
ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರ ಅಸಮಾಧಾನ ಹೊರಹಾಕುತ್ತಿದ್ದಾರೆ. ಜೊತೆಗೆ ಒಂದಿಷ್ಟು ವಿವಾದ ಕೂಡ ಹುಟ್ಟಿಕೊಂಡಿದೆ. ಕೋಟಿ ಕೋಟಿ ಗಳಿಕೆ ಮಾಡುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.
1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾ ಬಗ್ಗೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಸಿನಿಮಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಸಿನಿಮಾ ಬಿಡುಗಡೆಯಾಗಿ ವಾರ ಕಳೆದರು ಜನರು ಆಸಕ್ತಿಯಿಂದ ಸಿನಿಮಾ ವೀಕ್ಷಿಸುತ್ತಿದ್ದಾರೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿರುವ(The Kashmir Files box office collection) ದಾಖಲೆ ನಿರ್ಮಿಸಿದೆ. ಮಾರ್ಚ್ 11ರಂದು ಸಿನಿಮಾ ಬಿಡುಗಡೆಯಾಗಿದೆ.
ಈ ಸಿನಿಮಾದ ಬಗ್ಗೆ ನಟ ಪ್ರಕಾಶ್ ರಾಜ್(Prakash Raj) ವ್ಯಂಗ್ಯವಾಡಿದ್ದಾರೆ. ಸಿನಿಮಾದ ಪ್ರದರ್ಶನ ವೇಳೆಯ ವಿಡಿಯೋ ತುಣುಕೊಂದನ್ನು ಶೇರ್ ಮಾಡಿರುವ ಪ್ರಕಾಶ್ ರಾಜ್ ಈ ಸಿನಿಮಾ ಹಳೆಯ ಗಾಯವನ್ನು ವಾಸಿ ಮಾಡಿದೆಯಾ ಅಥವಾ ಕೆದಕಿದಿಯಾ ಎಂದು ಪ್ರಶ್ನೆ ಕೇಳಿದ್ದಾರೆ. 'ಇದೊಂದು ಪ್ರಚಾರದ ಸಿನಿಮಾವಾಗಿದೆ. ಈ ಸಿನಿಮಾ ಗಾಯವನ್ನು ಗುಣಪಡಿಸಿದೆಯೋ ಅಥವಾ ಕೆದಕಿದಿಯೋ ಇಲ್ಲಾ ದ್ವೇಷದ ಬೀಜವನ್ನು ಬಿತ್ತುತ್ತಿದಿಯಾ' ಎಂದು ಪ್ರಶ್ನೆ ಮಾಡಿದ್ದಾರೆ.
7 ದಿನದಲ್ಲಿ ₹100 ಕೋಟಿ ಗಳಿಸಿದ ‘The Kashmir Files’: ₹15 ಕೋಟಿ ವೆಚ್ಚದ ಚಿತ್ರ ಈಗ ಬ್ಲಾಕ್ಬಸ್ಟರ್!
ಪ್ರಕಾಶ್ ರಾಜ್ ಪೋಸ್ಟ್ ಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಯಾವಾಗಲು ಹಿಂದೂಗಳ ವಿರುದ್ಧ ಮಾತನಾಡುತ್ತಿರುತ್ತೀರಿ ಎಂದು ಅನೇಕರು ತರಾಟೆ ತೆಗೆದುಕೊಂಡಿದ್ದಾರೆ. ಪ್ರಕಾಶ್ ರಾಜ್ ವಿರುದ್ಧ ಬಾಯಿಬಂದಹಾಗೆ ಕಾಮೆಂಟ್ ಮಾಡಿ ಬೈಯುತ್ತಿದ್ದಾರೆ. ಟ್ರೋಲ್ ಮತ್ತು ಆಕ್ರೋಶಗಳು ಪ್ರಕಾಶ್ ರಾಜ್ ಅವರಿಗೆ ಹೊಸದೇನಲ್ಲ. ಯಾವುದೇ ಹೇಳಿಕೆ ನೀಡಿದರು ಪ್ರಕಾಶ್ ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿರುತ್ತಾರೆ. ಇದೀಗ ದಿ ಕಾಶ್ಮೀರ್ ಫೈಲ್ಸ್ ವಿಚಾರದಲ್ಲೂ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ಚಿತ್ರದ ಬಗ್ಗೆ ವ್ಯಂಗ್ಯವಾಡಿ ಟ್ರೋಲಿಗೆ ಗುರಿಯಾಗಿದ್ದರು.
ಕೆಲವರ ವಿರೋದದ ನಡುವೆಯೂ ಈ ಸಿನಿಮಾವನ್ನು ಅನೇಕರು ಹಾಡಿಹೊಗಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅನೇಕ ರಾಜಕೀಯ ಗಣ್ಯರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ವಿದೇಶಿ ಗಳಿಕೆಯನ್ನೂ ಉತ್ತಮ ಕಮಾಯಿ ಮಾಡಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.
News Hour ಹಿಜಾಬ್ ನಂತ್ರ ಈಗ ಭಗವದ್ಗೀತೆ ಕಿಚ್ಚು, ಕಾಶ್ಮೀರ ಫೈಲ್ಸ್ ಕಟ್ಟುಕಥೆಯಂತೆ!
ಈ ನಡುವೆ ಈಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ(Vivek Agnihotri) ಗೃಹ ಸಚಿವಾಲಯವು ವೈ ಕೆಟಗರಿ ಭದ್ರತೆ(Y security) ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾಗಿ ವಾರದ ಬಳಿಕ ತಮ್ಮ ಕುಟುಂಬಕ್ಕೆ ಬೆದರಿಕೆ ಇದು ಎಂದು ನಿರ್ದೇಶಕ ಅಗ್ನಿಹೋತ್ರಿ ಹೇಳಿದ್ದರು. ಇನ್ನು ಸಿನಿಮಾ ಬಿಡುಗಡೆಗೂ ಮೊದಲು ನಿರ್ದೇಶಕ ಅಗ್ನಿಹೋತ್ರಿ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು, ಅಲ್ಲದೆ ಈ ಸಿನಿಮಾ ಬಿಡುಗಡೆ ಮಾಡದಂತೆ ಬೆದರಿಕೆ ಕರೆಗಳು ಬಂದಿತ್ತು ಮತ್ತು ಅಸಭ್ಯ ಕರೆಗಳು ಬರುತ್ತಿದ್ದವು ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದರು. ಇದೀಗ ಸಿನಿಮಾ ಬಿಡುಗಡೆಯಾಗಿ ಅನೇಕ ದಿನಗಳ ಬಳಿಕ ನಿರ್ದೇಶಕರಿಗೆ ಭದ್ರತೆ ನೀಡಲಾಗಿದೆ. ಅಂದಹಾಗೆ ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿತ್ತು. ಇದೀಗ ವೈ ಕೆಟಗರಿ ಭದ್ರತೆ ಪಡೆಯುತ್ತಿರುವ ಬಾಲಿವುಡ್ ನ ಎರಡನೆ ವ್ಯಕ್ತಿ ಅಗ್ನಿಹೋತ್ರಿ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.