
ದಕ್ಷಿಣ ಭಾರತದ ಸೂಪರ್ಸ್ಟಾರ್ ಪ್ರಭಾಸ್ ನಟಿಸಲಿರುವ 'ಸ್ಪಿರಿಟ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ದೀಪಿಕಾ ಪಡುಕೋಣೆ ಚಿತ್ರತಂಡದ ಮುಂದೆ ಕೆಲವು ಷರತ್ತುಗಳನ್ನು ವಿಧಿಸಿದ್ದರಿಂದ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆ ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಕಥೆ ಬಿಟ್ಟುಕೊಟ್ರಾ ದೀಪಿಕಾ?
ಆ ಪೋಸ್ಟ್ನಲ್ಲಿ ದೀಪಿಕಾ ಪಡುಕೋಣೆ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಮಾತುಗಳು ದೀಪಿಕಾ ಕಡೆಗೆ ಬೊಟ್ಟುಮಾಡುತ್ತಿವೆ ಎಂದು ಹೇಳಲಾಗುತ್ತಿದೆ. 'ಸ್ಪಿರಿಟ್' ಚಿತ್ರದ ಕಥೆಯನ್ನು ದೀಪಿಕಾ ಸೋರಿಕೆ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ದೀಪಿಕಾ ಸ್ಥಾನಕ್ಕೆ ಬಂದವರು ಯಾರು?
'ಅರ್ಜುನ್ ರೆಡ್ಡಿ' ಮತ್ತು 'ಕಬೀರ್ ಸಿಂಗ್', ʼಆನಿಮಲ್ʼ ಸಿನಿಮಾಗಳ ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರ ಮುಂಬರುವ ಸಿನಿಮಾವೇ 'ಸ್ಪಿರಿಟ್'. ಈ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರಬಿದ್ದಿದ್ದು, ತೃಪ್ತಿ ದಿಮ್ರಿ ಅವರು ದೀಪಿಕಾ ಸ್ಥಾನವನ್ನು ತುಂಬಲಿದ್ದಾರಂತೆ. ಈ ಬೆಳವಣಿಗೆಯಿಂದ ಕೆರಳಿರುವ ಸಂದೀಪ್, ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ದೀಪಿಕಾ ಅವರ 'ಸ್ತ್ರೀವಾದ'ದ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೊಂದು ಕೆಟ್ಟ ಪಿಆರ್ ತಂತ್ರ ಎಂದು ಕೂಡ ಅವರು ಆರೋಪಿಸಿದ್ದಾರೆ.
ಕಥೆ ಸೋರಿಕೆ ಮಾಡೋದು ಸ್ತ್ರೀ ವಾದವೇ?
'ನಾನು ಒಬ್ಬ ನಟನಿಗೆ ಕಥೆ ಹೇಳುವಾಗ ನೂರಕ್ಕೆ ನೂರು ಪ್ರತಿಶತ ಅವರ ಮೇಲೆ ನಂಬಿಕೆ ಇಡುತ್ತೇನೆ. ಆ ಸಮಯದಲ್ಲಿ ನಮ್ಮ ನಡುವೆ ಒಂದು ಅಲಿಖಿತ ಒಪ್ಪಂದ ಇರುತ್ತದೆ. ಆದರೆ, ನೀವು ಮಾಡಿರುವ ಕೆಲಸದಿಂದ ನಿಮ್ಮ ವ್ಯಕ್ತಿತ್ವ ಏನೆಂದು ಗೊತ್ತಾಗುತ್ತದೆ. ನಿಮಗಿಂತ ಕಿರಿಯ ನಟರನ್ನು ಅವಮಾನಿಸುವುದು ಮತ್ತು ನನ್ನ ಕಥೆಯನ್ನು ಸೋರಿಕೆ ಮಾಡುವುದು ನಿಮ್ಮ ಸ್ತ್ರೀವಾದವೇ?' ಎಂದು ಸಂದೀಪ್ ಪ್ರಶ್ನಿಸಿದ್ದಾರೆ.
