
ಕಾಲಿವುಡ್ನಲ್ಲಿ 24ರ ಹರೆಯದ ಯುವಕನ 'ಯೂತ್' ಹವಾ! ಧನುಷ್ ಶಿಷ್ಯನ ಸಕ್ಸಸ್ ಸ್ಟೋರಿ ಕೇಳಿದರೆ ನೀವು ಫಿದಾ ಆಗ್ತೀರಾ!
ಚೆನ್ನೈ: ಚಿತ್ರರಂಗದಲ್ಲಿ ಸಕ್ಸಸ್ ಸಿಗುವುದು ಅಷ್ಟು ಸುಲಭವಲ್ಲ. ಅದೂ ದೊಡ್ಡ ಸಿನಿಮಾಗಳ ಅಬ್ಬರದ ನಡುವೆ ಸಣ್ಣ ಬಜೆಟ್ನ ಸಿನಿಮಾ ಗೆಲ್ಲುವುದು ಪವಾಡವೇ ಸರಿ. ಕಳೆದ ಮಾರ್ಚ್ 19ರಂದು ಇಡೀ ದೇಶದ ಗಮನ 'ಧುರಂಧರ್ 2' ಸಿನಿಮಾದ ಮೇಲಿತ್ತು. ದೊಡ್ಡ ಸಿನಿಮಾಗಳಿಗೆ ಹೆದರಿ ಹಲವು ಚಿತ್ರಗಳು ತಮ್ಮ ಬಿಡುಗಡೆಯ ದಿನಾಂಕವನ್ನೇ ಮುಂದೂಡಿದ್ದವು. ಆದರೆ, ಇದೇ ಅಬ್ಬರದ ನಡುವೆ ಸದ್ದಿಲ್ಲದೆ ತೆರೆಕಂಡು, ಇಂದು ತಮಿಳು ಚಿತ್ರರಂಗದ ಈ ವರ್ಷದ ಟಾಪ್ ಹಿಟ್ ಸಿನಿಮಾಗಳ ಪಟ್ಟಿಗೆ ಸೇರಿದ ಚಿತ್ರ 'ಯೂತ್' (Youth). ಈ ಸಿನಿಮಾದ ಹೀರೋ ಕಮ್ ನಿರ್ದೇಶಕ ಕೆನ್ ಕರುಣಾಸ್ಗೆ ಕೇವಲ 24 ವರ್ಷ ಎಂದರೆ ನೀವು ನಂಬಲೇಬೇಕು!
ಯಾರು ಈ ಕೆನ್ ಕರುಣಾಸ್?
ಸದ್ಯ ಕಾಲಿವುಡ್ನ ಲೇಟೆಸ್ಟ್ ಸೆನ್ಸೇಷನ್ ಆಗಿರುವ ಕೆನ್ ಕರುಣಾಸ್ (Ken Karunaas) ಕೇವಲ ಒಬ್ಬ ನಟನಲ್ಲ, ಒಬ್ಬ ಸಮರ್ಥ ನಿರ್ದೇಶಕ ಕೂಡ. ಕೆನ್ ಅವರ ತಂದೆ ಕರುಣಾಸ್ ತಮಿಳುನಾಡಿನ ಖ್ಯಾತ ನಟ ಮತ್ತು ರಾಜಕಾರಣಿ, ತಾಯಿ ಗ್ರೇಸ್ ಗಾಯಕಿ. ಆದರೆ, 'ನೆಪೋ ಕಿಡ್' (Nepo Kid) ಎಂಬ ಪಟ್ಟ ಹೊತ್ತಿದ್ದರೂ ಕೆನ್ಗೆ ಯಾವುದೂ ತಟ್ಟೆಯಲ್ಲಿ ಇಟ್ಟು ಬಂದಿರಲಿಲ್ಲ. 12ನೇ ವಯಸ್ಸಿನಲ್ಲೇ ಬಾಲನಟನಾಗಿ ಬಣ್ಣ ಹಚ್ಚಿದ್ದ ಇವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು ಧನುಷ್ ನಟನೆಯ 'ಅಸುರನ್' ಚಿತ್ರದ ಮೂಲಕ. ನಿರ್ದೇಶಕ ವೆಟ್ರಿಮಾರನ್ ಅವರು ಕೆನ್ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಚಿದಂಬರಂ ಎಂಬ ಅದ್ಭುತ ಪಾತ್ರ ನೀಡಿದ್ದರು.
ಒಂದು ಕುತೂಹಲಕಾರಿ ವಿಷಯವೆಂದರೆ, 'ಅಸುರನ್' ಚಿತ್ರದಲ್ಲಿ ಕೆನ್ ನಟಿಸುವುದು ಧನುಷ್ ಅವರಿಗೆ ಇಷ್ಟವಿರಲಿಲ್ಲವಂತೆ. ಈ ಹುಡುಗ ಪಾತ್ರಕ್ಕೆ ಹೊಂದುತ್ತಾನಾ? ಎಂಬ ಆತಂಕ ಅವರಿಗಿತ್ತು. ಆದರೆ, ಮೊದಲ ದಿನದ ಶೂಟಿಂಗ್ ಮುಗಿಯುವಷ್ಟರಲ್ಲಿ ಕೆನ್ ನಟನೆ ನೋಡಿ ಧನುಷ್ ಫಿದಾ ಆಗಿದ್ದರು. ಅಂದಿನಿಂದ ಧನುಷ್ ಮತ್ತು ಕೆನ್ ನಡುವೆ ಗುರು-ಶಿಷ್ಯರ ಬಾಂಧವ್ಯ ಬೆಳೆಯಿತು. 'ತಿರುಚಿಟ್ರಾಂಬಲಂ', 'ವಾತಿ' ಮತ್ತು 'ರಾಯನ್' ಚಿತ್ರಗಳಲ್ಲಿ ಧನುಷ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿ, ಚಿತ್ರ ನಿರ್ಮಾಣದ ಪ್ರತಿಯೊಂದು ಸೂಕ್ಷ್ಮವನ್ನೂ ಕೆನ್ ಕಲಿತುಕೊಂಡರು.
