ಬಯೋಬಬಲ್‌ ವ್ಯವಸ್ಥೆ ಕೈಬಿಡಲು ಬಿಸಿಸಿಐ ಚಿಂತನೆ..!

By Naveen KodaseFirst Published Apr 7, 2022, 12:32 PM IST
Highlights

* ಕಳೆದೆರಡು ವರ್ಷಗಳಿಂದ ಬಯೋಬಬಲ್‌ನೊಳಗೆ ನಡೆಯುತ್ತಿವೆ ಕ್ರಿಕೆಟ್ ಟೂರ್ನಮೆಂಟ್

* ಕೋವಿಡ್ ಇಳಿಮುಖದ ಬೆನ್ನಲ್ಲೇ ಬಿಸಿಸಿಐನಿಂದ ಮಹತ್ವದ ತೀರ್ಮಾನ

* ದೇಸಿ ಕ್ರಿಕೆಟ್ ಟೂರ್ನಿಯನ್ನು ಬಯೋಬಬಲ್‌ ವ್ಯವಸ್ಥೆ ಇಲ್ಲದೆ ನಡೆಸುವ ಸಾಧ್ಯತೆ

ನವದೆಹಲಿ(ಏ.07): ದೇಶದಲ್ಲಿ ಕೋವಿಡ್‌ ಪ್ರಕರಣಗಳು (COVID 19) ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕ್ರಿಕೆಟಿಗರ ಬಯೋ-ಬಬಲ್‌ ವ್ಯವಸ್ಥೆಯನ್ನು ಕೈಬಿಡಲು ಬಿಸಿಸಿಐ (BCCI) ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ. ದೇಶದಲ್ಲಿ ಸೋಂಕು ಪತ್ತೆಯಾದ ಬಳಿಕ ಬಿಸಿಸಿಐ ಎಲ್ಲಾ ಟೂರ್ನಿಗಳನ್ನು ಬಯೋಬಬಲ್‌ ಒಳಗಡೆಯೇ ಆಯೋಜಿಸುತ್ತಿದೆ. ಆದರೆ ಸದ್ಯ ಸೋಂಕು ಇಳಿಮುಖವಾಗಿದ್ದು, ಮುಂಬರುವ ಅಂಡರ್‌-19 ಕೂಚ್‌ ಬಿಹಾರ್‌ ಹಾಗೂ ರಾಷ್ಟ್ರೀಯ ಹಿರಿಯ ಮಹಿಳಾ ಟಿ20 ಟೂರ್ನಿಯನ್ನು ಬಯೋಬಬಲ್‌ ವ್ಯವಸ್ಥೆ ಇಲ್ಲದೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

2020ರ ಏಪ್ರಿಲ್ ಬಳಿಕ ಕೋವಿಡ್ ಪ್ರಕರಣಗಳು ಭಾರತದಲ್ಲಿ ಹೆಚ್ಚಾದ ಬೆನ್ನಲ್ಲೇ, ಯಾವುದೇ ಟೂರ್ನಿ ಆರಂಭಕ್ಕೂ ಮುನ್ನ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಬಳಿಕವಷ್ಟೇ ಆಟಗಾರರು ಮೈದಾನಕ್ಕಿಳಿಯಲು ಬಿಸಿಸಿಐ ಅವಕಾಶ ನೀಡಿತ್ತು. ಅದರೆ ಮುಂಬರುವ ದಿನಗಳಲ್ಲಿ ಬಿಸಿಸಿಐ ಕಡ್ಡಾಯ ಕ್ವಾರಂಟೈನ್ ತೆಗೆದುಹಾಕಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಬಯೋಬಬಲ್‌ ಇಲ್ಲದಿದ್ದರೂ ಆಟಗಾರರು ಟೂರ್ನಿಗೆ ಸಂಬಂಧಿಸಿದವರನ್ನು ಮಾತ್ರ ಭೇಟಿಯಾಗಲು ಅವಕಾಶ ನೀಡಲಾಗುತ್ತದೆ ಎಂದು ಗೊತ್ತಾಗಿದೆ. ಅದಾಗ್ಯೂ ಸದ್ಯ ನಡೆಯುತ್ತಿರುವ ಐಪಿಎಲ್‌ ಬಯೋಬಬಲ್‌ ಒಳಗಡೆಯೇ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ಗಾಯಾಳು ಕೌಲ್ಟರ್‌-ನೈಲ್‌ ಐಪಿಎಲ್‌ನಿಂದ ಹೊರಕ್ಕೆ

ಮುಂಬೈ: ಸ್ನಾಯು ಸೆಳೆತಕ್ಕೆ ಒಳಗಾಗಿರುವ ರಾಜಸ್ಥಾನ ರಾಯಲ್ಸ್‌ನ (Rajasthan Royals) ಆಲ್ರೌಂಡರ್‌ ನೇಥನ್‌ ಕೌಲ್ಟರ್‌-ನೈಲ್‌ (Nathan Coulter-Nile) 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. 34 ವರ್ಷದ ಕೌಲ್ಟರ್‌-ನೈಲ್‌ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧದ ಮೊದಲ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಸದ್ಯ ಅವರು ಪುನಶ್ಚೇತನ ಶಿಬಿರಕ್ಕಾಗಿ ತವರಿಗೆ ಹಿಂದಿರುಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಪರ ಆಡಿದ್ದ ಅವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ರಾಜಸ್ಥಾನ 2 ಕೋಟಿ ರು. ನೀಡಿ ಖರೀದಿಸಿತ್ತು.

