"ಅವರು ಬೇರೆ ಪ್ಲಾನೆಟ್‌ನಲ್ಲಿದ್ದಾರೋ ಅಥವಾ ನಮಗೇ ಆಡಲು ಬರಲ್ವೋ ಗೊತ್ತಿಲ್ಲ": ಪಂದ್ಯಕ್ಕೂ ಮುನ್ನ ಪಾಂಡ್ಯ

By Sharath Sharma KalagaruFirst Published Nov 10, 2022, 1:55 PM IST
Highlights

India vs England T 20 World Cup Semi Final: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಹೈವೋಲ್ಟೇಜ್‌ ಸೆಮಿ ಫೈನಲ್‌ ಅಡಿಲೇಡ್‌ನಲ್ಲಿ ಆರಂಭವಾಗಿದೆ. ಆರಂಭಕ್ಕೂ ಮುನ್ನ ಹಾರ್ದಿಕ್‌ ಪಾಂಡ್ಯ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ಧಾರೆ. 

ನವದೆಹಲಿ: ಭಾರತದ ಆಲ್‌ ರೌಂಡರ್‌ ಹಾರ್ದಿಕ್‌ ಪಾಂಡ್ಯ ಭಾರತ ಮತ್ತು ಇಂಗ್ಲೆಂಡ್‌ ಪಂದ್ಯದ ಟಾಸ್‌ ನಂತರ ಮಾತನಾಡಿ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಫಾರ್ಮನ್ನು ಶ್ಲಾಘಿಸಿದ್ದಾರೆ. "ನಾವು ಸರಿಯಾಗಿ ಆಡುತ್ತಿಲ್ಲವೋ ಅಥವಾ ನಮಗೆ ಆಡಲು ಬರುವುದಿಲ್ಲವೇ ಎನಿಸುತ್ತದೆ ವಿರಾಟ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ ನೋಡಿದಾಗ. ಅವರಿಬ್ಬರೂ ಬೇರೆ ಯಾವುದೋ ಪ್ಲಾನೆಟ್‌ನವರಾ ಎಂದೂ ಅನಿಸುತ್ತದೆ. ಅಷ್ಟು ಅದ್ಭುತವಾಗಿ ಇಬ್ಬರೂ ಆಡುತ್ತಿದ್ದಾರೆ," ಎಂದು ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ. ಇಬ್ಬರೂ ಅತ್ಯುತ್ತಮವಾಗಿ ಆಡುತ್ತಿದ್ದು ಐದು ಪಂದ್ಯಗಳಲ್ಲಿ ಇಬ್ಬರೂ ತಲಾ ಮೂರು ಅರ್ಧಶತಕಗಳನ್ನು ಹೊಡೆದಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅದ್ಭುತವಾದ ಸ್ಟ್ರೈಕ್‌ರೇಟ್‌ ಜೊತೆಗೆ ಆಡುತ್ತಿದ್ದಾರೆ. 

ಟಾಸ್‌ ಗೆದ್ದಿ ಇಂಗ್ಲೆಂಡ್‌ ನಾಯಕ ಜೋಸ್‌ ಬಟ್ಲರ್‌ ಫೀಲ್ಡಿಂಗ್‌ ಆಯ್ಕೆಮಾಡಿಕೊಂಡರು. ಡೇವಿಡ್‌ ಮಲಾನ್‌ ಮತ್ತು ಮಾರ್ಕ್‌ವುಡ್‌ ಇಬ್ಬರೂ ಗಾಯಗೊಂಡಿರುವುದರಿಂದ ಈ ಪಂದ್ಯದಲ್ಲಿ ಕ್ರಿಸ್‌ ಜೋರ್ಡನ್‌, ಫಿಲ್‌ ಸಾಲ್ಟ್‌ ಸ್ಥಾನ ಪಡೆದಿದ್ದಾರೆ. ಭಾರತ ರಿಷಬ್‌ ಪಂತ್‌ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ದಿನೇಶ್‌ ಕಾರ್ತಿಕ್‌ ಅವರನ್ನು ಕೂರಿಸಿದೆ. ಭಾರತ ತಂಡ ಜಿಂಬಾಬ್ವೆ ವಿರುದ್ಧ ಆಡಿದ್ದ ಸದಸ್ಯರನ್ನೇ ಕಣಕ್ಕಿಳಿಸಿದೆ. ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ಎರಡನೇ ಓವರ್‌ನಲ್ಲೇ ಉಪ ನಾಯಕ ಕೆಎಲ್‌ ರಾಹುಲ್‌ ವಿಕೆಟ್‌ ಕಳೆದುಕೊಂಡಿದೆ. ವಿರಾಟ್‌ ಕೊಹ್ಲಿ ಕೂಡ ಇನ್ನೇನು ವಿಕೆಟ್‌ ಒಪ್ಪಿಸಿದರು ಎನ್ನುವಾಗ ಕ್ಯಾಚ್‌ ಕೈಚೆಲ್ಲಿದ್ದಕ್ಕಾಗಿ ಬಚಾವಾದರು. 