ಇಡೀ ಕಥೆ ಹೇಳಿ, ತೊಂದರೆ ಇಲ್ಲ!
'ಒಬ್ಬ ನಿರ್ದೇಶಕನಾಗಿ ನಾನು ನನ್ನ ಕೆಲಸಕ್ಕೆ ತುಂಬ ಶ್ರಮ ಹಾಕುವೆ. ಸಿನಿಮಾ ನಿರ್ಮಾಣವೇ ನನಗೆ ಎಲ್ಲವೂ. ಆದರೆ, ಇದನ್ನು ನೀವು ಎಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ' ಎಂದು ಸಂದೀಪ್ ಬರೆದಿದ್ದಾರೆ. 'ಮುಂದಿನ ಬಾರಿ ಇಡೀ ಕಥೆಯನ್ನೇ ಹೇಳಿಬಿಡಿ. ನನಗೆ ಯಾವುದೇ ತೊಂದರೆಯಿಲ್ಲ' ಎಂದು ಅವರು ಕೋಪದಿಂದ ಹೇಳಿದ್ದಾರೆ. 'ಸ್ಪಿರಿಟ್' ಚಿತ್ರದ ಕಥೆ ತೆಲುಗು ಮನರಂಜನಾ ಚಿತ್ರವಾಗಿದ್ದು, ಅನೇಕ ಹೀರೋಯಿಕ್ ಕ್ಷಣಗಳನ್ನು ಒಳಗೊಂಡಿದೆ. ಆದರೆ, ಚಿತ್ರದಲ್ಲಿ 'ಎ' ರೇಟೆಡ್ ದೃಶ್ಯಗಳೂ ಇರಲಿವೆ ಎಂದು ಮಾಧ್ಯಮವು ವರದಿ ಮಾಡಿದೆ.
20 ಕೋಟಿ ರೂಪಾಯಿ ಸಂಭಾವನೆ ಸಿಗ್ತಾ?
ನಟಿ ದೀಪಿಕಾ ಪಡುಕೋಣೆ ಅವರು 'ಸ್ಪಿರಿಟ್' ಚಿತ್ರಕ್ಕೆ 20 ಕೋಟಿ ರೂಪಾಯಿ ಸಂಭಾವನೆ ಪಡೆದು ಸಹಿ ಹಾಕಿದ್ದರು. ಆದರೆ, ನಂತರ ದೀಪಿಕಾ ಕೆಲವು ಷರತ್ತುಗಳನ್ನು ವಿಧಿಸಿದ್ದರಿಂದ ಚಿತ್ರತಂಡ ಅವರನ್ನು ಚಿತ್ರದಿಂದ ಕೈಬಿಟ್ಟಿದೆ. ದೀಪಿಕಾ ಬದಲಿಗೆ ತೃಪ್ತಿ ದಿಮ್ರಿ ಚಿತ್ರತಂಡ ಸೇರಿದ್ದಾರೆ. ಅವರಿಗೆ 4 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎನ್ನಲಾಗಿದೆ. ಚಿತ್ರದ ಚಿತ್ರೀಕರಣ ಅಕ್ಟೋಬರ್ನಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಏನೇ ಇರಲಿ ಕಾಂಟ್ರವರ್ಸಿಯಿಂದ ಆರಂಭ ಆದ ಈ ಚಿತ್ರ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ವೀಕ್ಷಕರಿಗೆ ಹೆಚ್ಚಾಗಿದೆ. ಚಿತ್ರ 2026 ರಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಕೆಲಸ ಮುಗಿದ ಬಳಿಕ ಸಂದೀಪ್ ಅವರು ʼಆನಿಮಲ್ʼ ಸಿನಿಮಾದ ಸೀಕ್ವೆಲ್ ʼಆನಿಮಲ್ ಪಾರ್ಕ್ 2’ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.