
ನವದೆಹಲಿ(ಫೆ.25): ಭಾರತದ ಅದೃಷ್ಟ ಚೆನ್ನಾಗಿಲ್ಲವೋ ಅಥವಾ ಒತ್ತಡ ನಿರ್ವಹಣೆಯಲ್ಲಿ ತಂಡ ಎಡವುತ್ತಿದೆಯೋ ಗೊತ್ತಿಲ್ಲ. ಆದರೆ ಪದೇಪದೇ ಜಾಗತಿಕ ಮಟ್ಟದಲ್ಲಿ ತಂಡ ಪ್ರಶಸ್ತಿ ಹತ್ತಿರಕ್ಕೆ ಹೋಗಿ ಬರಿಗೈನಲ್ಲಿ ವಾಪಸಾಗುತ್ತಿದೆ. ಇತ್ತೀಚಿನ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲು ಸೇರಿ ತಂಡ ನಾಕೌಟ್ ಹಂತದಲ್ಲಿ ಹೊರಬಿದ್ದಿದ್ದು ಇದು ಸತತ 5ನೇ ಬಾರಿ. 2017ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ್ದು, ಭಾರತೀಯ ಮಹಿಳಾ ಕ್ರಿಕೆಟ್ನಲ್ಲಿ ಕ್ರಾಂತಿಕಾರಿ ಬೆಳವಣಿಗೆ ಎಂದೇ ಪರಿಗಣಿಸಲ್ಪಟ್ಟಿತ್ತು. ಆ ಫಲಿತಾಂಶವನ್ನು ಉತ್ತಮಗೊಳಿಸುವ ನಿರೀಕ್ಷೆ ಇತ್ತು. ಆದರೆ 6 ವರ್ಷಗಳ ನಂತರವೂ ತಂಡದ ಸ್ಥಿತಿ ಬದಲಾಗಿಲ್ಲ. ವಿಶ್ವಕಪ್ ಟ್ರೋಫಿಗಾಗಿ ಕಾಯುವಿಕೆ ತಪ್ಪಿಲ್ಲ.
2017ರ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ 2018ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಮತ್ತೆ ಇಂಗ್ಲೆಂಡ್ಗೆ ಶರಣಾಗಿತ್ತು. ಇನ್ನು 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಕಾಂಗರೂ ಪಡೆಗೆ ಶರಣಾಗಿತ್ತು. 2022ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋತಿದ್ದ ಭಾರತ, 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕದ ಪಂದ್ಯದಲ್ಲೂ ಆಸ್ಪ್ರೇಲಿಯಾ ಎದುರು ನಿರಾಸೆ ಅನುಭವಿಸಿತ್ತು. ಇದೀಗ ಈ ವರ್ಷದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೂ ಆಸ್ಪ್ರೇಲಿಯಾ ವಿರುದ್ಧವೇ ಸೋತಿದೆ. ಈ ಸೋಲುಗಳ ಪೈಕಿ ಬಹುತೇಕ ಪಂದ್ಯಗಳಲ್ಲಿ ಭಾರತ ಗೆಲ್ಲುವ ಹಂತದಿಂದ ಕೆಳಜಾರಿತು ಎನ್ನುವುದು ಗಮನಾರ್ಹ.
ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಆಯ್ಕೆಯಲ್ಲಿ ಈ ಬಾರಿಯೂ ಕೆಲವು ಎಡವಟ್ಟುಗಳಾಗಿವೆ. ವುಮೆನ್ಸ್ ಪ್ರೀಮಿಯರ್ ಲೀಗ್(ಮಹಿಳಾ ಐಪಿಎಲ್) ಪ್ರಾರಂಭಗೊಳ್ಳುತ್ತಿದ್ದು, ಮತ್ತಷ್ಟು ದೇಸಿ ಪ್ರತಿಭೆಗಳು ಅನಾವರಣಗೊಳ್ಳಲಿವೆ. ತಂಡದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ನಾಯಕಿ ಡಯಾನ ಎಡುಲ್ಜಿ, ‘ಆಟಗಾರ್ತಿಯರಲ್ಲಿ ಫಿಟ್ನೆಸ್ ಕೊರತೆ ಎದ್ದು ಕಾಣುತ್ತಿತ್ತು. ಹಲವು ಸನ್ನಿವೇಶಗಳಲ್ಲಿ ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿ ಅನಗತ್ಯ ಒತ್ತಡಕ್ಕೆ ಸಿಲುಕಿದರು’ ಎಂದಿದ್ದಾರೆ. ‘ಮುಂದಿನ ಟಿ20 ವಿಶ್ವಕಪ್ಗೆ ಕೇವಲ 18 ತಿಂಗಳು ಬಾಕಿ ಇದೆ. ತಂಡ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಿದೆ’ ಎಂದು ಡಯಾನ ಸಲಹೆ ನೀಡಿದ್ದಾರೆ.
