ಶಾರುಖ್​ ಪುತ್ರನ ಡ್ರಗ್ಸ್​ ಕೇಸ್: ಕೊನೆಗೂ ಮೌನ ಮುರಿದ ಮಾಡೆಲ್​ ಮುನ್ಮುನ್ ಧಮೇಚಾ!

By Suvarna NewsFirst Published May 18, 2023, 1:47 PM IST
Highlights

ಶಾರುಖ್​ ಪುತ್ರ  ಆರ್ಯನ್​ ಖಾನ್​ ವಿರುದ್ಧದ ಡ್ರಗ್ಸ್​ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಡೆಲ್​ ಮುನ್ಮುನ್​ ಧಮೇಚಾ ಕುತೂಹಲಕಾರಿ ವಿಷಯಗಳನ್ನು ತಿಳಿಸಿದ್ದಾರೆ. ಏನದು? 
 

2021ರಲ್ಲಿ ಭಾರಿ ಸದ್ದು ಮಾಡಿದ್ದ ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಕೇಸ್​ ನೆನಪಿರಬೇಕಲ್ಲವೆ? ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು. ಇದಕ್ಕೆ  ಕಾರಣ, ಅದರಲ್ಲಿ ಸಿಲುಕಿದ್ದು ನಟ ಶಾರುಖ್​ ಖಾನ್​ (Shah Rukh Khan) ಅವರ ಪುತ್ರ ಅರ್ಯನ್​ ಖಾನ್​ ಎನ್ನುವುದಕ್ಕೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್​ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.  ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್​ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್​ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್​ ಕ್ಲೀನ್​ ಚಿಟ್​ ನೀಡಿತ್ತು. ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್​ನಲ್ಲಿ ಒಳಗೇ ಇದ್ದರೆ, ಆರ್ಯನ್​ ಖಾನ್​ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು.

ಇದರ ನಡುವೆಯೇ,  ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ ಕೊಡಿಸಲು ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್‌ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು. ಅದರ ಬಳಿಕ ಇವರ ವಿರುದ್ಧ ಈಚೆಗೆ ಎಫ್​ಐಆರ್​ ದಾಖಲಿಸಲಾಗಿದ್ದು, ಇನ್ನಷ್ಟು ಆರೋಪಗಳನ್ನು ಮಾಡಲಾಗಿದೆ.  ಸಮೀರ್‌ ವಾಂಖೇಡೆ ಸಾಕಷ್ಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದರು. ಆದರೆ ಇವುಗಳ ಖರ್ಚು-ವೆಚ್ಚವನ್ನು ಅವರು ಸರಿಯಾಗಿ ತೋರಿಸಿಲ್ಲ. ವಿದೇಶಗಳ ಭೇಟಿಯ ಹಣದ ಮೂಲವನ್ನೂ ಅವರು ಹೇಳಿಲ್ಲ. ಇಲಾಖೆಯ ಗಮನಕ್ಕೆ ತಾರದೇ ಒಂದು ಕಂಪನಿಯ ಜತೆ ದುಬಾರಿ ವಾಚ್‌ಗಳ ಖರೀದಿ ಹಾಗೂ ಮಾರಾಟದ ವ್ಯವಹಾರ ನಡೆಸುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ.

ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌: ಶಾರುಖ್‌ ಖಾನ್‌ ಬಳಿ 25 ಕೋಟಿ ಲಂಚ ಪಡೆಯಲು ಸಮೀರ್‌ ವಾಂಖೇಡೆ ಸಂಚು

