ACC U19 Asia Cup 2021: ಯುಎಇ ವಿರುದ್ದ ಭಾರತ ಕಿರಿಯರ ತಂಡಕ್ಕೆ 154 ರನ್‌ಗಳ ಭರ್ಜರಿ ಗೆಲುವು

By Suvarna NewsFirst Published Dec 24, 2021, 9:33 AM IST
Highlights

* ಅಂಡರ್ 19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಶುಭಾರಂಭ

* ಆಕರ್ಷಕ ಶತಕ ಸಿಡಿಸಿ ಮಿಂಚಿದ ಹರ್ನೂರ್‌ ಸಿಂಗ್ 

* ಶನಿವಾರ ಭಾರತ, ಪಾಕಿಸ್ತಾನ ಸೆಣಸಾಟ ನಡೆಸಲಿದೆ

ದುಬೈ(ಡಿ.24): ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ (U 19 Asia Cup Cricket Tournament) ಭಾರತ ತಂಡ ಭರ್ಜರಿ ಆರಂಭ ಪಡೆದಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ, ಯುಎಇ ವಿರುದ್ಧ 154 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ, ಹರ್ನೂರ್‌ ಸಿಂಗ್‌(120) ಅವರ ಆಕರ್ಷಕ ಶತಕ, ನಾಯಕ ಯಶ್‌ ಧುಳ್‌(63) ಹಾಗೂ ರಾಜ್‌ವರ್ಧನ್‌(48)ರ ಉಪಯುಕ್ತ ಕೊಡುಗೆಗಳ ನೆರವಿನಿಂದ 50 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 282 ರನ್‌ ಕಲೆಹಾಕಿತು. 

ಯುಎಇ ತಂಡ 9 ಬೌಲರ್‌ಗಳನ್ನು ಬಳಸಿದರೂ ಭಾರತವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದೊಡ್ಡ ಗುರಿ ಬೆನ್ನತ್ತಿದ ಯುಎಇ, 34.3 ಓವರಲ್ಲಿ 128 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ ಪರ ರಾಜವರ್ಧನ್‌ 3 ವಿಕೆಟ್‌ ಕಿತ್ತರು. ಶನಿವಾರ ಭಾರತ, ಪಾಕಿಸ್ತಾನ (India vs Pakistan) ಸೆಣಸಲಿವೆ.

ವಿಜಯ್‌ ಹಜಾರೆ ಏಕದಿನ: ಇಂದು ಸೆಮೀಸ್‌ ಹಣಾಹಣಿ

ಜೈಪುರ: ವಿಜಯ್‌ ಹಜಾರೆ ಏಕದಿನ ಟೂರ್ನಿಯ (Vijay Hazare Trophy) ಸೆಮಿಫೈನಲ್‌ ಹಣಾಹಣಿ ಶುಕ್ರವಾರ ನಡೆಯಲಿದೆ. ಮೊದಲ ಸೆಮೀಸ್‌ನಲ್ಲಿ ಸರ್ವಿಸಸ್‌ಗೆ ಹಿಮಾಚಲ ಪ್ರದೇಶದ ಸವಾಲು ಹಾಕಲಿದ್ದು, 2ನೇ ಸೆಮೀಸ್‌ನಲ್ಲಿ ತಮಿಳುನಾಡು (Tamil Nadu) ಹಾಗೂ ಸೌರಾಷ್ಟ್ರ ಮುಖಾಮುಖಿಯಾಗಲಿವೆ.

ಗುಂಪು ಹಂತದಲ್ಲಿ 5ರಲ್ಲಿ 4 ಪಂದ್ಯ ಗೆದ್ದಿದ್ದ ಸರ್ವಿಸಸ್ ಕ್ವಾರ್ಟರ್‌ಫೈನಲ್‌ನಲ್ಲಿ ಕೇರಳ (Kerala) ವಿರುದ್ಧ ಜಯಿಸಿತ್ತು. ಇನ್ನು ಹಿಮಾಚಲ ಪ್ರದೇಶ ತಂಡ ಉತ್ತರ ಪ್ರದೇಶವನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲಿಸಿ ಸೆಮೀಸ್‌ಗೆ ಲಗ್ಗೆ ಇಟ್ಟಿತ್ತು. ಗುಂಪು ಹಂತದಲ್ಲಿ ಅಜೇಯವಾಗಿದ್ದ ಸೌರಾಷ್ಟ್ರ ಕ್ವಾರ್ಟರ್‌ನಲ್ಲಿ ವಿದರ್ಭ ವಿರುದ್ಧ ಗೆಲುವು ಸಾಧಿಸಿತ್ತು. ತಮಿಳುನಾಡು ಸಾಂಪ್ರದಾಯಿಕ ಎದುರಾಳಿ ಕರ್ನಾಟಕ ವಿರುದ್ಧ ಭರ್ಜರಿಯಾಗಿ ಗೆದ್ದು ಅಂತಿಮ 4ರ ಘಟ್ಟತಲುಪಿತ್ತು. ಎರಡೂ ಪಂದ್ಯಗಳು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿವೆ.

