
ವಿವೇಕ್ ರಂಜನ್ ಅಗ್ನಿಹೋತ್ರಿ (Vivek Ranjan Agnihotri) ನಿರ್ದೇಶನದ, ಅನುಪಮ್ ಖೇರ್ (Anupam Kher), ಮಿಥುನ್ ಚಕ್ರವರ್ತಿ (Mithun Chakraborty) ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಬಾಲಿವುಡ್ (Bollywood) ಸಿನಿಮಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ದಾಖಲೆ ಬರೆಯುತ್ತಿದೆ. ಕಾಶ್ಮೀರ ಹಿಂದುಗಳ ಹತ್ಯಾಕಾಂಡದ ಕತೆ ಹೊಂದಿರುವ ಈ ಸಿನಿಮಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಬಹಳಷ್ಟು ಸಿನಿಮಾ ಪ್ರೇಮಿಗಳು ಈ ಚಿತ್ರದ ಟಿಕೆಟ್ ಖರೀದಿಸಿ ಹಂಚುತ್ತಿದ್ದಾರೆ. ಎರಡೇ ದಿನದಲ್ಲಿ ಸಿನಿಮಾ ವಿಶ್ವಾದ್ಯಂತ ರು.14.35 ಕೋಟಿ ಗಳಿಸಿದೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಜೀ ಸ್ಟುಡಿಯೋಸ್ ಘೋಷಿಸಿದೆ. ಕಾಶ್ಮೀರ್ ಫೈಲ್ಸ್ ಬಿಡುಗಡೆ ಮುನ್ನವೇ ಪ್ರೀಮಿಯರ್ ಶೋ ನೋಡಿದ ಅನೇಕರು ಕಣ್ಣೀರು ಹಾಕುವ, ಚಿತ್ರತಂಡದವರಿಗೆ ಭಾವುಕರಾಗಿ ಕೈ ಮುಗಿಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಅದನ್ನು ನೋಡಿದ ಬಹುತೇಕರು ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದರು. ಸಿನಿಮಾದ ಕುರಿತು ಮೊದಲೇ ಗೊತ್ತಿದ್ದವರು ಮೊದಲ ದಿನವೇ ಸಿನಿಮಾ ನೋಡುವ ನಿರ್ಧಾರ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಕಾಶ್ಮೀರ್ ಫೈಲ್ಸ್ ಸಿನಿಮಾ ಇಡೀ ದೇಶದ ಗಮನ ಸೆಳೆಯುತ್ತಿದೆ. ಈ ಮಧ್ಯೆ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಈ ಸಿನಿಮಾ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂಬ ಹೇಳಿಕೆ ನೀಡಿದ್ದು ಅನೇಕರನ್ನು ಕೆರಳಿಸಿತ್ತು.ಕಾಶ್ಮೀರ್ ಫೈಲ್ಸ್ ಸಿನಿಮಾ 1990ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಆಧರಿಸಿದ ಸಿನಿಮಾ. ಹತ್ಯಾಕಾಂಡದಲ್ಲಿ ತಪ್ಪಿಸಿಕೊಂಡು ಬಂದವರ ಸಂದರ್ಶನಗಳನ್ನು ಆಧರಿಸಿದ ಸಿನಿಮಾ.
ಈ ಕುರಿತು ಮಾತನಾಡುತ್ತಾ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ಇಷ್ಟು ದಿನ ಸತ್ಯ ಮುಚ್ಚಿಡಲಾಗಿತ್ತು. ಈಗ ಈ ಸಿನಿಮಾ ಬರುವ ಮೊದಲೇ ಕೆಲವರು ಇದೊಂದು ಪ್ರೊಪಗಾಂಡ ಎಂದು ಹೇಳಿದರು. ಬಾಲಿವುಡ್ನ ದೊಡ್ಡವರು ಈ ಸಿನಿಮಾದ ಬಗ್ಗೆ ಮಾತೇ ಆಡುತ್ತಿಲ್ಲ. ವ್ಯವಸ್ಥಿತವಾಗಿ ಸಿನಿಮಾವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ದೂಷಿಸಿದ್ದರು. ಈ ವಿಚಾರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅನೇಕರು ಸ್ವಯಂಸ್ಫೂರ್ತಿಯಿಂದ ಈ ಸಿನಿಮಾ ನೋಡಲು ಬೇರೆಯವರನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ಬಹುತೇಕರು ಉಚಿತವಾಗಿ ಟಿಕೆಟ್ ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಭಾನುವಾರ ಕೆಲವು ಥಿಯೇಟರ್ ಖಾಲಿ ಇದ್ದರೂ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂಬ ವಿಚಾರ ಹಬ್ಬಿತು.
