ದಲಿತ ಸಮುದಾಯ ಅವಹೇಳನ: ‘ಕಾಂತಾರ’ ಚಿತ್ರಪ್ರದರ್ಶನ ಸ್ಥಗಿತಕ್ಕೆ ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ ಮನವಿ

By Kannadaprabha NewsFirst Published Nov 11, 2022, 9:39 PM IST
Highlights

'ಕಾಂತಾರ’ ಸಿನಿಮಾದ ಸಾಕಷ್ಟುಕಡೆಗಳಲ್ಲಿ ದಲಿತ ಸಮುದಾಯ ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದೆ  ಕೂಡಲೇ ಕಾಂತಾರ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಿದೆ.

ಮಂಗಳೂರು (ನ.11) :\ ಕಾಂತಾರ’ ಸಿನಿಮಾದ ಸಾಕಷ್ಟುಕಡೆಗಳಲ್ಲಿ ದಲಿತ ಸಮುದಾಯ ಮತ್ತು ಮಹಿಳೆಯರನ್ನು ಅವಹೇಳನ ಮಾಡಲಾಗಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕುವಲ್ಲಿ ಸೆನ್ಸಾರ್‌ ಮಂಡಳಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಕೂಡಲೇ ಕಾಂತಾರ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮತಾ ಸೈನಿಕ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಅವರು ಜಿಲ್ಲಾ ಮ್ಯಾಜಿಸ್ಪ್ರೇಟ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತಾರ ಸಿನಿಮಾ ತಂಡ ಉತ್ತಮ ಸಿನಿಮಾ ಮಾಡಿದ್ದು, ಕಲಾವಿದರ ಅಭಿನಯ ನಿಜಕ್ಕೂ ಚೆನ್ನಾಗಿದೆ. ಆದರೆ ಚಿತ್ರದಲ್ಲಿ ಯುವಕರನ್ನು ಪೋಲಿಯಂತೆ ಬಿಂಬಿಸಲಾಗಿದೆ. ದೈವಗಳ ವಿಧಿ ವಿಧಾನವನ್ನು ವಿಕೃತಗೊಳಿಸಲಾಗಿದೆ. ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ. ಈ ಸೂಕ್ಷ್ಮತೆಗಳಿರುವ ದೃಶ್ಯಗಳಿಗೆ ಸೆನ್ಸಾರ್‌ ಮಂಡಳಿ ಕಾನೂನು ಚೌಕಟ್ಟಿನೊಳಗೆ ಸೆನ್ಸಾರ್‌ ಹಾಕಬೇಕಿತ್ತು. ಆದರೆ ಆ ಕೆಲಸ ಮಾಡುವಲ್ಲಿ ಸೆನ್ಸಾರ್‌ ಮಂಡಳಿ ಸಂಪೂರ್ಣ ವಿಫಲವಾಗಿದೆ. ಈ ಕಾರಣದಿಂದ ಕೂಡಲೇ ಚಲನಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಿಯಲ್ ಕಾಂತರಾಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ; ದೈವನರ್ತಕ ಗುಡ್ಡಪಾಣಾರಗೆ ರಾಜ್ಯೋತ್ಸವದ ಗರಿ

ಪಾಣಾರ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ, ಬಾಕುಡ ಸಮಾಜ ಜಿಲ್ಲಾ ಮುಖಂಡ ಎನ್‌. ಪದ್ಮನಾಭ, ದ.ಸಂ.ಸ. ಸಮಿತಿ ಸಂಚಾಲಕ ಉಮೇಶ್‌, ದ.ಸಂ.ಸ. ಜಿಲ್ಲಾ ಸಂಚಾಲಕ ಲಕ್ಷ್ಮಣ್‌ ಕಾಂಚನ್‌, ಕ.ದ.ಸಂ. ಸಮಿತಿ ಸಂಚಾಲಕ ನಾಗೇಶ್‌, ಸಾಮಾಜಿಕ ಚಿಂತಕ ಕಾಂತಪ್ಪ ಅಲಂಗಾರ್‌ ಇದ್ದರು.

click me!