
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೆಸ್ಟ್ ಕ್ರಿಕೆಟ್ನಲ್ಲಿ ತಂಡದ ವೇಗದ ಬೌಲಿಂಗ್ ವಿಭಾಗದ ಭವಿಷ್ಯಕ್ಕಾಗಿ ದೊಡ್ಡ ಬದಲಾವಣೆಗೆ ಸಿದ್ಧತೆ ನಡೆಸುತ್ತಿದೆ. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಗಳು ಮತ್ತು ಅವರ ಮೇಲಿನ ಕಾರ್ಯಭಾರ (Workload) ಗಮನದಲ್ಲಿಟ್ಟುಕೊಂಡು ಹೊಸ ವೇಗಿಗಳನ್ನು ಬೆಳೆಸಲು ಬಿಸಿಸಿಐ ಮುಂದಾಗಿದೆ. ಒಂದು ವೇಳೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ತಲುಪುವ ಅವಕಾಶ ಕಳೆದುಕೊಂಡರೆ ಯುವ ವೇಗಿಗಳಾದ ತುಷಾರ್ ದೇಶಪಾಂಡೆ, ಗುರ್ಜಪ್ನೀತ್ ಸಿಂಗ್ ಮತ್ತು ನಚಿಕೇತ್ ಭೂತೆಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತಿದೆ.
ಬುಮ್ರಾ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರೂ ನಿರಂತರ ಗಾಯದ ಸಮಸ್ಯೆಗಳು ಚಿಂತೆಯುಂಟುಮಾಡಿವೆ. ಮುಂಬರುವ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಅವರ ಮೇಲಿನ ಒತ್ತಡ ನಿಭಾಯಿಸುವುದು ಅತ್ಯಗತ್ಯ. ಬುಮ್ರಾ ಅವರ ವಯಸ್ಸು ಮತ್ತು ಲಭ್ಯತೆಯನ್ನು ಪರಿಗಣಿಸಿ ಅವರ ಅನುಪಸ್ಥಿತಿಯನ್ನು ತುಂಬಬಲ್ಲ ಬಲಿಷ್ಠ ಬೌಲಿಂಗ್ ಪಡೆಯನ್ನು ಸಿದ್ಧಪಡಿಸುವುದು ಬಿಸಿಸಿಐ ಗುರಿ. ಪಿಚ್ನಿಂದ ಉತ್ತಮ ವೇಗ ಮತ್ತು ಬೌನ್ಸ್ ಪಡೆಯುವ ಸಾಮರ್ಥ್ಯವಿರುವ ಬೌಲರ್ಗಳ ಮೇಲೆ ಆಯ್ಕೆದಾರರು ಕಣ್ಣಿಟ್ಟಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ.. ನ್ಯೂಜಿಲೆಂಡ್ ಪ್ರವಾಸದ ವೇಳೆಗೆ ಭಾರತದ ಡಬ್ಲ್ಯುಟಿಸಿ (WTC) ಫೈನಲ್ ಕನಸು ದೂರವಾದರೆ ತಕ್ಷಣವೇ ಹೊಸ ವೇಗಿಗಳಾದ ತುಷಾರ್ ದೇಶಪಾಂಡೆ, ಗುರ್ಜಪ್ನೀತ್ ಸಿಂಗ್ ಹಾಗೂ ವಿದರ್ಭದ ನಚಿಕೇತ್ ಭೂತೆ ಅವರಿಗೆ ಅವಕಾಶ ನೀಡಲಾಗುತ್ತದೆ. ನ್ಯೂಜಿಲೆಂಡ್ ಸರಣಿಯಲ್ಲೇ ನಮಗೆ ಡಬ್ಲ್ಯುಟಿಸಿ ಫೈನಲ್ ತಲುಪಲು ಸಾಧ್ಯವಿಲ್ಲ ಎಂಬುದು ಖಚಿತವಾದರೆ ನಾವು ತುಷಾರ್ ದೇಶಪಾಂಡೆ, ಗುರ್ಜಪ್ನೀತ್ ಸಿಂಗ್ ಮತ್ತು ನಚಿಕೇತ್ ಭೂತೆ ಅವರಂತಹ ವೇಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ಈ ಬೌಲರ್ಗಳು ಉತ್ತಮ ವೇಗವನ್ನು ಹೊಂದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಅವಕಾಶ ನೀಡದ ಹೊರತು, ಅವರು ಉನ್ನತ ಮಟ್ಟದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸದ್ಯ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಮತ್ತೊಬ್ಬ ನಂಬಿಕಸ್ಥ ವೇಗಿಯಾಗಿದ್ದಾರೆ. ಆದರೆ ಮೊಹಮ್ಮದ್ ಶಮಿ ಅವರ ಪರಿಸ್ಥಿತಿ ಭಿನ್ನವಾಗಿದೆ. ಸುದೀರ್ಘ ಗಾಯದ ಬಳಿಕ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ, ಶಮಿ ಅವರನ್ನು ಪ್ರಸ್ತುತ ತಂಡದ ಯೋಜನೆಗಳಿಂದ ಹೊರಗಿಡಲಾಗಿದೆ. ಇದು ಶಮಿ ಸದ್ಯಕ್ಕೆ ಬಿಸಿಸಿಐನ ತಕ್ಷಣದ ಆಲೋಚನೆಗಳಲ್ಲಿ ಇಲ್ಲದಿರುವುದನ್ನು ಸೂಚಿಸುತ್ತದೆ.
2024-25ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ 1-3 ಅಂತರದಲ್ಲಿ ಸರಣಿ ಸೋತಾಗ ಬುಮ್ರಾ ಮೇಲಿನ ಅತಿಯಾದ ಅವಲಂಬನೆ ಸ್ಪಷ್ಟವಾಗಿತ್ತು. ಬುಮ್ರಾ ವಿಕೆಟ್ ಪಡೆಯಲು ಸಾಧ್ಯವಾಗದಿದ್ದಾಗ ಭಾರತದ ಬೌಲಿಂಗ್ ವಿಭಾಗವು ತಡಕಾಡಿತು. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 2-2 ಡ್ರಾ ಸಾಧಿಸಿದಾಗ ಬ್ಯಾಟಿಂಗ್ ಪ್ರದರ್ಶನವೇ ಪ್ರಮುಖ ಪಾತ್ರ ವಹಿಸಿತ್ತು. ಆ ಪ್ರವಾಸದಲ್ಲಿ ಬುಮ್ರಾ ಅನುಪಸ್ಥಿತಿಯ ಹೊರತಾಗಿಯೂ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ನೀಡಿರಲಿಲ್ಲ. ಅನ್ಶುಲ್ ಕಾಂಬೋಜ್ ಅವರಿಗೆ ಒಂದು ಟೆಸ್ಟ್ನಲ್ಲಿ ಅವಕಾಶ ನೀಡಲಾಯಿತಾದರೂ ನಂತರ ಅವರನ್ನು ಮುಂದುವರಿಸಲಿಲ್ಲ. ಪ್ರಸ್ತುತ ಶ್ರೀಲಂಕಾ ಸರಣಿಗೆ ಔಕಿಬ್ ನಬಿ (Auqib Nabi) ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಭವಿಷ್ಯದ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಬೌಲಿಂಗ್ ವಿಭಾಗವನ್ನು ಸದೃಢಗೊಳಿಸಲು ಬಿಸಿಸಿಐ ಈಗಿನಿಂದಲೇ ಹೊಸ ವೇಗಿಗಳ ಹುಡುಕಾಟ ಮತ್ತು ಪರೀಕ್ಷೆಗೆ ಮುಂದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.