The Kashmir Files ಯಾವ ಕಾರಣಕ್ಕೆ ನೀವು ಕಾಶ್ಮೀರಿ ಪಂಡಿತರ ವಲಸೆ ಕುರಿತ ಸಿನಿಮಾ ನೋಡಬೇಕು?
ಮತ್ತೆ ಸಿನಿಮಾ ಹತ್ತಿಕ್ಕಲಾಗುತ್ತಿದೆ ಎಂಬ ವಿಚಾರ ಮುನ್ನೆಲೆಗೆ ಬಂದು ಸಿನಿಮಾ ಪರವಾದ ಚರ್ಚೆಗಳು ಜೋರಾಗಿಯೇ ನಡೆಯತೊಡಗಿ ಬಹುತೇಕ ಕಡೆಗಳಲ್ಲಿ ಶೋ ಹೌಸ್ಫುಲ್ ಆಯಿತು. ಬಹಳಷ್ಟು ಕಡೆ ಪ್ರದರ್ಶನಗಳ ಸಂಖ್ಯೆ ಹೆಚ್ಚಿಸಲಾಗಿದೆ. ಭಾನುವಾರ ಹೆಚ್ಚಿನ ವಹಿವಾಟು ನಿರೀಕ್ಷೆ ಮಾಡಲಾಗಿದೆ. ಈ ಚಿತ್ರಕ್ಕೆ ವ್ಯಾಪಲ ಬೆಂಬಲ ಸಿಕ್ಕಿದ್ದು, ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಚಿತ್ರತಂಡದವರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ಗುಜರಾತ್ ಸರ್ಕಾರ ಈ ಚಿತ್ರಕ್ಕೆ ತೆರಿಗೆ ಮನ್ನಾ ಮಾಡಿದೆ. ಚಿತ್ರಕ್ಕೆ ದೊರೆತ ಜನಮನ್ನಣೆಯಿಂದ ಚಿತ್ರತಂಡ ಖುಷಿಯಾಗಿದೆ. ಈ ಕುರಿತು ಮಾತನಾಡಿರುವ ಅನುಪಮ್ ಖೇರ್, ಇಷ್ಟು ದಿನ ಸತ್ಯವನ್ನು ಮುಚ್ಚಿಹಾಕಲಾಗಿತ್ತು.
ಸತ್ಯ ಯಾವತ್ತಾದರೂ ಹೊರ ಬರಲೇಬೇಕು, 32 ವರ್ಷಗಳ ಬಳಿಕವಾದರೂ ಸರಿ ಎಂದು ಹೇಳಿದ್ದಾರೆ. ಅನುಪಮ್ ಖೇರ್ ಸ್ವತಃ ಕಾಶ್ಮೀರಿ ಪಂಡಿತ ಸಮುದಾಯದ ವ್ಯಕ್ತಿ ಎಂಬುದು ಗಮನಾರ್ಹ. ಸಿನಿಮಾ ಕುರಿತಾದ ಮಾತುಕತೆ, ವಹಿವಾಟು ಗಮನಿಸಿದರೆ ಇನ್ನೂ ಹಲವು ದಿನಗಳ ಕಾಲ ಈ ಸಿನಿಮಾ ಕುರಿತ ಚರ್ಚೆ ನಡೆಯುವ ನಿರೀಕ್ಷೆ ಇದೆ. ವಹಿವಾಟಿನಲ್ಲೂ ಬಾಲಿವುಡ್ನಲ್ಲಿ ಈ ಸಿನಿಮಾ ದಾಖಲೆ ಬರೆಯುವ ಸಾಧ್ಯತೆ ಇದೆ. ಈ ಸಿನಿಮಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಹಿಂದೆ 'ತಾಷ್ಕೆಂಟ್ ಫೈಲ್ಸ್' ಸಿನಿಮಾ ನಿರ್ದೇಶನ ಮಾಡಿದ್ದರು.
ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ
-1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕತೆ ಆಧರಿಸಿದ ಸಿನಿಮಾ.
-ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಚಿತ್ರತಂಡಕ್ಕೆ ಮೆಚ್ಚುಗೆ.
-ಐಎಂಡಿಬಿಯಲ್ಲಿ 10ರಲ್ಲಿ 10 ರೇಟಿಂಗ್ ಗಳಿಸಿದ ಸಿನಿಮಾ.
-ಎರಡನೇ ದಿನ ಪ್ರದರ್ಶನ ಸಂಖ್ಯೆ ಮತ್ತು ಕಲೆಕ್ಷನ್ನಲ್ಲಿ ಗಣನೀಯ ಏರಿಕೆ.
-ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ಮನ್ನಾ ಘೋಷಿಸಿದ ಗುಜರಾತ್ ಸರ್ಕಾರ.
The Kashmir Files: ಕಾಶ್ಮೀರ್ ಫೈಲ್ಸ್ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ
ಈ ಸಿನಿಮಾದಲ್ಲಿ ನಾನು ಅಭಿನಯಿಸಲಿಲ್ಲ. ಕಾಶ್ಮೀರ್ ಫೈಲ್ಸ್ ಡೈಲಾಗ್ಗಳಿಂದ ತುಂಬಿದ ಬರಿಯ ಕತೆ ಮಾತ್ರ ಅಲ್ಲ. 32 ವರ್ಷಗಳ ಹಿಂದೆ ಲಕ್ಷಾಂತರ ಹಿಂದೂಗಳ ಮಾರಣಹೋಮ ನಡೆಯಿತು. ಎಷ್ಟೋ ಮಂದಿ ನಾಪತ್ತೆಯಾದರು. ಎಷ್ಟೋ ಜನರ ಕತೆಯೇ ಗೊತ್ತಾಗಲಿಲ್ಲ. ಯಾರೂ ಆ ಬಗ್ಗೆ ಮಾತನಾಡಲೇ ಇಲ್ಲ. ಇಲ್ಲಿಯವರೆಗೆ ಯಾವುದೇ ಮೊಕದ್ದಮೆ ದಾಖಲಾಗಿಲ್ಲ. ಯಾವುದೇ ಆಯೋಗ ರಚನೆ ಆಗಿಲ್ಲ. ದೋಷಿ ಎಂದು ಯಾರನ್ನೂ ಗುರುತಿಸಲಾಗಿಲ್ಲ. ಯಾರಿಗೂ ಶಿಕ್ಷೆಯೇ ಆಗಲಿಲ್ಲ. ನ್ಯಾಯಮಂದಿರಗಳು ನಮ್ಮ ಕತೆಯನ್ನು ಕೇಳಲಿಲ್ಲ. ಕಾಶ್ಮೀರ್ ಫೈಲ್ಸ್ ಸಿನಿಮಾ ಅಲ್ಲ, ಬದಲಾಗಿ ನಾವು ಕಾಶ್ಮೀರಿ ಹಿಂದೂಗಳು ನಿಮ್ಮ ಅಂತರಾತ್ಮ ಎಂಬ ನ್ಯಾಯಲಯವನ್ನು ತಟ್ಟಿ ಬಡಿದೆಬ್ಬಿಸುವ ಪ್ರಯತ್ನ. ಅನುಪಮ್ ಖೇರ್ ಬದಲಾಗಿ ಪುಷ್ಕರ್ ನಾಥ್ ಆಗಿ ನಿಮ್ಮೆಲ್ಲರನ್ನು ಕೇಳುತ್ತಿದ್ದೇನೆ, ಕಾಶ್ಮೀರ್ ಫೈಲ್ ಮೂಲಕ ನನ್ನನ್ನು ಭೇಟಿಯಾಗಿ.
-ಅನುಪಮ್ ಖೇರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.