Vikranth Rona: ಸಿನಿಮಾ ನೋಡಲು ಬಂದವರು ಸಿನಿಮಾ ಸ್ಟೈಲಲ್ಲಿ ಹೊಡೆದಾಡಿ ಆಸ್ಪತ್ರೆ ಸೇರಿದ್ರು..!

By Suvarna NewsFirst Published Jul 28, 2022, 7:57 PM IST
Highlights

ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಯುವಕರು ನಡು ರಸ್ತೆಯಲ್ಲಿ ಲಾಂಗ್‌ನಿಂದ  ಹೊಡೆದಾಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಯುವಕರು ನಡು ರಸ್ತೆಯಲ್ಲಿ ಲಾಂಗ್‌ನಿಂದ  ಹೊಡೆದಾಡಿದ್ದಾರೆ. ಸಿನಿಮಾ ನೋಡಲು ಬಂದವರು ಸಿನಿಮಾ ಸ್ಟೈಲ್ ನಲ್ಲಿ  ಹೊಡೆದಾಟ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಸಿನಿಮಾ ನೋಡುವ ವೇಳೆ ಕಿರಿಕ್

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನ ವೇಳೆ ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಲಾಂಗ್-ಮಚ್ಚುಗಳಿಂದ ಹೊಡೆದಾಡಿರುವ ಘಟನೆ ಚಿಕ್ಕಮಗಳೂರು ನಗರದ ಮಿಲನ್ ಥಿಯೇಟರ್‌ನಲ್ಲಿ ನಡೆದಿದೆ. ಮಿಲನ್ ಥಿಯೇಟರ್‌ನಲ್ಲಿ ಮ್ಯಾಟ್ನಿ ಶೋ ಆರಂಭವಾಗುತ್ತಿದ್ದಂತೆ ಥಿಯೇಟರ್ ಒಳಗೆ ಬಾಗಿಲ ಪಕ್ಕದ ಸೀಟಿನಲ್ಲಿ ಕೂತಿದ್ದ ಒಂದು ಯುವಕರ ಗುಂಪು ಮೇಲಿಂದ ಮೇಲೆ ಹೊರಗಡೆ ಹೋಗಿ ಬರುತ್ತಿದ್ದರು. ಈ ವೇಳೆ ಮತ್ತೊಂದು ಗುಂಪಿನ ಯುವಕರು ಎಷ್ಟು ಸಲ ಹೊರಗೆ ಹೋಗಿ ಬರ್ತಿರೋ ಎಂದು ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಈ ವೇಳೆ ಲಾಂಗ್-ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ.

Movie Review: ವಿಕ್ರಾಂತ್ ರೋಣ 3ಡಿ ಚಿತ್ರ ಹೇಗಿದೆ? ರಕ್ಕಮ್ಮ ಎಂಟ್ರಿ ಮಜವೋ ಮಜಾ

ನೆಲಕ್ಕೆ ಬಿದ್ದರೂ ಬಿಡದೆ ಹಲ್ಲೆಗೈದ ಯುವಕರು

ಥಿಯೇಟರ್ ಒಳಗೆ ಆರಂಭವಾದ ಜಗಳ ಟಾಕೀಸ್‌ ಹೊರಾಂಗಣದಲ್ಲೂ ಮುಂದುವರೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ, ಕೆಳಕ್ಕೆ ಬಿದ್ದರೂ ಬಿಡದೆ ಹಲ್ಲೆ ಮಾಡಿ ಲಾಂಗ್ ಬೀಸಿದ್ದಾರೆ. ಈ ವೇಳೆ, ಭರತ್ ಎಂಬ ಯುವಕನಿಗೆ ತೀವ್ರ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಿದ್ದಾರೆ. ಹಲ್ಲೆಗೊಳಗಾದ ಯುವಕರನ್ನು ಭರತ್ ಗಣೇಶ್, ಪ್ರೀತಂ, ಈಶ್ವರ್, ಜೀವನ್, ಪ್ರಜ್ವಲ್, ಪನ್ನು, ಸಚಿನ್ ಹಾಗೂ ಇನ್ನೂ ನಾಲ್ಕು ಯುವಕರು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಭರತ್ ಹೇಳಿದ್ದಾರೆ.

20 ಕೋಟಿ, 15 ಸೆಟ್, ಒಂದೇ ಒಂದು ಮಾಸ್ಟರ್ಮೈಂಡ್; ವಿಕ್ರಾಂತ್ ರೋಣ ಪ್ರಪಂಚದ ರೌಂಡ್ಸ್

ಎಲ್ಲರೂ ಸೇರಿ ಚುಚ್ಚಿ ಹೊಡೆದಿದ್ದಾರೆ. ತಲೆ ಫುಲ್ ಓಪನ್ ಆಗಿದೆ ಎಂದು ಅವರು ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಭರತ್ ಕಡೆ ಹುಡುಗರು ಕೂಡ ಆಸ್ಪತ್ರೆ ಮುಂಭಾಗ ಸೇರಿ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆ ಮುಂಭಾಗ ಯುವಕರ ಗುಂಪನ್ನ ಕಂಡ ಪೊಲೀಸರು ಲಾಠಿ ಬೀಸಿ ಬೆದರಿಸಿ ಎಲ್ಲರನ್ನೂ ಚದುರಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೆ ಹಳೇ ವೈಷಮ್ಯವೇ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.
 

click me!