
ಮಾಧವನ್ ಈ ಸ್ಟೋರಿ ಎಲ್ಲರಿಗೂ ಗೊತ್ತಾಗ್ಬೇಕು!
ಸಿನಿಮಾ ರಂಗದಲ್ಲಿ ಒಂದು ಹಿಟ್ ಸಿಕ್ಕರೆ ಸಾಕು, ಅವಕಾಶಗಳ ಸುರಿಮಳೆಯೇ ಆಗುತ್ತದೆ. ಇನ್ನು ಸ್ಟಾರ್ ನಟರಾಗಿ ಮಿಂಚುತ್ತಿರುವಾಗಲಂತೂ ಬಿಡುವಿಲ್ಲದ ಶೂಟಿಂಗ್, ಕೋಟಿ ಕೋಟಿ ಸಂಭಾವನೆ, ಅಭಿಮಾನಿಗಳ ಜೈಕಾರ.. ಹೀಗೆ ಎಲ್ಲವೂ ಇರುತ್ತದೆ. ಆದರೆ, ಇವೆಲ್ಲವೂ ಇದ್ದಾಗಲೂ 'ಚಾಕೊಲೇಟ್ ಬಾಯ್' ಆರ್. ಮಾಧವನ್ (R Madhavan) ದಿಢೀರನೆ ಬಣ್ಣದ ಲೋಕದಿಂದ ನಾಲ್ಕು ವರ್ಷಗಳ ಕಾಲ ಮಾಯವಾಗಿದ್ದರು! ಅಷ್ಟಕ್ಕೂ ಯಶಸ್ಸಿನ ಶಿಖರದಲ್ಲಿದ್ದಾಗ ಮಾಧವನ್ ಇಂತಹ ನಿರ್ಧಾರ ತಗೆದುಕೊಂಡಿದ್ದು ಏಕೆ? ಅದರ ಹಿಂದಿನ ಅಸಲಿ ರಹಸ್ಯವೇನು?
ಬದುಕು ಬದಲಿಸಿದ ಸ್ವಿಟ್ಸರ್ಲೆಂಡ್ನ ಆ ರೈತ!
ಇತ್ತೀಚೆಗೆ 'ಅನ್ಫಿಲ್ಮರ್ಡ್ ಎಂಟರ್ಟೈನ್ಮೆಂಟ್' ಎಂಬ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಧವನ್, ತಮ್ಮ ಬದುಕಿನ ಆ ಕಠಿಣ ಮತ್ತು ಮಹತ್ವದ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 2016ರಲ್ಲಿ 'ಸಾಲಾ ಖಡೂಸ್' ಸಿನಿಮಾ ಬಿಡುಗಡೆಯಾಗುವ ಮುನ್ನ ಮಾಧವನ್ ನಾಲ್ಕು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ವಿರಾಮಕ್ಕೆ ಕಾರಣವಾಗಿದ್ದು ಸ್ವಿಟ್ಸರ್ಲೆಂಡ್ನಲ್ಲಿ ನಡೆದ ಒಂದು ಸಣ್ಣ ಘಟನೆ.
ಒಮ್ಮೆ ಸ್ವಿಟ್ಸರ್ಲೆಂಡ್ನ ಸುಂದರ ತಾಣದಲ್ಲಿ ತಮಿಳು ಸಿನಿಮಾವೊಂದರ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಮಾಧವನ್ ಅವರು ಕೇಸರಿ ಬಣ್ಣದ ಪ್ಯಾಂಟ್ ಮತ್ತು ಹಸಿರು ಶರ್ಟ್ ಧರಿಸಿ ರಸ್ತೆಯ ಮಧ್ಯೆ ಕುಣಿಯುತ್ತಿದ್ದರು. ಆಗ ರಸ್ತೆ ಬದಿಯಲ್ಲಿ ಚಹಾ ಕುಡಿಯುತ್ತಾ ಕುಳಿತಿದ್ದ ಒಬ್ಬ ಸ್ಥಳೀಯ ರೈತ, ಮಾಧವನ್ ಅವರನ್ನು ಬಹಳ ವಿಚಿತ್ರವಾಗಿ ಮತ್ತು ತಾತ್ಸಾರವಾಗಿ ನೋಡಿದನಂತೆ. "ಈ ಮನುಷ್ಯ ಏನು ಮಾಡುತ್ತಿದ್ದಾನೆ?" ಎಂಬ ಆ ರೈತನ ನೋಟ ಮಾಧವನ್ ಅವರ ಮನಸ್ಸಿಗೆ ನೇರವಾಗಿ ನಾಟಿತು. "ನಾನು ನನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದೇನಾ ಅಥವಾ ಬೇರೆಯವರ ತಾಳಕ್ಕೆ ತಕ್ಕಂತೆ ಬರಿ ಗೊಂಬೆಯಂತೆ ಕುಣಿಯುತ್ತಿದ್ದೇನಾ?" ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು.
