಿ ಇಂಗ್ಲೆಂಡ್‌ಗೆ ಸ್ಪಿನ್ ಟೆಸ್ಟ್?

ಸಾರಾಂಶ

ಸಂಪೂರ್ಣವಾಗಿ ಸ್ಪಿನ್ ಸ್ನೇಹಿ ಪಿಚ್‌ನತ್ತ ಭಾರತ ಒಲವು ತೋರಲು ಕಾರಣವೂ ಇದೆ. ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದ ಕಾರಣ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾಗೆ 4ನೇ ಟೆಸ್ಟ್ ನಿಂದ ವಿಶ್ರಾಂತಿ ನೀಡಲಾಗಿದೆ.

ರಾಂಚಿ: ಭಾರೀ ರೋಚಕತೆಯಿಂದ ಸಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಇದುವರೆಗೂ ಮೂರು ಪಂದ್ಯಗಳು ನಡೆದಿದ್ದು, ಯಾವ ಪಂದ್ಯದಲ್ಲೂ ಪಿಚ್ ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೆ ನೆರವಾಗಲಿಲ್ಲ. ಆದರೆ, ರಾಂಚಿಯಲ್ಲಿ ಶುಕ್ರವಾರದಿಂದ ಆರಂಭಗೊಳ್ಳಲಿರುವ 4ನೇ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್ ಸ್ಪಿನ್ ಸ್ನೇಹಿ ಪಿಚ್ ಆಗಿರುವ ಸಾಧ್ಯತೆ ಇದ್ದು, ಈಗಾಗಲೇ ಎರಡೂ ತಂಡಗಳು ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ.

ಸಂಪೂರ್ಣವಾಗಿ ಸ್ಪಿನ್ ಸ್ನೇಹಿ ಪಿಚ್‌ನತ್ತ ಭಾರತ ಒಲವು ತೋರಲು ಕಾರಣವೂ ಇದೆ. ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದ ಕಾರಣ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾಗೆ 4ನೇ ಟೆಸ್ಟ್ ನಿಂದ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಈ ಸರಣಿಯಲ್ಲಿ ಒಟ್ಟು 17 ವಿಕೆಟ್ ಕಬಳಿಸಿ, ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 4ನೇ ಪಂದ್ಯದಲ್ಲಿ ಅವರ ಅನುಪಸ್ಥಿತಿ ಎದುರಾಗದಂತೆ ನೋಡಿಕೊಳ್ಳಲು ಭಾರತಕ್ಕಿರುವ ಉತ್ತಮ ಆಯ್ಕೆ ಎಂದರೆ ಸ್ಪಿನ್ ಪಿಚ್‌ನ ಮೊರೆ ಹೋಗುವುದು.

ಅಕ್ಷರ್ ಕೂಡ ಕಣಕ್ಕೆ?: ಭಾರತ ಈ ಸರಣಿಯ ಮೂರೂ ಪಂದ್ಯಗಳಲ್ಲಿ ತಲಾ ಮೂವರು ಸ್ಪಿನ್ನರ್‌ಗಳನ್ನು ಆಡಿಸಿದೆ. 4ನೇ ಟೆಸ್ಟ್‌ನಲ್ಲಿ ಒಬ್ಬ ಹೆಚ್ಚುವರಿ ಸ್ಪಿನ್ನರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಅಕ್ಷರ್ ಪಟೇಲ್ ಕೂಡ ಕಣಕ್ಕಿಳಿಯಬಹುದು. ಅಕ್ಷರ್ ಕೆಳ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಬಲ ಸಹ ಹೆಚ್ಚಿಸಲಿದ್ದಾರೆ. ಒಂದು ವೇಳೆ ಭಾರತ ನಾಲ್ವರು ಸ್ಪಿನ್ನರ್‌ಗಳು ಆಡಿಸಿದರೆ, ಆಗ ವೇಗದ ಬೌಲಿಂಗ್ ಹೊಣೆ ಮೊಹಮದ್ ಸಿರಾಜ್ ಹೆಗಲಿದೆ ಬೀಳಲಿದೆ.

