
ಬೆಂಗಳೂರು: ಮುಂಬರುವ 2024ರ ಹಾಂಕಾಂಗ್ ಕ್ರಿಕೆಟ್ ಸಿಕ್ಸ್ ಟೂರ್ನಿಗೆ ತಾರಾ ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಕನ್ನಡಿಗ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. 7 ಆಟಗಾರರನ್ನೊಳಗೊಂಡ ತಂಡದಲ್ಲಿ ಆರ್ಸಿಬಿ ಮಾಜಿ ಆಟಗಾರರೇ ಸಿಂಹಪಾಲು ಪಡೆದುಕೊಂಡಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಸಮ ಸಾಮರ್ಥ್ಯದ ಆಟಗಾರರನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಭರತ್ ಚಿಪ್ಳಿ, ರಾಬಿನ್ ಉತ್ತಪ್ಪ ಶ್ರೀವತ್ಸ್ ಗೋಸ್ವಾಮಿ ಅವರ ಜತೆಗೆ ಮನೋಜ್ ತಿವಾರಿ, ಶೆಹಬಾಜ್ ನದೀಮ್ ಅವರು ಹಾಂಕಾಂಗ್ ಸಿಕ್ಸ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಾಂಕಾಂಗ್ ಸಿಕ್ಸ್ನಲ್ಲಿ ಮತ್ತೆ ಭಾರತ ಕಣಕ್ಕೆ: ಪ್ರತಿ ತಂಡದಲ್ಲಿ ಆರು ಆಟಗಾರರು, ತಲಾ 5 ಓವರ್ ಆಟ!
1992ರಿಂದ ಆರಂಭವಾದ ಈ ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಭಾರತ ತಂಡವು 2005ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2017ರ ಬಳಿಕ ಈ ಟೂರ್ನಿಯು ಸ್ಥಗಿತವಾಗಿತ್ತು. ಇದೀಗ ಮತ್ತೆ ಟೂರ್ನಿಗೆ ಮರುಜೀವ ಸಿಕ್ಕಿದ್ದು, ಭಾರತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲು ಎದುರು ನೋಡುತ್ತಿದೆ. ತಲಾ 6 ಆಟಗಾರರೊಂದಿಗೆ ಆಡುವ ಟೂರ್ನಿ ನ.1ರಿಂದ 3ರ ವರೆಗೆ ಹಾಂಕಾಂಗ್ನಲ್ಲಿ ನಡೆಯಲಿದ್ದು, ನವೆಂಬರ್ 01ರಂದು ಭಾರತ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಶುಭಾರಂಭ ಮಾಡಲಿದೆ.
ಆರ್ಸಿಬಿ ಮಾಜಿ ಆಟಗಾರರಿಗೆ ಸಿಂಹಪಾಲು:
ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ಪೈಕಿ ಆರ್ಸಿಬಿ ಆಟಗಾರರಿಗೆ ಸಿಂಹಪಾಲು ಸಿಕ್ಕಿದೆ. ಈ ಹಿಂದೆ ರಾಬಿನ್ ಉತ್ತಪ್ಪ. ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಭದತ್ ಚಿಪ್ಳಿ ಹಾಗೂ ಶ್ರೀವತ್ಸ್ ಗೋಸ್ವಾಮಿ ಹೀಗೆ 7 ಆಟಗಾರರ ಪೈಕಿ ಐದು ಆಟಗಾರರು ಈ ಹಿಂದೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿ ಸೈ ಎನಿಸಿಕೊಂಡಿದ್ದಾರೆ.
20ನೇ ಆವೃತ್ತಿಯ ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಭಾರತ ಮಾತ್ರವಲ್ಲದೇ ಪಾಕಿಸ್ತಾನ, ಆಸ್ಟ್ರೇಲಿಯಾ, ಹಾಂಕಾಂಗ್, ನೇಪಾಳ, ನ್ಯೂಜಿಲೆಂಡ್, ಓಮಾನ್, ಸೌಥ್ ಆಫ್ರಿಕಾ, ಶ್ರೀಲಂಕಾ, ಯುಎಇ ಸೇರಿದಂತೆ ಒಟ್ಟು 12 ತಂಡಗಳು ಪಾಲ್ಗೊಳ್ಳುತ್ತಿವೆ
T20 World Cup : ರೋಹಿತ್ ಶರ್ಮಾ ಹೇಳಿದ ಪಂತ್ ಸುಳ್ಳು ಗಾಯದ ನಾಟಕದ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ರಿಷಭ್!
ಹಾಂಕಾಂಗ್ ಸಿಕ್ಸ್ ಟೂರ್ನಮೆಂಟ್ನಲ್ಲಿ ಖ್ಯಾತ ಕ್ರಿಕೆಟಿಗರಾದ ಎಂ ಎಸ್ ಧೋನಿ, ವಾಸೀಂ ಅಕ್ರಂ, ಶೋಯೆಬ್ ಮಲಿಕ್, ಸನತ್ ಜಯಸೂರ್ಯ, ಅನಿಲ್ ಕುಂಬ್ಳೆ, ಉಮರ್ ಅಕ್ಮಲ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಹಲವು ತಾರಾ ಕ್ರಿಕೆಟಿಗರು ಹಾಂಕಾಂಗ್ ಸಿಕ್ಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ.
ಹಾಂಕಾಂಗ್ ಸಿಕ್ಸ್ ಟೂರ್ನಿಗೆ ಭಾರತ ತಂಡ ಹೀಗಿದೆ:
ರಾಬಿನ್ ಉತ್ತಪ್ಪ(ನಾಯಕ), ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಭರತ್ ಚಿಪ್ಳಿ, ಮನೋಜ್ ತಿವಾರಿ, ಶೆಹಬಾಜ್ ನದೀಮ್, ಶ್ರೀವತ್ಸ್ ಗೋಸ್ವಾಮಿ(ವಿಕೆಟ್ ಕೀಪರ್)
ನಿಯಮಗಳೇನು?
1. ಪ್ರತಿ ತಂಡದಲ್ಲಿ ಆರು ಆಟಗಾರರು. ತಲಾ 5 ಓವರ್ ಆಟ. ಫೈನಲ್ನಲ್ಲಿ ಮಾತ್ರ ಪ್ರತಿ ಓವರ್ಗೆ 8 ಎಸೆತ.
2. ವಿಕೆಟ್ ಕೀಪರ್ ಹೊರತುಪಡಿಸಿ ಬೇರೆಲ್ಲರೂ ತಲಾ 1 ಓವರ್ ಬೌಲ್ ಮಾಡಬೇಕು. ವೈಡ್, ನೋಬಾಲ್ಗೆ 2 ರನ್.
3. ತಂಡದ 5 ಬ್ಯಾಟರ್ಗಳು ಔಟಾದರೂ 6ನೇ ಬ್ಯಾಟರ್ ಆಟ ಮುಂದುವರಿಸುತ್ತಾರೆ. ಔಟಾಗದೇ ಇರುವ ಬ್ಯಾಟರ್ ಎಲ್ಲಾ ಸಮಯದಲ್ಲೂ ಸ್ಟ್ರೈಕ್ನಲ್ಲಿರಬೇಕು. ಮತ್ತೋರ್ವ ಆಟಗಾರ ಕೇವಲ ರನ್ನರ್ ಆಗಿರುತ್ತಾರೆ. 6ನೇ ಬ್ಯಾಟರ್ ಔಟಾದರೆ ಮಾತ್ರ ತಂಡ ಆಲೌಟ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.