ಇದರ ನಡುವೆಯೇ ಡ್ರಗ್ಸ್​ ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತೋರ್ವ ಆರೋಪಿ  ಮಾಡೆಲ್ ಮುನ್ಮುನ್ ಧಮೇಚಾ ಅವರು ಎನ್‌ಸಿಬಿಯ ವಿವಾದಿತ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಾಧ್ಯಮಗಳ ಗಮನ ಸೆಳೆಯುವ ಉದ್ದೇಶದಿಂದ  ವಾಂಖೆಡೆ ಸೆಲೆಬ್ರಿಟಿಗಳ ಮೇಲೆ ಡ್ರಗ್ಸ್​ ಆರೋಪ ಮಾಡಿದ್ದರು. ತಾನು ಮಾಡೆಲ್ ಎನ್ನುವ ಕಾರಣಕ್ಕೆ ನನ್ನ ವಿರುದ್ಧವೂ ಡ್ರಗ್ಸ್​ ಆರೋಪ ಮಾಡಿದ್ದಾರೆ ಎಂದು ಮುನ್ಮುನ್​ಹೇಳಿದ್ದಾರೆ.  ಘಟನೆ ನಡೆದು ವರ್ಷಗಳ ಬಳಿಕ ಮೌನ ಮುರಿದಿರುವ ನಟಿ,  ಮುನ್ಮುನ್​ ಧಮೇಚಾ  (Munmun Dhamecha), ನನ್ನನ್ನು  ಮತ್ತು ಅರ್ಬಾಜ್ ಮರ್ಚೆಂಟ್ (Arbaaz Merchant) ಸೇರಿ 8 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಎಲ್ಲರೂ ಸೆಲೆಬ್ರಿಟಿಗಳು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿತ್ತು ಎಂದಿದ್ದಾರೆ.

 ವಾಂಖೆಡೆ ದೊಡ್ಡ ಅಧಿಕಾರಿಯಾಗಿದ್ದರಿಂದ ನಾನು ಹೇಳಲು ಭಯಪಟ್ಟಿದ್ದೆ.  ಈ ವಿವರಗಳನ್ನು ಬಹಿರಂಗಪಡಿಸಲು ಇಷ್ಟವಿರಲಿಲ್ಲ. ಈಗ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ಸತ್ಯಾಂಶ ಹೊರಬರುವ ಭರವಸೆ ನನಗಿದೆ. ಅವರು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ನನ್ನಂತಹ ಅನೇಕ ವ್ಯಕ್ತಿಗಳನ್ನು ತಪ್ಪಾಗಿ ಸಿಲುಕಿಸಿದ್ದಾರೆ. ವಾಂಖೆಡೆಯವರು ಮಾಡೆಲ್‌ಗಳು ಮತ್ತು ಸೆಲೆಬ್ರಿಟಿಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡವರು ಎಂದಿದ್ದಾರೆ. ಈ ಪ್ರಕರಣದ ಕುರಿತು ಮತ್ತಷ್ಟು ವಿವರಣೆ ನೀಡಿದ ಅವರು,   ನನಗೆ ಪಾರ್ಟಿಯಲ್ಲಿ ಒಂದು ಕೋಣೆ ನಿಯೋಜಿಸಲಾಗಿತ್ತು. ಆ ಕೋಣೆಯಲ್ಲಿ ಡ್ರಗ್ಸ್ ಪತ್ತೆಯಾಗಿದೆ, ಅದು ನನ್ನ ವೈಯಕ್ತಿಕ ಸ್ವಾಧೀನದಲ್ಲಿಲ್ಲ. ಸೌಮ್ಯ ಸಿಂಗ್ ಮತ್ತು ಬಲದೇವ್ ಎಂಬ ವ್ಯಕ್ತಿ ಇತರ ಇಬ್ಬರು ವ್ಯಕ್ತಿಗಳು ಉಪಸ್ಥಿತರಿದ್ದರು. ಎನ್‌ಸಿಬಿ ಅಧಿಕಾರಿ ಸೌಮ್ಯ ಸಿಂಗ್  ಜೊತೆ  ಸಂಭಾಷಣೆಯ ನಂತರ  ಅವರನ್ನು ಬಿಡುಗಡೆ ಮಾಡಿದರು.  ಕುತೂಹಲಕಾರಿಯಾಗಿ ಎಂದರೆ ಸೌಮ್ಯ ಸಿಂಗ್ ಬಳಿಯೂ ಡ್ರಗ್ಸ್ ಪತ್ತೆಯಾಗಿತ್ತು. ಅವರನ್ನು ಬಿಟ್ಟು ನನ್ನನ್ನು ಹಿಡಿದುಕೊಂಡರು. ಅದೂ ನಾನು ಮಾಡೆಲ್​ ಎಂದು ಗೊತ್ತಾದ ಮೇಲೆ ಎಂದಿದ್ದಾರೆ. ನಾನು ಮಾಡೆಲ್ ಎಂದು ಗೊತ್ತಾದ ಕೂಡಲೇ ನನ್ನನ್ನು ಬಂಧಿಸಲು ಮುಂದಾದರು. ನಂತರ, ನನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಮತ್ತು ಅವರು ನನ್ನ ಕುಟುಂಬದೊಂದಿಗೆ ಮಾತನಾಡಲು ಸಹ ನನಗೆ ಅನುಮತಿಸಲಿಲ್ಲ ಎಂದಿದ್ದಾರೆ. 

