
2025ರ ಚಾಂಪಿಯನ್ಸ್ ಟ್ರೋಫಿ ಫೆ.19ರಿಂದ ಮಾ.9ರ ವರೆಗೂ ನಿಗದಿಯಾಗಿದೆ. ಪ್ರತಿ ಬಾರಿಯಂತೆ ಈ ಸಲವೂ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕಣದಲ್ಲಿವೆ. ಮಿನಿ ವಿಶ್ವಕಪ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ಗಳಾದ ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳಿಲ್ಲ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ವಿಶೇಷತೆ ಏನು ಗೊತ್ತಾ? ಅದುವೇ, ಹೈಬ್ರಿಡ್ ಮಾದರಿ. ಪಂದ್ಯಗಳು ಪಾಕಿಸ್ತಾನದ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯ ಜೊತೆಗೆ ದುಬೈನಲ್ಲಿ ನಡೆಯಲಿವೆ.
ಟೂರ್ನಿಯು ಹೈಬ್ರಿಡ್ ಮಾದರಿಗೆ ಜಾರಲು ಭಾರತ ಕಾರಣ. ಬದ್ಧವೈರಿ ಪಾಕಿಸ್ತಾನದ ನೆಲಕ್ಕೆ ತನ್ನ ಕ್ರಿಕೆಟ್ ತಂಡ ಕಾಲಿಡಲು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಕಾರಣ, ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿತು. ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮೇಲೆ ಒತ್ತಡ ಹೇರಿತು. ಐಸಿಸಿ ಪಾಲಿಗೆ ಬಿಸಿಸಿಐ ‘ಕಾಮಧೇನು’ ಇದ್ದಂತೆ. ಹೀಗಾಗಿ, ಬಿಸಿಸಿಐ ಬೇಡಿಕೆಯನ್ನು ತಿರಸ್ಕರಿಸುವಷ್ಟು ಸೌಕರ್ಯ ಐಸಿಸಿಗಿಲ್ಲ. ಅದರಲ್ಲೂ ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ, ಐಸಿಸಿ ಅಧ್ಯಕ್ಷ ಕುರ್ಚಿಯಲ್ಲಿ ಕೂತ ಮೇಲೆ ಬಿಸಿಸಿಐನ ಬೇಡಿಕೆ ಈಡೇರದಿರಲು ಹೇಗೆ ಸಾಧ್ಯ?. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರೋಧದ ನಡುವೆಯೂ ಐಸಿಸಿ, ಹೈಬ್ರಿಡ್ ಮಾದರಿಯ ಟೂರ್ನಿಯನ್ನು ಘೋಷಿಸಿತು. ಅದರನ್ವಯ, ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. ಉಳಿದ 6 ತಂಡಗಳು ಪಾಕಿಸ್ತಾನದಲ್ಲಿ ಆಡಲಿದ್ದು, ಭಾರತ ವಿರುದ್ಧ ಪಂದ್ಯವಿದ್ದಾಗ ದುಬೈಗೆ ಬಂದು ಆಡಿ ಹೋಗಲಿವೆ.
ಕ್ರೀಡಾಂಗಣಗಳ ನವೀಕರಣಕ್ಕೆ ನೀರಿನಂತೆ ಹಣ ಚೆಲ್ಲಿದೆ ಪಾಕ್!