ಚಹ ಕುಡಿಯಲು 50 ರೂಪಾಯಿ ಇರಲಿಲ್ಲ!
ತಮ್ಮ 20ರ ಹರೆಯದಲ್ಲೇ 'ಯೂತ್' ಚಿತ್ರದ ಕಥೆ ಹಿಡಿದು ಕೆನ್ ಹಲವು ನಿರ್ಮಾಣ ಸಂಸ್ಥೆಗಳ ಬಾಗಿಲು ತಟ್ಟಿದ್ದರು. ಆದರೆ, ಚಿಕ್ಕ ಹುಡುಗ ಅಂದು ಎಲ್ಲರೂ ಇವರನ್ನು ತಿರಸ್ಕರಿಸಿದ್ದರು. ಕೊನೆಗೆ ಯುವ ನಿರ್ಮಾಪಕ ಕರುಪ್ಪಯ್ಯ ಕೆನ್ ಅವರ ಕನಸಿಗೆ ಬೆನ್ನೆಲುಬಾಗಿ ನಿಂತರು. ಈ ಸಿನಿಮಾ ಸೆಟ್ಟೇರುವ ಮುನ್ನ ಒಂದು ಕಣ್ಣೀರು ತರಿಸುವ ಘಟನೆ ನಡೆದಿತ್ತು. ಸಿನಿಮಾ ಮಾಡೋಣ ಎಂದು ಒಪ್ಪಂದವಾದ ಖುಷಿಯಲ್ಲಿ ಕೆನ್ ಮತ್ತು ಕರುಪ್ಪಯ್ಯ ಟೀ ಕುಡಿಯಲು ಹೋಗಿದ್ದರು. ಆದರೆ, ಆ ಟೀಯ 50 ರೂಪಾಯಿ ಬಿಲ್ ಕಟ್ಟಲು ನಿರ್ಮಾಪಕ ಕರುಪ್ಪಯ್ಯ ಅವರ ಖಾತೆಯಲ್ಲಿ ಹಣವೇ ಇರಲಿಲ್ಲವಂತೆ! ಅಂತಹ ಪರಿಸ್ಥಿತಿಯಿಂದ ಬಂದ ಇವರು ಇಂದು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಸಿನಿಮಾ ಮಾಡಿದ್ದಾರೆ.
ಕೆನ್ ಮೇಲೆ ಇಟ್ಟ ನಂಬಿಕೆ ಸುಳ್ಳಾಗಲಿಲ್ಲ. ಹಣವಿಲ್ಲದಿದ್ದರೂ ಛಲದಿಂದ ಮಾಡಿದ ಈ ಸಿನಿಮಾ ಇಂದು ವಿಶ್ವಾದ್ಯಂತ 50 ಕೋಟಿ ರೂಪಾಯಿ ಲಾಭ ಗಳಿಸಿದೆ. ಈ ಚಿತ್ರದ ಗೆಲುವಿನಲ್ಲಿ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಅವರ ಪಾತ್ರ ದೊಡ್ಡದಿದೆ. ಕೆನ್ ಮೇಲಿನ ಪ್ರೀತಿಗಾಗಿ ಜಿ.ವಿ. ಪ್ರಕಾಶ್ ಒಂದು ರೂಪಾಯಿ ಸಂಭಾವನೆ ಪಡೆಯದೆ ಅದ್ಭುತ ಹಾಡುಗಳನ್ನು ಕಂಪೋಸ್ ಮಾಡಿಕೊಟ್ಟಿದ್ದಾರೆ.
ಒಟ್ಟಾರೆಯಾಗಿ, ಕೆನ್ ಕರುಣಾಸ್ ಇಂದು ತನ್ನ ಮೇಲೆ ನಂಬಿಕೆ ಇಟ್ಟಿದ್ದ ಗುರು ಧನುಷ್, ನಿರ್ದೇಶಕ ವೆಟ್ರಿಮಾರನ್ ಮತ್ತು ನಿರ್ಮಾಪಕರ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ. 24ನೇ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡಿರುವ ಈ 'ಯೂತ್' ಐಕಾನ್ ಗೆಲುವು ನಿಜಕ್ಕೂ ಸ್ಫೂರ್ತಿದಾಯಕ. ಮುಂದಿನ ದಿನಗಳಲ್ಲಿ ಕೆನ್ ಅವರಿಂದ ಇನ್ನಷ್ಟು ವಿಭಿನ್ನ ಸಿನಿಮಾಗಳನ್ನು ನಿರೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.