
ಚೆನ್ನೈ (ಮೇ.20): ಸಿನಿಮಾ ಜಗತ್ತಿನಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಚಿತ್ರರಂಗದಲ್ಲಿ ಕೆಲಸ ಮಾಡುವ ಕಲಾವಿದರು ಪ್ರೀತಿಯಲ್ಲಿ ಬೀಳುವುದು, ಎರಡು-ಮೂರು ಮದುವೆಯಾಗುವುದು ಹೊಸದೇನಲ್ಲ. ಅದೇ ರೀತಿ ಹಲವು ನಟ-ನಟಿಯರು ಧರ್ಮ ಬದಲಾಯಿಸಿಕೊಂಡಿರುವುದೂ ಉಂಟು. ಇನ್ನು ಕೆಲವರು ರಾಜಕೀಯದಲ್ಲಿ ಸಕ್ರಿಯರಾಗಿ ಶಾಸಕ, ಸಂಸದರಾಗಿಯೂ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಂತೂ ಸ್ಟಾರ್ ನಟ ದಳಪತಿ ವಿಜಯ್ ಅವರು ನೇರವಾಗಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಪೀಠವನ್ನೇ ಅಲಂಕರಿಸಿದ್ದಾರೆ. ಈಗ ಇದೇ ಮುಖ್ಯಮಂತ್ರಿ ವಿಜಯ್ ಅವರ ಜೊತೆ ನಟಿಸಿದ್ದ ಸಹಕಲಾವಿದರೊಬ್ಬರು ಇಸ್ಲಾಂ ಧರ್ಮ ಸ್ವೀಕರಿಸಿರುವ ದೊಡ್ಡ ಸುದ್ದಿ ಬೆಳಕಿಗೆ ಬಂದಿದೆ.
ನಟ ವಿಜಯ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಜೈ ಅಲಿಯಾಸ್ ಜೈ ಸಂಪತ್ ಈಗ ಅಧಿಕೃತವಾಗಿ ಇಸ್ಲಾಂ ಧರ್ಮವನ್ನು ಅಪ್ಪಿಕೊಂಡಿದ್ದಾರೆ.
ನಟ ಜೈ ಸಂಪತ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದರ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ವಿಶೇಷವೆಂದರೆ, ಜೈ ಅವರು ನಿನ್ನೆಯೋ ಇಂದೋ ಧರ್ಮ ಬದಲಾಯಿಸಿಕೊಂಡಿದ್ದಲ್ಲ; ಅವರು ಕಳೆದ 2011 ರಿಂದಲೇ ಇಸ್ಲಾಂ ಧರ್ಮದ ರೀತಿರಿವಾಜು ಹಾಗೂ ಆಚರಣೆಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಇದರ ಮುಂದುವರಿದ ಭಾಗವಾಗಿ, "ನಾನು ಶೀಘ್ರದಲ್ಲೇ ಕಾನೂನಾತ್ಮಕವಾಗಿ ನನ್ನ ಹೆಸರನ್ನು ಸಹ ಬದಲಾಯಿಸಿಕೊಳ್ಳಲಿದ್ದೇನೆ" ಎಂದು ನಟ ಜೈ ಬಹಿರಂಗಪಡಿಸಿದ್ದಾರೆ.
ವಿಜಯ್ ಮತ್ತು ಜೈ ಅವರು ಮುಂಚೆ 'ಭಗವತಿ' (Bagavathi) ಎಂಬ ಸೂಪರ್ ಹಿಟ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಜೈ ಅವರು ವಿಜಯ್ ಅವರ ಕಿರಿಯ ಸಹೋದರನ ಪಾತ್ರವನ್ನು ನಿರ್ಷಹಿಸಿದ್ದರು. ಈ ಚಿತ್ರದ ಬಳಿಕ ಜೈ ಅವರ ಸಿನಿಮಾ ಕೆರಿಯರ್ ದೊಡ್ಡ ಮಟ್ಟಕ್ಕೆ ಬೆಳೆಯಲಿದೆ ಎಂದೇ ಚಿತ್ರರಂಗದಲ್ಲಿ ಮಾತನಾಡಿಕೊಳ್ಳಲಾಗಿತ್ತು. ಆದರೆ, ಜೈ ಅವರಿಗೆ ಚಿತ್ರರಂಗದಲ್ಲಿ ಅಂದುಕೊಂಡಷ್ಟು ದೊಡ್ಡ ಯಶಸ್ಸು ಸಿಗಲಿಲ್ಲ. ಇತ್ತೀಚೆಗೆ 'ಗಲಾಟಾ ಪ್ಲಸ್' ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನಟ ಜೈ ತಾವು ಧರ್ಮ ಬದಲಾಯಿಸಲು ಕಾರಣವಾದ ಆ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ.
"ನಾನು ಮೊದಲ ಬಾರಿಗೆ ಮಸೀದಿಗೆ ಹೋದಾಗ, ಅಲ್ಲಿದ್ದ ಎಲ್ಲರಿಗೂ ನಾನು ಒಬ್ಬ ಸಿನಿಮಾ ನಟ ಎಂಬ ವಿಷಯ ಗೊತ್ತಿತ್ತು. ಆದರೆ, ಮಸೀದಿಯ ಒಳಗಿರುವಾಗ ನನ್ನ ಜೊತೆ ಯಾರೂ ಮಾತನಾಡಲು ಬರಲಿಲ್ಲ, ಯಾರೂ ನನ್ನ ಜೊತೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳಲಿಲ್ಲ. ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಗೆ ಬಂದ ನಂತರವಷ್ಟೇ ಎಲ್ಲರೂ ನನ್ನನ್ನು ಮಾತಾಡಿಸಿದರು. ಇಸ್ಲಾಂ ಧರ್ಮದಲ್ಲಿ ಮಸೀದಿಯ ಒಳಗೆ ಹೋದರೆ ಎಲ್ಲರೂ ಸಮಾನರು, ಅಲ್ಲಿ ಅಲ್ಲಾಹ್ ಮಾತ್ರ ಸರ್ವೋಚ್ಚ. ಅಲ್ಲಿ ಯಾರೂ ಸೆಲೆಬ್ರಿಟಿಗಳಲ್ಲ ಎಂಬುದನ್ನು ಆ ಕ್ಷಣ ನಾನು ಮನಗಂಡೆ. ಆ ಒಂದು ಘಟನೆ ನನ್ನ ಸ್ವಭಾವವನ್ನೇ ಸಂಪೂರ್ಣವಾಗಿ ಬದಲಾಯಿಸಿತು." ಎಂದು ಹೇಳಿದ್ದಾರೆ. ಅಲ್ಲಿ ಸಿಕ್ಕ ಸಮಾನತೆ ಮತ್ತು ಶಾಂತಿಯೇ ತಾವು ಇಸ್ಲಾಂ ಧರ್ಮವನ್ನು ಆಕರ್ಷಿಸಲು ಮತ್ತು ಅಪ್ಪಿಕೊಳ್ಳಲು ಮುಖ್ಯ ಕಾರಣ ಎಂದು ನಟ ಜೈ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.