2021ರ ನವೆಂಬರ್ನಲ್ಲೇ 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಘೋಷಣೆಯಾಯಿತು. 2008ರಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕರ ದಾಳಿ ನಡೆದ ಬಳಿಕ, 10 ವರ್ಷಕ್ಕೂ ಹೆಚ್ಚು ಕಾಲ ಪಾಕಿಸ್ತಾನಕ್ಕೆ ಯಾವ ವಿದೇಶಿ ತಂಡವೂ ಹೋಗಿರಲಿಲ್ಲ. ಪಂದ್ಯಗಳ ಕೊರತೆಯಿಂದಾಗಿ, ಪಾಕಿಸ್ತಾನದ ಕ್ರಿಕೆಟ್ ಕ್ರೀಡಾಂಗಣಗಳು ಪಾಳು ಬಿದ್ದ ಸ್ಥಿತಿ ತಲುಪಿದ್ದವು. ಐಸಿಸಿ ಟೂರ್ನಿಗೆ ಆತಿಥ್ಯ ನೀಡಬೇಕಿದ್ದರೆ ವಿಶ್ವ ದರ್ಜೆಯ ಕ್ರೀಡಾಂಗಣಗಳು ಬೇಕು ಎನ್ನುವುದನ್ನು ಅರಿತ ಪಿಸಿಬಿ ಲಾಹೋರ್, ರಾವಲ್ಪಿಂಡಿ ಹಾಗೂ ಕರಾಚಿ ಕ್ರೀಡಾಂಗಣಗಳ ನವೀಕರಣಕ್ಕೆ ಕೈಹಾಕಿತು. ದುಡ್ಡನ್ನು ನೀರಿನಂತೆ ಚೆಲ್ಲಿ ನವೀಕರಣ ಕಾರ್ಯ ಕೈಗೊಳ್ಳುತ್ತಿದ್ದಾಗ, ಟೂರ್ನಿ ಪಾಕಿಸ್ತಾನದ ಸ್ಥಳಾಂತರಗೊಳ್ಳಬಹುದು ಎನ್ನುವ ಸುದ್ದಿ ಪಿಸಿಬಿ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಹೋರಾಟ ನಡೆಸಿ ಆತಿಥ್ಯ ಹಕ್ಕು ಉಳಿಸಿಕೊಂಡರೂ, ಕ್ರೀಡಾಂಗಣಗಳ ನವೀಕರಣಕ್ಕೆ ತಗುಲಿರುವ ವೆಚ್ಚ ಕೈಮೀರಿದೆ.
ವರದಿಗಳ ಪ್ರಕಾರ, ನವೀಕರಣ ಕಾರ್ಯಕ್ಕೆ ಪಿಸಿಬಿ 12.3 ಬಿಲಿಯನ್ ಪಾಕಿಸ್ತಾನಿ ರುಪಾಯಿ (ಅಂದಾಜು ₹383 ಕೋಟಿ) ಆಗಬಹುದು ಎಂದು ಅಂದಾಜಿಸಿತ್ತು. ಆದರೆ, ಈಗಾಗಲೇ 18 ಬಿಲಿಯನ್ ಪಾಕಿಸ್ತಾನಿ ರುಪಾಯಿ (ಅಂದಾಜು ₹561 ಕೋಟಿ) ಖರ್ಚಾಗಿದ್ದು, ಪಿಸಿಬಿ ಸಾಲದ ಸುಳಿಯಲ್ಲಿ ಸಿಲುಕಿದೆ.
ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿದ್ದರೆ, ಪಿಸಿಬಿ ಮಾಡಿದ ವೆಚ್ಚ ಬಡ್ಡಿ ಸಮೇತ ವಸೂಲಿಯಾಗುತ್ತಿತ್ತು. ಆದರೆ, ತನ್ನ ತಂಡವನ್ನು ಕಳುಹಿಸಲ್ಲ ಎಂದು ಬಿಸಿಸಿಐ ಕಡ್ಡಿ ತುಂಡು ಮಾಡಿದ ರೀತಿ ಹೇಳಿದ್ದರಿಂದ ಪಿಸಿಬಿ ಅಧಿಕಾರಿಗಳಿಗೆ ಕನಸಿನಲ್ಲೂ ಸಾಲಗಾರರು ಕಾಡುತ್ತಿದ್ದರೂ ಅಚ್ಚರಿಯಿಲ್ಲ.
ಅಂದ ಹಾಗೆ, ಹಾಗೂ ಹೀಗೂ ಸರ್ಕಸ್ ಮಾಡಿ ಮೂರೂ ಕ್ರೀಡಾಂಗಣಗಳ ನವೀಕರಣ ಕಾರ್ಯವನ್ನು ಪೂರ್ತಿಗೊಳಿಸಿರುವ ಪಿಸಿಬಿ, ಕ್ರೀಡಾಂಗಣಗಳನ್ನು ಐಸಿಸಿ ಸುರ್ಪದಿಗೆ ನೀಡಿದೆ. ಕ್ರೀಡಾಂಗಣಗಳ ಗುಣಮಟ್ಟದ ಬಗ್ಗೆ ಐಸಿಸಿ ಸರ್ಟಿಫಿಕೇಟ್ ನೀಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.