ಇದನ್ನೂ ಓದಿ: ICC T20 WORLD CUP ಟೀಂ ಇಂಡಿಯಾಗೆ ವರವಾಗುತ್ತಾ ಇಂಗ್ಲೆಂಡ್ ಟಾಸ್ ಗೆದ್ದಿದ್ದು..?

ಟಾಸ್‌ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ವಿರಾಟ್‌ ಮತ್ತು ಸೂರ್ಯಕುಮಾರ್ ಯಾದವ್‌ ಉತ್ತಮ ಲಯದಲ್ಲಿರುವುದು ಭಾರತಕ್ಕೆ ಲಾಭದಾಯಕವಾಗಿದೆ ಎಂದರು. ವಿರಾಟ್‌ ಕೊಹ್ಲಿ ಕೆಲ ತಿಂಗಳುಗಳಿಂದ ಉತ್ತಮ ಲಯದಲ್ಲಿರಲಿಲ್ಲ. ಆದರೆ ಈಗ ಅದ್ಭುತ ಫಾರ್ಮ್‌ಗ ಬಂದಿದ್ದಾರೆ. ಅವರ ಕ್ಲಾಸ್‌ ಯಾವ ಮಟ್ಟದ್ದು ಎಂಬುದನ್ನು ಅವರು ತೋರಿಸುತ್ತಿದ್ದಾರೆ. ಹಲವು ವರ್ಷಗಳಿಂದ ವಿರಾಟ್‌ ಕೊಹ್ಲಿ ಇದೇ ರೀತಿಯ ಪ್ರದರ್ಶನ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸೂರ್ಯಕುಮಾರ್‌ ಯಾದವ್‌ ಅವರ ಆಟ ನೋಡುತ್ತಿದ್ದರೆ ಮೈ ಜುಂ ಎನ್ನುತ್ತದೆ. ಅವರ ಫಾರ್ಮ್‌ ನಮಗೆ ದೊಡ್ಡ ಬಲ. ಯಾವುದೇ ಭಯವಿಲ್ಲದೇ ಅಟ್ಯಾಕ್‌ ಮಾಡುತ್ತಾರೆ. ಅವರನ್ನು ನೋಡಲೇ ಒಂದು ಖುಷಿ ಎಂದು ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ. 

ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೆಲ್‌ಬೋರ್ನ್‌ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಇದೇ ಕಾರಣಕ್ಕಾಗಿ ಭಾರತ ಇಂದು ಗೆಲ್ಲಲೇಬೇಕು ಎಂದು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳ ಅಭಿಮಾನಿಗಳು ಆಶಿಸುತ್ತಿದ್ದಾರೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿತ್ತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಹಾರ್ದಿಕ್‌ ಪಾಂಡ್ಯ ಕೂಡ ಉತ್ತಮ ಜತೆಯಾಟದಲ್ಲಿ ಭಾಗಿಯಾಗಿದ್ದರು. 82 ರನ್‌ ಗಳಿಸಿ ತಂಡವನ್ನು ಕೊಹ್ಲಿ ಗೆಲ್ಲಿಸಿದ್ದರು. 

ಇದನ್ನೂ ಓದಿ: ಕಾಲೆಳೆಯಲು ಬಂದ ಪಾಕಿಸ್ತಾನ ಮಾಜಿ ಆಟಗಾರನ ಟ್ರೋಲ್‌ ಮಾಡಿದ ಟ್ವಿಟ್ಟರ್‌ ಕಿಂಗ್‌ ವಾಸಿಂ ಜಾಫರ್‌

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌/ ರಿಷಭ್ ಪಂತ್‌, ಅಕ್ಷರ್‌ ಪಟೇಲ್, ರವಿಚಂದ್ರನ್ ಅಶ್ವಿನ್‌, ಭುವನೇಶ್ವರ್‌ ಕುಮಾರ್, ಮೊಹಮ್ಮದ್ ಶಮಿ, ಆರ್ಶದೀಪ್‌ ಸಿಂಗ್.

ಇಂಗ್ಲೆಂಡ್‌: ಜೋಸ್ ಬಟ್ಲರ್‌(ನಾಯಕ), ಅಲೆಕ್ಸ್ ಹೇಲ್ಸ್‌, ಫಿಲ್ ಸಾಲ್ಟ್‌, ಬೆನ್ ಸ್ಟೋಕ್ಸ್‌, ಹ್ಯಾರಿ ಬ್ರೂಕ್‌, ಲಿಯಾಮ್ ಲಿವಿಂಗ್‌ಸ್ಟೋನ್‌, ಮೋಯಿನ್ ಅಲಿ, ಸ್ಯಾಮ್ ಕರ್ರನ್‌, ಕ್ರಿಸ್ ವೋಕ್ಸ್‌, ಕ್ರಿಸ್ ಜೋರ್ಡನ್‌, ಆದಿಲ್ ರಶೀದ್‌.

click me!