IPL 2024: ಉದ್ಘಾಟನಾ ಪಂದ್ಯದಲ್ಲಿ ಬದ್ದ ಎದುರಾಳಿ CSK vs RCB ಫೈಟ್..! ಇಂದೇ ಐಪಿಎಲ್ ವೇಳಾಪಟ್ಟಿ ರಿಲೀಸ್

ಇಂಗ್ಲೆಂಡ್‌ಗೂ ಅನುಕೂಲ?: ಸರಣಿಯ ಆರಂಭದಿಂದಲೂ ಇಂಗ್ಲೆಂಡ್ ತಾನು ಭಾರತದ ಸ್ಪಿನ್ ಸವಾಲಿಗೆ ಹೆದರುವುದಿಲ್ಲ ಎಂದು ಹೇಳುತ್ತಲೇ ಬಂದಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದ ಇಂಗ್ಲೆಂಡ್, ನಂತರದ 2 ಪಂದ್ಯಗಳಲ್ಲಿ ಮಂಕಾಗಿದೆ. ಇಂಗ್ಲೆಂಡ್ ಸಹ ಒಬ್ಬ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಿ, ತನ್ನ ವೇಗದ ಬೌಲಿಂಗ್ ಪಡೆಯಲ್ಲೂ ಬದಲಾವಣೆ ಮಾಡಬಹುದು. ಆ್ಯಂಡರ್‌ಸನ್, ಮಾರ್ಕ್ ವುಡ್ ಇಬ್ಬರನ್ನೂ ಹೊರಗಿಟ್ಟು, ವೇಗಿ ಓಲಿ ರಾಬಿನ್ಸನ್‌ರನ್ನು ಆಡಿಸಲಿದೆ ಎಂದು ಹೇಳಲಾಗುತ್ತಿದೆ. ಸ್ಪಿನ್ನರ್ ಶೋಯಬ್
ಬಶೀರ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. 

ಪಿಚ್ ಅಧ್ಯಯನ ನಡೆಸಿದ ಭಾರತ, ಇಂಗ್ಲೆಂಡ್ ತಂಡಗಳು!

ಬುಧವಾರ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆ ಇಂಗ್ಲೆಂಡ್ ಹಾಗೂ ಭಾರತ ತಂಡಗಳು ಪಿಚ್ ಅಧ್ಯಯನ ನಡೆಸಿದವು. ಮೊದಲು ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ, ಆಟಗಾರರಾದ ಜಾನಿ ಬೇರ್‌ಸ್ಟೋವ್, ಜೋ ರೂಟ್ ಹಾಗೂ ಓಲಿ ಪೋಪ್ ಎಲ್ಲಾ ಆಯಾಮಗಳಿಂದಲೂ ಪಿಚ್ ವೀಕ್ಷಣೆ ಮಾಡಿದರು. ಇಂಗ್ಲಿಷ್ ಪಡೆ ಪಿಚ್ ವೀಕ್ಷಣೆಯಲ್ಲಿ ತಲ್ಲೀನಗೊಂಡಿದ್ದನ್ನು ಕಂಡು ಮೈದಾನ ಸಿಬ್ಬಂದಿಗೇ ಅಚ್ಚರಿಯಾಯಿತು. ಬಳಿಕ ಭಾರತದ ಕೋಚ್ ರಾಹುಲ್ ದ್ರಾವಿಡ್ ಸಹ ಹಲವು ನಿಮಿಷಗಳ ಕಾಲ ಪಿಚ್ ವೀಕ್ಷಣೆಯಲ್ಲಿ ತೊಡಗಿದರು. 

ರಣಜಿ ಟ್ರೋಫಿ ಗೆಲ್ಲಿ, BMW ಪಡೀರಿ: ಆಟಗಾರರಿಗೆ ಹೈದರಾಬಾದ್‌ ಬಂಪರ್ ಆಫರ್‌!

ಪಿಚ್‌ನ ಪಕ್ಕದಲ್ಲೇ ನಡೆದು ಹೋದ ದ್ರಾವಿಡ್, ಥಟ್ಟನೆ ಒಂದೆಡೆ ನಿಂತು ಪಿಚ್‌ನ ಒಂದು ಭಾಗವನ್ನು ಬಹಳಷ್ಟು ಹೊತ್ತು ಸೂಕ್ಷ್ಮವಾಗಿ ಗಮನಿಸಿದರು. ಬಳಿಕ ಕ್ಯುರೇಟರ್‌ಗಳನ್ನು ಕರೆದು ಚರ್ಚಿಸಿದರು. ದ್ರಾವಿಡ್ ಹೊರನಡೆಯುತ್ತಿದ್ದಂತೆ ಕ್ಯುರೇಟರ್ ಮೈದಾನ ಸಿಬ್ಬಂದಿಗೆ ಪಿಚ್‌ಗೆ ಹೊದಿಕೆ ಹೊದಿಸುವಂತೆ ಸೂಚಿಸಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?