ನಟರಾಜನ್‌ ತಜ್ಞ ಡೆತ್‌ ಬೌಲರ್‌: ರವಿ ಶಾಸ್ತ್ರಿ

ಮುಂಬೈ: ಟಿ.ನಟರಾಜನ್‌ ಓರ್ವ ಡೆತ್‌ ಬೌಲಿಂಗ್‌ ತಜ್ಞ. ಟಿ20 ವಿಶ್ವಕಪ್‌ನಲ್ಲಿ ಅವರ ಆಟದಿಂದ ನಾವು ವಂಚಿತರಾದೆವು ಎಂದು ಟೀಂ ಇಂಡಿಯಾ ಮಾಜಿ ಪ್ರಧಾನ ಕೋಚ್‌ ರವಿ ಶಾಸ್ತ್ರಿ (RaviShastri) ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನಟರಾಜನ್‌ ಫಿಟ್‌ ಅಗಿದ್ದರೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದರು. ಇಂಗ್ಲೆಂಡ್‌ ಸರಣಿಯಲ್ಲಿ ಗಾಯಗೊಂಡಿದ್ದರಿಂದ ಅವರನ್ನು ನಾವು ಕಳೆದುಕೊಂಡೆವು. ಅವರು ನಿಖರವಾಗಿ ಯಾರ್ಕರ್‌ ಎಸೆಯಬಲ್ಲ ಓರ್ವ ತಜ್ಞ ಡೆತ್‌ ಬೌಲರ್‌. ಅವರು ತಮ್ಮ ಬೌಲಿಂಗ್‌ನಲ್ಲಿ ನಿಯಂತ್ರಣ ಮತ್ತು ಕೌಶಲ್ಯ ಹೊಂದಿದ್ದಾರೆ’ ಎಂದು ಶಾಸ್ತ್ರಿ ಕೊಂಡಾಡಿದ್ದಾರೆ.

ಮೊದಲ ಪಂದ್ಯದಲೇ ಮಿಂಚಿದ ಬೇಬಿ ಎಬಿಡಿ!

ಮುಂಬೈ: ತಮ್ಮ ಆಕರ್ಷಕ ಹೊಡೆತಗಳ ಮೂಲಕ ‘ಬೇಬಿ ಡಿ ವಿಲಿಯ​ರ್‍ಸ್’ ಎಂದೇ ಕರೆಸಿಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ಯುವ ಬ್ಯಾಟರ್‌ ಡೆವಾಲ್ಡ್‌ ಬ್ರೆವಿಸ್‌ ಐಪಿಎಲ್‌ ಪಾದಾರ್ಪಣಾ ಪಂದ್ಯದಲ್ಲೇ ಮಿಂಚಿದ್ದಾರೆ. ಬುಧವಾರ ಕೋಲ್ಕತಾ ನೈಟ್‌ ರೈಡ​ರ್ಸ್‌ ವಿರುದ್ಧದ ಪಂದ್ಯದಲ್ಲಿ ಬ್ರೆವಿಸ್‌ 19 ಎಸೆತಗಳಲ್ಲಿ 29 ರನ್‌ ಸಿಡಿಸಿದರು. ಇದರಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳಿದ್ದವು. ಒಳಗೊಂಡಿತ್ತು. ಇತ್ತೀಚೆಗೆ ನಡೆದಿದ್ದ ಅಂಡರ್‌-19 ಏಕದಿನ ವಿಶ್ವಕಪ್‌ನಲ್ಲಿ ಬ್ರೆವಿಸ್‌ 6 ಪಂದ್ಯಗಳಲ್ಲಿ 2 ಶತಕ, 3 ಅರ್ಧಶತಕ ಸೇರಿ 506 ರನ್‌ ಸಿಡಿಸಿದ್ದರು. ಎಬಿ ಡಿ ವಿಲಿಯ​ರ್ಸ್‌ ಬ್ಯಾಟಿಂಗ್‌ ಶೈಲಿಯನ್ನೇ ಅನುಕರಿಸುವ ಬ್ರೆವಿಸ್‌ರನ್ನು ಮುಂಬೈ 3 ಕೋಟಿ ರುಪಾಯಿ1ಗೆ ಖರೀದಿಸಿತ್ತು.

click me!