ಪತ್ನಿಯ ಮಾತು ಮತ್ತು ಒಳಗಿನ ಅಸಮಾಧಾನ
ಕೇವಲ ಆ ಘಟನೆ ಮಾತ್ರವಲ್ಲ, ಮಾಧವನ್ ಅವರ ಪತ್ನಿ ಸರಿತಾ ಬುರ್ಜೆ ಕೂಡ ಅವರಲ್ಲಾಗುತ್ತಿದ್ದ ಬದಲಾವಣೆಯನ್ನು ಗಮನಿಸಿದ್ದರು. "ನೀನು ಕೆಲಸಕ್ಕೆ ಹೋಗುವಾಗ ಸಂಭ್ರಮದಿಂದ ಹೋಗುತ್ತಿಲ್ಲ, ಬದಲಾಗಿ ಯಾವುದೋ ಶಿಕ್ಷೆ ಅನುಭವಿಸಲು ಹೋಗುವಂತೆ ಕಾಣುತ್ತಿದ್ದೀಯಾ" ಎಂದು ಪತ್ನಿ ಹೇಳಿದಾಗ ಮಾಧವನ್ ಅವರಿಗೆ ತಮಗೆ 'ಕೆರಿಯರ್ ಡಿಸಿಲ್ಯೂಷನ್ಮೆಂಟ್' (ವೃತ್ತಿ ಬದುಕಿನ ಜಿಗುಪ್ಪೆ) ಕಾಡುತ್ತಿರುವುದು ಮನವರಿಕೆಯಾಯಿತು. ಅಂದೇ ಅವರು ಬ್ರೇಕ್ ತಗೆದುಕೊಳ್ಳಲು ನಿರ್ಧರಿಸಿದರು.
ಈ ನಾಲ್ಕು ವರ್ಷಗಳ ಕಾಲ ಅವರು ಗಡ್ಡ ಬಿಟ್ಟು, ಸಾಮಾನ್ಯರಂತೆ ಭಾರತದಾದ್ಯಂತ ಪ್ರವಾಸ ಮಾಡಿದರು. ಚೆನ್ನೈನ ಆಟೋ ಚಾಲಕರ ಜೊತೆ ಕುಳಿತು ಅವರ ಕಷ್ಟಗಳನ್ನು ಕೇಳಿದರು. ತಮಗೆ ತಾವೇ ಸಮಯ ನೀಡಿಕೊಂಡರು. ಈ ಸಮಯದಲ್ಲಿ ಅವರು ಜಾಹೀರಾತುಗಳಲ್ಲಿ ನಟಿಸುವುದನ್ನೂ ನಿಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಮಾಧವನ್ ಅವರಿಗೆ ಬಿಹಾರದ ರೋಹಿತ್ ಕುಮಾರ್ ಅವರ ಕಥೆ ಸ್ಫೂರ್ತಿ ನೀಡಿತು. ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದ ರೋಹಿತ್, ಕೇವಲ 125 ರೂಪಾಯಿಯಲ್ಲಿ ಆರಂಭಿಸಿದ ಪಾಠಶಾಲೆ ಇಂದು ಸಾವಿರಾರು ಬಡ ಮಕ್ಕಳಿಗೆ ವಿಜ್ಞಾನದ ಬೆಳಕಾಗಿದೆ. ಯಶಸ್ಸು ಎಂದರೆ ಕೇವಲ ಹಣವಲ್ಲ, ಅದು ನಾವು ಮಾಡುವ ಕೆಲಸದಲ್ಲಿ ನಮಗೆ ಸಿಗುವ ತೃಪ್ತಿ ಎಂಬುದು ಮಾಧವನ್ ಅವರಿಗೆ ಅರ್ಥವಾಯಿತು.
ಬರ್ನ್ಔಟ್ ಅಥವಾ ಜಿಗುಪ್ಪೆ?
ಮನಶ್ಶಾಸ್ತ್ರಜ್ಞರ ಪ್ರಕಾರ, ನಾವು ಅತಿಯಾದ ಕೆಲಸದಿಂದ ಸುಸ್ತಾದರೆ ಅದನ್ನು 'ಬರ್ನ್ಔಟ್' ಎನ್ನಬಹುದು. ಅದಕ್ಕೆ ಒಂದು ವಾರದ ವಿಶ್ರಾಂತಿ ಸಾಕಾಗುತ್ತದೆ. ಆದರೆ ಮಾಧವನ್ ಅನುಭವಿಸಿದ್ದು 'ಜಿಗುಪ್ಪೆ'. ಇದು ಮೌನವಾಗಿ ಬರುತ್ತದೆ. ನಮಗೆ ನಾವು ಮಾಡುವ ಕೆಲಸದ ಮೇಲೆಯೇ ಗೌರವ ಇಲ್ಲದಂತಾದಾಗ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇಂದು ಮಾಧವನ್ ಕೇವಲ ನಟನಾಗಿ ಮಾತ್ರವಲ್ಲದೆ, 'ರಾಕೆಟ್ರಿ'ಯಂತಹ ಸಿನಿಮಾಗಳ ಮೂಲಕ ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ಆ ನಾಲ್ಕು ವರ್ಷಗಳ ವಿರಾಮ ಅವರ ವೃತ್ತಿಜೀವನಕ್ಕೆ ಹೊಸ ಶಕ್ತಿ ನೀಡಿತು. ನಿಮಗೂ ನಿಮ್ಮ ಕೆಲಸದ ಮೇಲೆ ಬೇಸರವಾಗುತ್ತಿದ್ದರೆ, ಒಂದು ಸಣ್ಣ ಬ್ರೇಕ್ ತಗೆದುಕೊಂಡು ನಿಮ್ಮ ಮನಸ್ಸಿನ ಮಾತು ಕೇಳಿ ನೋಡಿ! ಜೀವನ ಎಂದರೆ ಕೇವಲ ಓಡುವುದಲ್ಲ, ಅದನ್ನು ಸಂಭ್ರಮಿಸುವುದು ಕೂಡ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.