
ವಿವಾದಾತ್ಮಕ ದಿ ಕೇರಳ ಸ್ಟೋರಿ ಸಿನಿಮಾದ ನಾಯಕಿ ಅದಾ ಶರ್ಮಾ ಮತ್ತು ನಿರ್ದೇಶಕ ಸುದೀಪ್ತೋ ಸೇನ್ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ತೆಲಂಗಾಣದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ನಿರ್ದೇಶಕ ಹಾಗೂ ನಾಯಕಿಗೆ ಸಣ್ಣಪುಟ್ಟ ಗಾಯವಾಗಿದ್ದು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದೀಪ್ತೋ ಸೇನ್ ಮತ್ತು ಅದಾ ಹಾಗೂ ಇಡೀ ಸಿನಿಮಾತಂಡ ಕರೀಂನಗರಕ್ಕೆ ಯುವಜನ ಕೂಟವೊಂದರಲ್ಲಿ ಭಾಗಿಯಾಗಿ ತಮ್ಮ ವಿವಾದಾತ್ಮಕ ಚಿತ್ರ ದಿ ಕೇರಳ ಸ್ಟೋರಿ ಕುರಿತು ಮಾತನಾಡಲು ತೆರಳುತ್ತಿದ್ದರು ಎನ್ನಲಾಗಿದೆ.
ಅಪಘಾತದ ಸುದ್ದಿ ಅಭಿಮಾನಿಗಳಿಗೆ ಮತ್ತು ಅವರ ಆಪ್ತರಿಗೆ ಆಘಾತವುಂಟು ಮಾಡಿದ್ದು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಸುದ್ದಿ ವೈರಲ್ ಆಗುತ್ತಿದ್ದಂತೆ ನಟಿ ಅದಾ ಶರ್ಮಾ ಪ್ರತಿಕ್ರಿಯೆ ನೀಡಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ತಾನು ಚೆನ್ನಾಗಿದ್ದೀನಿ, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಅದಾ ಹೇಳಿದ್ದಾರೆ. 'ನಾನು ಚೆನ್ನಾಗಿದ್ದೇನೆ. ನಮ್ಮ ಅಪಘಾತದ ಬಗ್ಗೆ ಹರಡುತ್ತಿರುವ ಸುದ್ದಿಗಳಿಂದಾಗಿ ಬಹಳಷ್ಟು ಸಂದೇಶಗಳು ಬರುತ್ತಿವೆ. ಇಡೀ ತಂಡ, ನಾವೆಲ್ಲರೂ ಚೆನ್ನಾಗಿದ್ದೇವೆ, ಏನೂ ಗಂಭೀರವಾಗಿಲ್ಲ, ಏನೂ ಆಗಿಲ್ಲ. ನಿಮ್ಮ ಈ ಕಾಳಜಿಗಾಗಿ ಧನ್ಯವಾದಗಳು' ಎಂದು ಅದಾ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ The Kerala Story ಚಿತ್ರತಂಡ!
ವಿವಾದಾತ್ಮಕ ಸಿನಿಮಾದಲ್ಲಿ ನಟಿಸಿದ್ದ ಬಳಿಕ ದಿ ಕೇರಳ ಸ್ಟೋರಿ ಸಿನಿಮಾತಂಡದ ಅನೇಕರಿಗೆ ಜೀವ ಬೆದರಿಕೆ ಬಂದಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಜೀವ ಬೆದರಿಕೆ ಬೆನ್ನಲ್ಲೇ ಅಪಘಾತ ಸಂಭವಿಸಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ಆದರೆ ಎಲ್ಲರೂ ಅದೃಷ್ಟವಶಾತ್ ಪಾರಾಗಿದ್ದಾರೆ.
The Kerala Story: ಮತಾಂತರದ ರೋಲ್ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'
ದಿ ಕೇರಳ ಸ್ಟೋರಿ ಸಿನಿಮಾ ಈಗಾಗಲೇ 100 ಕೋಟಿ ರೂಪಾಯಿ ದಾಟಿ ಮುನ್ನುಗ್ಗಿತ್ತಿದೆ. ಬ್ಯಾನ್ ಮತ್ತು ವಿವಾದದ ನಡುವೆಯೂ ಉತ್ತಮ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವುದು ಸಿನಿಮಾತಂಡಕ್ಕೆ ಖುಷಿ ನೀಡಿದೆ. ದಿ ಕೇರ ಸ್ಟೋರಿ ಸಿನಿಮಾವನ್ನು ಕೆಲವು ರಾಜ್ಯಗಳಲ್ಲಿ ಬ್ಯಾನ್ ಮಾಡಲಾಗಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ. ಕಡಿಮೆ ಬಜೆಟ್ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.