
ವಿಜಯ್ ಪುತ್ರ ಕಿಡ್ನ್ಯಾಪ್ ಸ್ಟೋರಿ; ಜೇಸನ್ ಸಂಜಯ್ ಲೈಫ್ನಲ್ಲಿ ಶಾಕಿಂಗ್ ಇನ್ಸಿಡೆಂಟ್!
ಕಾಲಿವುಡ್ಸ್ಟಾರ್ ನಟ ದಳಪತಿ ವಿಜಯ್(Thalapathy Vijay) ಅದೆಂಥಾ ಜನಪ್ರಿಯತೆ, ಫ್ಯಾನ್ ಫಾಲೋವಿಂಗ್ ಇದೆ ಅನ್ನೋದು ಗೊತ್ತೇ ಇದೆ. ಮೊದಲ ಸಾರಿ ಚುನಾವಣೆಗೆ ನಿಂತು ಗೆದ್ದು ಸಿಎಂ ಆಗಿರೋದಕ್ಕಿಂತ ಹೆಚ್ಚಿನ ಸಾಕ್ಷಿ ಇದಕ್ಕೆ ಬೇಕಾ? ಇಂಥಾ ವಿಜಯ್ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನ ನೋಡ್ಲಿಕ್ಕೆ ವಿಜಯ್ ಪುತ್ರನನ್ನೇ ಕಿಡ್ನ್ಯಾಪ್ ಮಾಡಿದ್ದ ವಿಷ್ಯ ನಿಮಗ್ ಗೊತ್ತಾ. ಖುದ್ದು ವಿಜಯ್ ಪುತ್ರ ಜೇಸನ್ ಸಂಜಯ್ (Jason Sanjay) ಹೇಳಿರೋ ಈ ಕಿಡ್ನ್ಯಾಪ್ ಸ್ಟೋರಿ ಇಲ್ಲಿದೆ ನೋಡಿ.
ಹೌದು, ಇತ್ತೀಚೆಗೆ ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಅವರ ವಿಡಿಯೋವೊಂದು ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಆ ವಿಡಿಯೋದಲ್ಲಿ ಜೇಸನ್ ಸಂಜಯ್ ತಮ್ಮ ಬಾಲ್ಯದಲ್ಲಿ ನಡೆದ ಒಂದು ಭಯಾನಕ, ಆದರೆ ಅಷ್ಟೇ ತಮಾಷೆಯ "ಕಿಡ್ನಾಪ್" ಘಟನೆಯನ್ನ ನೆನಪಿಸಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಜೇಸನ್ ಸಂಜಯ್ ಒಬ್ಬ ಸಣ್ಣ ಬಾಲಕನೊಂದಿಗೆ ಮಾತನಾಡುತ್ತಾ ತಮ್ಮ ಐದನೇ ತರಗತಿಯ ಬಾಲ್ಯದ ನೆನಪೊಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಚೆನ್ನೈನ ಶಾಲೆಯಲ್ಲಿ ಓದುತ್ತಿದ್ದಾಗ ತಂದೆ ವಿಜಯ್ ವಾರಕ್ಕೆ ಎರಡು ಅಥವಾ ಮೂರು ಬಾರಿ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಶಾಲೆಯಿಂದ ಪಿಕ್ ಅಪ್ ಮಾಡಲು ಬರುತ್ತಿದ್ರಂತೆ.
ಅಂದು ಜೇಸನ್ ಸಂಜಯ್ಗೆ ಕಾವಲು ಕಾಯಲು ತಂದೆ ಬಿಟ್ಟಿದ್ದ ಸೆಕ್ಯೂರಿಟಿ ಟೀಮ್ ಕೂಡ ಇತ್ತು. ಆದರೆ ಆ ದಿವಸ, ವಿಜಯ್ ಅವರ ಕಾರು ಬರುತ್ತಿದ್ದಂತೆಯೇ ಅಲ್ಲಿದ್ದ ಒಬ್ಬ ವ್ಯಕ್ತಿ ಸೆಕ್ಯೂರಿಟಿ ಕಣ್ಣು ತಪ್ಪಿಸಿ ಸಡನ್ ಆಗಿ ಬಂದು ಜೇಸನ್ ಸಂಜಯ್ನನ್ನ ಎತ್ತಿಕೊಂಡು ಓಡಲು ಪ್ರಾರಂಭಿಸಿದ್ದನಂತೆ. ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿ ತನ್ನನ್ನ ಎತ್ತಿಕೊಂಡು ಓಡುತ್ತಿದ್ದ ಕಾರಣಕ್ಕೆ ಜೇಸನ್ ಸಂಜಯ್ ಗಾಬರಿಯಾಗಿದ್ದರು. ತಾನು ನಿಜವಾಗಿಯೂ ಕಿಡ್ನಾಪ್ ಆಗುತ್ತಿದ್ದೇನೆ ಅಂತ ಭಾವಿಸಿ ಜೋರಾಗಿ ಅಳುತ್ತಾ, ಒದ್ದಾಡಿದ್ರಂತೆ.