ಅಂದಹಾಗೆ,  ಫ್ಯಾಷನ್ ಮಾಡೆಲ್ ಮುನ್ಮುನ್ ಧಮೇಚಾ ಮೂಲತಃ ಮಧ್ಯಪ್ರದೇಶದ (Madhya Pradesh) ಸಾಗರದವರು. ಶಾಲಾ ಶಿಕ್ಷಣವನ್ನು ಅಲ್ಲೇ ಮುಗಿಸಿದ ನಂತರ ಮುನ್ಮುನ್‌ ಉನ್ನತ ಶಿಕ್ಷಣಕ್ಕಾಗಿ (Higher Education) ಭೋಪಾಲ್‌ಗೆ ಸ್ಥಳಾಂತರಗೊಂಡರು. ಅವಳ ಸಹೋದರ ರಾಜಕುಮಾರ ಧಮೆಚಾ ದೆಹಲಿಯಲ್ಲಿ ವಾಸಿಸುತ್ತಾನೆ. ಫ್ಯಾಶನ್ (Fashion) ಮಾಡೆಲ್ ಆಗಿರುವ ಮುನ್ಮುನ್ ಧಮೇಚಾ ಅನೇಕ ಫ್ಯಾಶನ್ ಶೋಗಳಲ್ಲಿ ರಾಂಪ್ ವಾಕ್ (Ramp Walk) ಮಾಡಿದ್ದಾರೆ. ತುಂಬಾ ಸುಂದರವಾಗಿರುವ ಮುನ್ಮನ್‌ ಸ್ಟೈಲ್‌ ವಿಷಯದಲ್ಲಿ ಟಾಪ್‌ ನಾಯಕಿಯರನ್ನು ಸಹ ಸೋಲಿಸುತ್ತಾರೆ. ಇವರಿಗೆ  ಪಾರ್ಟಿಗಳೆಂದರೆ (Parites) ತುಂಬಾ ಇಷ್ಟ. ಗುರು ರಾಂಧವ, ಸುಯ್ಯಾಶ್ ರೈ ಮತ್ತು ಅರ್ಜುನ್ ರಾಂಪಾಲ್, ವರುಣ್ ಧವನ್, ನಿಖಿಲ್ ಚಿನಪ್ಪ ಮುಂತಾದ ಖ್ಯಾತನಾಮರೊಂದಿಗೆ ಅವರು ಆಗಾಗ್ಗೆ ಕಾಣಿಸಿಕೊಂಡಿದ್ದಾರೆ. 

ಆರ್ಯನ್ ಖಾನ್​​ಗೆ ಮಾತನಾಡಲೂ ಪುರುಸೊತ್ತಿಲ್ವಂತೆ! ಶಾರುಖ್​ ಪತ್ನಿ ಹೇಳಿದ್ದೇನು?

click me!