ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಆರೋಗ್ಯ ಮಾಹಿತಿ ಬಹಿರಂಗ ಪಡಿಸಿದ ಬಿಸಿಸಿಐ!

By Suvarna NewsFirst Published Dec 30, 2022, 6:30 PM IST
Highlights

ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಕುರಿತು ಬಿಸಿಸಿಐ ಅಧಿಕೃತ ಮಾಹಿತಿ ಪ್ರಕಟಿಸಿದೆ. ಪಂತ್ ಗಾಯ ಹಾಗೂ ಚಿಕಿತ್ಸೆ ಕುರಿತ ಎಲ್ಲಾ ಮಾಹಿತಿಯನ್ನು ಬಿಸಿಸಿಐ ನೀಡಿದೆ. 

ಮುಂಬೈ(ಡಿ.30); ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಆರೋಗ್ಯ ಕುರಿತು ಹಲವು ಮಾಹಿತಿಗಳು ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಪಂತ್ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ರಿಷಬ್ ಪಂತ್ ಉತ್ತರಖಂಡದ ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ. ಗಾಯದ ಪ್ರಮಾಣ ಹೆಚ್ಚಿದೆ. ಇದೀಗ ರಿಷಬ್ ಪಂತ್ ಅವರನ್ನು ಡೆಹ್ರಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಂತ್ ಕುಟುಂಬದ ಜೊತೆ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ. ಪಂತ್‌ಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ಬಿಸಿಸಿಐ ಎಲ್ಲಾ ಪ್ರಯತ್ನ ನಡೆಸಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಅಪಘಾತದ ಬೆನ್ನಲ್ಲೇ ರಿಷಬ್ ಪಂತ್ ಅವರನ್ನು ಸಾಕ್ಷಮ್ ಆಸ್ಪ್ರತ್ರೆ ದಾಖಲಿಸಲಾಗಿತ್ತು. ರಿಷಬ್ ಪಂತ್ ತಲೆಗೆ ಎರಡು ಗಾಯಗಳಾಗಿದೆ. ಇನ್ನು ಮೊಣಕಾಲು, ಕಾಲಿನ ಪಾದದ ಮೊಳೆ ಮುರಿತಕ್ಕೊಳಗಾಗಿದೆ. ಪಂತ್ ಬೆನ್ನಿನ ಮೂಳೆಗೂ ಗಾಯವಾಗಿದೆ. ಇದರ ಜೊತೆಗೆ ಕೈ ಹಾಗೂ ಮಣಿಕಟ್ಟು ಮೂಳೆಗೂ ಗಾಯವಾಗಿದೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ ಎಂದು ಬಿಸಿಸಿಐ ಹೇಳಿದೆ.

ವಾಸೀಂ ಅಕ್ರಂನಿಂದ ವಿರಾಟ್ ಕೊಹ್ಲಿವರೆಗೆ; ರಿಷಭ್ ಪಂತ್ ಚೇತರಿಕೆಗೆ ಪ್ರಾರ್ಥಿಸಿದ ಕ್ರಿಕೆಟಿಗರು..!

ಸಾಕ್ಷಮ್ ಆಸ್ಪತ್ರೆಯಿಂದ ಮ್ಯಾಕ್ಸ್ ಆಸ್ಪತ್ರೆಗೆ ಪಂತ್ ಅವರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ ಎಂಆರ್‌ಐ ಸ್ಕಾನ್ ಮಾಡಲಾಗುತ್ತದೆ. ಈ ಮೂಲಕ ಇತರ ಸಣ್ಣ ಪುಟ್ಟ ಗಾಯಗಳಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ರಿಷಬ್ ಕುಟುಂಬ ಹಾಗೂ ವೈದ್ಯಕೀಯ ತಂಡದ ಜೊತೆ ಬಿಸಿಸಿಐ ಸಂಪರ್ಕದಲ್ಲಿದೆ. ಪಂತ್‌ಗೆ ಅತ್ಯುತ್ತಮ ವೈದ್ಯಕೀಯ ಬಿಸಿಸಿಐ ಒದಗಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ದೆಹಲಿಯಿಂದ ಉತ್ತರಖಂಡಕ್ಕೆ ಮಾರ್ಗ ಮೂಲಕ ತೆರಳುತ್ತಿದ್ದಾಗ ರಿಷಬ್ ಪಂತ್ ಮರ್ಸಿಡೀಸ್ ಬೆಂಜ್ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಅತೀ ವೇಗದಿಂದ ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಬೆನ್ನಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಗಾಜು ಒಡೆದು ರಿಷಬ್ ಪಂತ್ ಅವರನ್ನು ಕಾರಿನಿಂದ ರಕ್ಷಿಸಲಾಗಿದೆ. ಬಳಿಕ ಪಂತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

"ನಾನು ರಿಷಭ್ ಪಂತ್": ರಕ್ಷಿಸಲು ಬಂದ ಬಸ್‌ ಡ್ರೈವರ್‌ ಬಳಿ ಪಂತ್ ಹೇಳಿದ್ದೇನು..?

ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಗುಳಿದಿರುವ ರಿಷಬ್ ಪಂತ್, ಉತ್ತರಖಂಡ್ ಮನೆಗೆ ತೆರಳಿ ಬಳಿಕ ಬೆಂಗಳೂರಿಗೆ ಆಗಮಿಸಬೇಕಿತ್ತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆ ಒಳಗಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಅಪಘಾತ ಸಂಭವಿಸಿದೆ.

click me!