ಈ ಕಥೆ ಕೇಳಿದ್ರೆ ಎಂಥವರಿಗಾದರೂ ಮೈ ಜುಂ ಅನ್ನುತ್ತೆ ಅಲ್ವಾ? ಆದರೆ ಇಲ್ಲೇ ಇರೋದು ಅಸಲಿ ಟ್ವಿಸ್ಟ್! ಆ ವಿಡಿಯೋವನ್ನು ಶೂಟ್ ಮಾಡುತ್ತಿದ್ದ ವ್ಯಕ್ತಿಯೇ ಅಂದು ಜೇಸನ್ ಸಂಜಯ್ನನ್ನು ಶಾಲೆಯಿಂದ ಎತ್ತಿಕೊಂಡು ಹೋಗಿದ್ದ "ಕಿಡ್ನಾಪರ್"! ಆತ ಬೇರೆ ಯಾರೂ ಅಲ್ಲ, ತಮಿಳು ನಟ ಜೆಮಿನಿ ಮಣಿ! ಹೌದು, ಇತ್ತೀಚೆಗೆ ಸಿನಿಮಾ ಸೆಟ್ ಒಂದರಲ್ಲಿ ಜೆಮಿನಿ ಮಣಿ ಅವರನ್ನು ಭೇಟಿಯಾದಾಗ ಜೇಸನ್ಗೆ ಈ ಹಳೆಯ ಬಾಲ್ಯದ ಘಟನೆ ನೆನಪಾಗಿದೆ.
ಅಂದು ಜೆಮಿನಿ ಮಣಿ ದಳಪತಿ ವಿಜಯ್ ಅವರ ಎಷ್ಟು ದೊಡ್ಡ ಕಟ್ಟಾ ಅಭಿಮಾನಿಯಾಗಿದ್ದರೆಂದರೆ, ವಿಜಯ್ ಅವರನ್ನ ಹೇಗಾದರೂ ಮಾಡಿ ಹತ್ತಿರದಿಂದ ನೋಡಬೇಕು, ಮಾತನಾಡಿಸಬೇಕು ಎಂಬ ಹುಚ್ಚು ಹಂಬಲ ಅವರದ್ದಾಗಿತ್ತು. ವಿಜಯ್ ಸಾಮಾನ್ಯವಾಗಿ ಕಾರಿನಿಂದ ಕೆಳಗೆ ಇಳಿಯುತ್ತಿರಲಿಲ್ಲ. ಹಾಗಾಗಿ, ವಿಜಯ್ ಅವರ ಗಮನ ಸೆಳೆಯಲು ಜೆಮಿನಿ ಮಣಿ ಅವರು ಬಾಲಕ ಜೇಸನ್ನನ್ನು ಎತ್ತಿಕೊಂಡು ನೇರವಾಗಿ ವಿಜಯ್ ಅವರ ಕಾರಿನ ಕಡೆಗೆ ಓಡಿದ್ದರು!
ವಿಶೇಷ ಅಂದರೆ, ಈ ವಿಡಿಯೋದಲ್ಲಿ ತಂದೆ ವಿಜಯ್ ಬಗ್ಗೆ ಜೇಸನ್ ಪ್ರೀತಿಯಿಂದ ಮಾತನಾಡಿದ್ದು, ಇಬ್ಬರ ನಡುವಿನ ಮುನಿಸು ಈಗ ಸಂಪೂರ್ಣವಾಗಿ ಮಾಯವಾಗಿದೆಯಾ? ಎಂಬ ಚರ್ಚೆಗೆ ಕಾರಣವಾಗಿದೆ.
ವಿಜಯ್ ಸಿಎಂ ಪ್ರಮಾಣವಚನಕ್ಕೆ ಗೈರಾಗಿದ್ದ ಮಗ; ಈಗ ಅಪ್ಪನ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದೇಕೆ..?
ಮಾಯವಾಯ್ತಾ ಅಪ್ಪ-ಮಗನ ನಡುವಿನ ಮುನಿಸು?
ಹೌದು, ಈ ಕ್ಯೂಟ್ ಮತ್ತು ಫನ್ನಿ ಇನ್ಸಿಡೆಂಟ್ ಅನ್ನ ಜೇಸನ್ ಸಂಜಯ್ ಅತ್ಯಂತ ಪ್ರೀತಿಯಿಂದ ಮತ್ತು ನಗುನಗುತ್ತಾ ನೆನಪಿಸಿಕೊಂಡಿದ್ದಾರೆ. ಆದರೆ, ಈ ವಿಡಿಯೋ ಕೇವಲ ಒಂದು ತಮಾಷೆಯ ಕಥೆಯಾಗಿ ಉಳಿದಿಲ್ಲ, ಬದಲಿಗೆ ಕಾಲಿವುಡ್ನಲ್ಲಿ ಹರಿದಾಡುತ್ತಿದ್ದ ದೊಡ್ಡ ವದಂತಿಗೆ ಬ್ರೇಕ್ ಹಾಕಿದೆ. ಇತ್ತೀಚೆಗೆ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಸಮಾರಂಭಕ್ಕೆ ಜೇಸನ್ ಸಂಜಯ್ ಹಾಗೂ ಅವರ ತಂಗಿ ದಿವ್ಯ ಸಾಶಾ ಗೈರಾಗಿದ್ದರು.