ಆಘಾತದಿಂದ ಹೊರಬರಲು ಎಷ್ಟು ದಿನ ಬೇಕೋ ಗೊತ್ತಿಲ್ಲ!
ಕೇಪ್ಟೌನ್: ಆಸ್ಪ್ರೇಲಿಯಾ ವಿರುದ್ಧದ ಸೋಲಿನ ನೋವನ್ನು ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಆಘಾತದಿಂದ ಹೊರಬರಲು ಎಷ್ಟು ದಿನವಾಗುತ್ತೆ ಗೊತ್ತಿಲ್ಲ ಎಂದು ಭಾರತದನ ನಾಯಕಿ ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ.
Women's T20 World cup ಜ್ವರದಲ್ಲೂ ಹೋರಾಟ, ಸೋಲಿನ ಆಘಾತದಿಂದ ಬಿಕ್ಕಿ ಬಿಕ್ಕಿ ಅತ್ತ ನಾಯಕಿ ವಿಡಿಯೋ ವೈರಲ್
ಸೆಮಿಫೈನಲ್ ಸೋಲಿನ ಬಳಿಕ ಮಾತನಾಡಿದ ಅವರು, ‘ನನ್ನ ಕಣ್ಣೀರನ್ನು ದೇಶ ನೋಡುವುದನ್ನು ನಾನು ಇಷ್ಟಪಡುವುದಿಲ್ಲ. ಅದಕ್ಕಾಗಿ ಸನ್ಗ್ಲಾಸ್ ಹಾಕಿಯೇ ಮಾತನಾಡುತ್ತಿದ್ದೇನೆ’ ಎಂದು ಹೇಳಿದರು. ‘ನಾವು ಉತ್ತಮವಾಗಿ ಆಡಿದ್ದೇವೆ. ಆದರೆ ನನ್ನ ರನ್ಔಟ್ ಪಂದ್ಯದ ಗತಿ ಬದಲಿಸಿತು. ನಾನು ಕೊನೆವರೆಗೆ ಕ್ರೀಸ್ನಲ್ಲಿದ್ದರೆ ಒಂದು ಓವರ್ ಬಾಕಿ ಉಳಿಸಿ ಪಂದ್ಯ ಗೆಲ್ಲುತ್ತಿದ್ದೆವು’ ಎಂದು ಹರ್ಮನ್ ಬೇಸರದಿಂದ ನುಡಿದರು.
ಟರ್ನಿಂಗ್ ಪಾಯಿಂಟ್
2 ರನ್ ಅಂತರದಲ್ಲಿ ಭಾರತ ಹರ್ಮನ್, ರಿಚಾ ವಿಕೆಟ್ ಕಳೆದುಕೊಂಡಿದ್ದೇ ಭಾರತದ ಸೋಲಿಗೆ ಪ್ರಮುಖ ಕಾರಣ. ಈ ಇಬ್ಬರ ಪೈಕಿ ಒಬ್ಬರು ಕೊನೆವರೆಗೂ ಕ್ರೀಸ್ನಲ್ಲಿ ಇದ್ದಿದ್ದರೂ ಭಾರತ ಗೆಲ್ಲಬಹುದಿತ್ತು. ಇನ್ನು 19ನೇ ಓವರಲ್ಲಿ ಜೊನಾನ್ಸನ್ ಕೇವಲ 4 ರನ್ ನೀಡಿದ್ದು, ಆಸೀಸ್ ತನ್ನ ಇನ್ನಿಂಗ್್ಸನ ಕೊನೆ 2 ಓವರಲ್ಲಿ 30 ರನ್ ಚಚ್ಚಿದ್ದು ಸಹ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.