ಭಾರತ ಅಂಧರ ಕ್ರಿಕೆಟ್‌ ಟೀಂಗೆ ಕನ್ನಡಿಗ ಸುನಿಲ್‌ ನಾಯಕ

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ತಲಾ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಗೆ ಭಾರತ ಅಂಧರ ಕ್ರಿಕೆಟ್‌ ತಂಡವನ್ನು ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ(ಸಿಎಬಿಐ) ಆಯ್ಕೆ ಮಾಡಿದ್ದು, ಎರಡೂ ತಂಡಗಳಿಗೆ ಕರ್ನಾಟಕದ ಸುನಿಲ್‌ ರಮೇಶ್‌ ನಾಯಕರಾಗಿ ನೇಮಕಗೊಂಡಿದ್ದಾರೆ. 

Ind vs SA: ಧೋನಿ ಹೆಸರಿನಲ್ಲಿರುವ ಅಪರೂಪದ ದಾಖಲೆ ಮುರಿಯಲು ಸಜ್ಜಾದ ರಿಷಭ್ ಪಂತ್..!

ಟೂರ್ನಿಗೆ ಭೋಪಾಲ್‌ (Bhopal) ಆತಿಥ್ಯ ನೀಡಲಿದೆ. ಟಿ20 ಪಂದ್ಯಗಳು ಡಿ.24, 25, 26ರಂದು ನಡೆದರೆ, ಏಕದಿನ ಪಂದ್ಯಗಳು ಡಿ.27, 28, 29ರಂದು ನಡೆಯಲಿವೆ. ಕರ್ನಾಟಕದ ಪ್ರಕಾಶ್‌ ಜಯರಾಮಯ್ಯ ಟಿ20, ಏಕದಿನ ಎರಡೂ ತಂಡಗಳಲ್ಲಿ ಸ್ಥಾನ ಪಡೆದರೆ, ರಾಜ್ಯದ ಲೋಕೇಶ, ಬಸಪ್ಪ ಏಕದಿನ ತಂಡದಲ್ಲಿದ್ದಾರೆ.

ಡಿಸೆಂಬರ್ 25ರಿಂದ ವಾಜಪೇಯಿ ಕಪ್‌ ವಾಲಿಬಾಲ್‌ ಟೂರ್ನಿ

ಬೆಂಗಳೂರು: 19ನೇ ವಾಜಪೇಯಿ ಕಪ್‌ ವಾಲಿಬಾಲ್‌ (Vajpayee Vollyball Cup) ಟೂರ್ನಿಯು ಡಿಸೆಂಬರ್ 25ರಿಂದ ಡಿಸೆಂಬರ್ 29ರ ವರೆಗೂ ಬೆಂಗಳೂರಿನ ಶಂಕರಮಠದ ವಿವೇಕಾನಂದ ಮೈದಾನದಲ್ಲಿ ನಡೆಯಲಿದೆ. ದಕ್ಷಿಣ ವಲಯ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನ ಒಟ್ಟು 8 ವಿಶ್ವವಿದ್ಯಾಲಯದ ತಂಡಗಳು ಪಾಲ್ಗೊಳ್ಳಲಿವೆ. ಮಹಿಳೆಯರ ವಿಭಾಗದಲ್ಲಿ ಒಟ್ಟು 4 ವಿಶ್ವ ವಿದ್ಯಾಲಯದ ತಂಡಗಳು ಸೆಣಸಲಿವೆ. ಪುರುಷರ ವಿಭಾಗದಲ್ಲಿ ವಿಜೇತರಿಗೆ 40000 ರು. ನಗದು, ಮಹಿಳಾ ವಿಭಾಗದ ವಿಜೇತರಿಗೆ 30000 ರು. ನಗದು ಬಹುಮಾನ ಸಿಗಲಿದೆ.

click me!