
ಮುಂಬೈ(ಅ.23): ವಿಮಾನ ನಿಲ್ದಾಣವೊಂದರಲ್ಲಿ(Airport) ಖ್ಯಾತ ನಟಿ(Actress) ಹಾಗೂ ಭರತನಾಟ್ಯಂ ಕಲಾವಿದೆ(Bharatanatyam) ಸುಧಾ ಚಂದ್ರನ್(Sudha Chandran) ಅವರ ಕೃತಕ ಕಾಲುಗಳನ್ನು ಭದ್ರತಾ ಸಿಬ್ಬಂದಿ(CISF) ಬಿಚ್ಚಿಸಿ ಶೋಧ ನಡೆಸಿದ್ದಾರೆ. ಇದು ವಿವಾದಕ್ಕೀಡಾಗಿದೆ. ಈ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಸುಧಾ ದೂರು ನೀಡಿದ್ದು, ಇದರ ನಡುವೆಯೇ ಸಿಐಎಸ್ಎಫ್ ಕ್ಷಮೆಯಾಚಿಸಿದೆ.
ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನೋವು ತೋಡಿಕೊಂಡಿರುವ ಸುಧಾ ಚಂದ್ರನ್ ಅವರು, ‘ಮುಂದಿನ ದಿನಗಳಲ್ಲಿ ತಮ್ಮಂಥವರಿಗೆ ಇಂಥ ಘಟನೆಗಳು ಎದುರಾಗದಂತೆ ತಡೆಯಲು ಕೃತಕ ಅಂಗಾಂಗಳನ್ನು ಹೊಂದಿದ ತಮ್ಮಂಥವರಿಗೆ ವಿಶೇಷ ಕಾರ್ಡ್ಗಳನ್ನು ನೀಡಬೇಕು’ ಎಂದು ವಿನಂತಿಸಿಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ(Instagram) ವಿಡಿಯೋ ಹಂಚಿಕೊಂಡಿರುವ ಸುಧಾ, ‘ನಾನು ಸುಧಾ ಚಂದ್ರನ್. ನಟಿ ಮತ್ತು ಭರತನಾಟ್ಯಂ ನೃತ್ಯಗಾರ್ತಿ. ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇದು ನನ್ನ ವೈಯಕ್ತಿಕ ಮನವಿ. ಪ್ರತೀ ಬಾರಿ ವಿಮಾನ ಹತ್ತಲು ಹೋದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ, ತಮ್ಮ ಕೃತಕ ಅಂಗಾಂಗಗಳನ್ನು ಬಿಚ್ಚಿಸಿ ಪರಿಶೀಲಿಸುತ್ತಾರೆ. ಇದರಿಂದ ಹಲವು ಬಾರಿ ಬೇಸರ ಮತ್ತು ದುಃಖವಾಗುತ್ತದೆ. ಹೀಗಾಗಿ ಇಟಿಡಿ ಪರೀಕ್ಷೆ ಮಾಡುವಂತೆ ಮಾತ್ರ ಸೂಚಿಸಬೇಕು ಎಂಬುದು ನನ್ನ ಕಳಕಳಿ. ಇಲ್ಲದಿದ್ದರೆ ಹಿರಿಯ ನಾಗರಿಕರಿಗೆ ನೀಡುವ ರೀತಿ ನಮಗೂ ಪಾಸ್ ರೀತಿಯ ಕಾರ್ಡ್ ನೀಡಬೇಕು’ ಎಂದು ಕೇಳಿಕೊಂಡಿದ್ದಾರೆ.
ಸಿಐಎಸ್ಎಫ್ ಕ್ಷಮೆ:
ಈ ಘಟನೆ ಕುರಿತಾಗಿ ಸುಧಾ ಚಂದ್ರನ್ ಅವರಿಗೆ ಆಗಿರುವ ತೊಂದರೆ ಬಗ್ಗೆ ಸಿಐಎಸ್ಎಫ್ ಕ್ಷಮೆ ಕೋರಿದೆ. ‘ಕೆಲವೇ ಸಂದರ್ಭಗಳಲ್ಲಿ ಮಾತ್ರ ಕೃತಕ ಅಂಗಾಂಗ ಬಿಚ್ಚಿಸಿ ಪರಿಶೀಲಿಸಲಾಗುತ್ತದೆ. ಭದ್ರತೆಗೆ ನಿಯೋಜಿಸಲಾಗಿದ್ದ ಯಾವ ಮಹಿಳಾ ಸಿಬ್ಬಂದಿ ಸುಧಾ ಅವರ ಅಂಗಾಂಗ ಬಿಚ್ಚಿಸಿ ತೋರಿಸಲು ಹೇಳಿದರು ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದು ಸಿಐಎಸ್ಎಫ್ ಹೇಳಿದೆ.
1981ರಲ್ಲಿ 16 ವರ್ಷದವರಿದ್ದಾಗಿ ನಡೆದ ಅಪಘಾತವೊಂದರಲ್ಲಿ ಸುಧಾ ಅವರು ತಮ್ಮ ಬಲಗಾಲು ಕಳೆದುಕೊಂಡಿದ್ದು, ಅವರಿಗೆ ಕೃತಕ ಕಾಲು ಅಳವಡಿಸಲಾಗಿದೆ. ಆದಾಗ್ಯೂ, ಅವರು ನೃತ್ಯ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.