ಅಷ್ಟೇ ಅಲ್ಲದೆ, ಜೇಸನ್ ಸಂಜಯ್ ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರದ ಕ್ರೆಡಿಟ್ಸ್ನಲ್ಲಿ ತಂದೆಯ ಹೆಸರಿನ 'ವಿ'ಅಕ್ಷರವನ್ನ ಕೈಬಿಟ್ಟು, ತಾಯಿಯ ಹೆಸರಿನ 'ಎಸ್' ಅಕ್ಷರವನ್ನ ಬಳಸ್ತಾ ಇದ್ದಾರೆ ಎಂಬ ವದಂತಿ ಇತ್ತು. ಇನ್ಸ್ಟಾಗ್ರಾಮ್ನಲ್ಲೂ ತಂದೆಯನ್ನು ಅನ್ಫಾಲೋ ಮಾಡಿದ್ದಾರೆ ಅಂತ ಸುದ್ದಿಯಾಗಿತ್ತು. ತನ್ನ ತಾಯಿ ಸಂಗೀತಾ ಜೊತೆ ಡಿವೋರ್ಸ್ ಕೊಡ್ತಾ ಇರೋದ್ರಿಂದ ಜೇಸನ್ ಅಪ್ಪನ ಜೊತೆ ಮುನಿಸಿಕೊಂಡಿದ್ದಾರೆ ಅಂತ ಹೇಳಲಾಗಿತ್ತು.
ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಜೇಸನ್ ತಮ್ಮ ತಂದೆಯ ಬಗ್ಗೆ ಎಷ್ಟು ಗೌರವ ಮತ್ತು ಮಮತೆಯಿಂದ ಮಾತನಾಡಿದ್ದಾರೆ ಅಂದ್ರೆ, ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅಪ್ಪ-ಮಗನ ಮುನಿಸು ಕೇವಲ ಸೋಷಿಯಲ್ ಮೀಡಿಯಾದ ಸೃಷ್ಟಿ ಅನ್ನೋದು ಫ್ಯಾನ್ಸ್ಗೆ ಸ್ಪಷ್ಟವಾಗಿದೆ.
ರಕ್ತ ಸಂಬಂಧಗಳು ಯಾವತ್ತೂ ದೂರಾಗಲು ಸಾಧ್ಯವಿಲ್ಲ ಅನ್ನೋದಕ್ಕೆ ಜೇಸನ್ ಸಂಜಯ್ ಅವರ ಈ ವೈರಲ್ ವಿಡಿಯೋನೇ ಸಾಕ್ಷಿ. ತಂದೆಯ ಸೂಪರ್ ಸ್ಟಾರ್ಡಮ್ ಹಾಗೂ ಅವರ ಸೆಕ್ಯೂರಿಟಿಯಿಂದಾಗಿ ತಮಗೆ ಸಿಗುತ್ತಿದ್ದ ಅತಿಯಾದ ಗಮನವನ್ನ ಜೇಸನ್ ಹೆಮ್ಮೆಯಿಂದ ನೆನಪಿಸಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹರಡಿದ್ದ ಎಲ್ಲಾ ನೆಗೆಟಿವ್ ಸುದ್ದಿಗಳಿಗೂ ಪರೋಕ್ಷವಾಗಿ ಸಿಕ್ಕ ಭರ್ಜರಿ ಉತ್ತರ ಆಗಿದೆ. ಸದ್ಯ ಜೇಸನ್ ಸಂಜಯ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ತಂದೆ ವಿಜಯ್ ರಾಜಕೀಯದ ಉನ್ನತ ಸ್ಥಾನದಲ್ಲಿದ್ದಾರೆ. ಅಪ್ಪ-ಮಗನ ನಡುವಿನ ಈ ಮಧುರ ಬಾಂಧವ್ಯ ಹೀಗೆಯೇ ಇರಲಿ ಅನ್ನೋದೇ ದಳಪತಿ ಅಭಿಮಾನಿಗಳ ಹಾರೈಕೆ.
ಜೇಸನ್ ಸಂಜಯ್ ಮಾತುಕಥೆಗಳನ್ನು 'ಸಿನಿಮಾ ಹಂಗಾಮ'ದಲ್ಲಿ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.