'ಛಾವಾ' ಎಫೆಕ್ಟ್​: ಕೋಟೆಯನ್ನು ಅಗೆದು ಚಿನ್ನದ ನಿಧಿ ಹುಡುಕಿದ ಗ್ರಾಮಸ್ಥರು! ವಿಡಿಯೋ ವೈರಲ್​

Published : Mar 08, 2025, 06:09 PM ISTUpdated : Mar 08, 2025, 07:24 PM IST
'ಛಾವಾ' ಎಫೆಕ್ಟ್​: ಕೋಟೆಯನ್ನು ಅಗೆದು ಚಿನ್ನದ ನಿಧಿ ಹುಡುಕಿದ ಗ್ರಾಮಸ್ಥರು! ವಿಡಿಯೋ ವೈರಲ್​

ಸಾರಾಂಶ

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಚಿತ್ರದಿಂದ ಪ್ರೇರಿತರಾಗಿ, ಮಧ್ಯಪ್ರದೇಶದ ಆಸಿರ್‌ಗಢ ಕೋಟೆಯಲ್ಲಿ ಗ್ರಾಮಸ್ಥರು ಚಿನ್ನದ ನಿಧಿಗಾಗಿ ಅಗೆಯುತ್ತಿದ್ದಾರೆ. ಚಿತ್ರದಲ್ಲಿ ಮೊಘಲ್ ಯುಗದ ಚಿನ್ನದ ನಾಣ್ಯಗಳು ಕೋಟೆಯಲ್ಲಿ ಅಡಗಿದೆ ಎಂದು ತೋರಿಸಲಾಗಿದೆ. ಸ್ಥಳೀಯರು ಶಸ್ತ್ರಸಜ್ಜಿತರಾಗಿ ನಿಧಿಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಪೊಲೀಸರು ಅಕ್ರಮ ಅಗೆಯುವಿಕೆಯನ್ನು ತಡೆಯಲು ಎಚ್ಚರಿಕೆ ನೀಡಿದ್ದಾರೆ.

 ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಿತ್ರ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿ ಮುನ್ನುಗ್ಗುತ್ತಿದೆ. ಇಷ್ಟು ದಶಕಗಳವರೆಗೆ ಮುಚ್ಚಿಟ್ಟ ಸತ್ಯವನ್ನು ಅನಾವರಣಗೊಳಿಸಿರುವ ಈ ಚಿತ್ರವನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಇದು ಒಂದೆಡೆಯಾದರೆ, ಛಾವಾ ಚಿತ್ರದಿಂದ ಪ್ರೇರೇಪಿತಗೊಂಡು ಗ್ರಾಮಸ್ಥರು ಚಿನ್ನದ ನಿಧಿಯನ್ನು ಹುಡುಕಲು ಕೋಟೆಯನ್ನು ಅಗೆದಿರುವ ಘಟನೆ ನಡೆದಿದೆ.  'ಛಾವಾ' ಚಿತ್ರವು ಮೊಘಲ್ ಯುಗದ ಚಿನ್ನದ ನಾಣ್ಯಗಳನ್ನು ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿರುವ ಆಸಿರ್‌ಗಢ ಕೋಟೆಯಲ್ಲಿ ಅಡಗಿಸಿ ಇಡಲಾಗಿದೆ ಎಂಬುದನ್ನು ತೋರಿಸಲಾಗಿದೆ ಎಂದಿರುವ ಜನರ ಗುಂಪು ಅದನ್ನು ನಂಬಿ ಈಗಲೂ ಚಿನ್ನ ಸಿಗಬಹುದು ಎಂದು ಶಸ್ತ್ರಸಜ್ಜಿತರಾಗಿ ಹೋಗಿದ್ದಾರೆ!  ಇದರ ವಿಡಿಯೋ ವೈರಲ್​ ಆಗಿದೆ.

 ಸ್ಥಳೀಯರು ರಾತ್ರಿಯಲ್ಲಿ ಅಗೆಯಲು ಹೋಗಿದ್ದಾರೆ. ಅಷ್ಟಕ್ಕೂ, ಇತ್ತೀಚಿನ ದಿನಗಳಲ್ಲಿ, ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಚಿನ್ನದ ಆವಿಷ್ಕಾರದ ವಿಷಯವು ಬಾರಿ ಚರ್ಚೆಯಲ್ಲಿದೆ. ಈ ಬಗ್ಗೆ ವೈರಲ್​ ಆಗಿರುವ ವಿಡಿಯೋದಲ್ಲಿ ಇದರ ಬಗ್ಗೆ ಉಲ್ಲೇಖಿಸಲಾಗಿದೆ. 'ಛಾವಾ' ಚಿತ್ರದಲ್ಲಿ ಮೊಘಲರು ಮರಾಠರಿಂದ ಲೂಟಿ ಮಾಡಿದ ಚಿನ್ನ ಮತ್ತು ನಿಧಿಯನ್ನು ಮಧ್ಯಪ್ರದೇಶದ ಬುರ್ಹಾನ್‌ಪುರದ ಆಸಿರ್‌ಗಢ ಕೋಟೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ತೋರಿಸಲಾಗಿದೆ. ಚಲನಚಿತ್ರ ನೋಡಿದ ನಂತರ, ಸ್ಥಳೀಯ ಜನರು ನಿಧಿಯನ್ನು ಹುಡುಕಲು ಮತ್ತು ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಅಗೆಯುವ ಉಪಕರಣಗಳು, ಲೋಹ ಶೋಧಕಗಳು ಮತ್ತು ಚೀಲಗಳೊಂದಿಗೆ ಅಲ್ಲಿಗೆ ತಲುಪಿದರು. ನಮ್ಮ ದೇಶ ಎಷ್ಟು ಅನಕ್ಷರಸ್ಥ ಮತ್ತು ಹಳ್ಳಿಗಾಡಿನಂತಾಗುತ್ತಿದೆ ಎಂದು ನೋಡಿ ನನ್ನ ಹೃದಯ ದುಃಖಿತವಾಗಿದೆ ಎಂದು ಬರೆದಿದ್ದಾರೆ.

ಬ್ಲಾಕ್​ಬಸ್ಟರ್​ 'ಛಾವಾ' ಶೂಟಿಂಗ್​ ವೇಳೆ ಏನೇನಾಗಿತ್ತು? ಮೈ ಝುಂ ಎನ್ನುವ ಮೇಕಿಂಗ್​ ವಿಡಿಯೋ ವೈರಲ್​
 

ಮಾಧ್ಯಮ ವರದಿಗಳ ಪ್ರಕಾರ, 'ಛಾವಾ' ನೋಡಿದ ನಂತರ, ಕೆಲವು ಗ್ರಾಮಸ್ಥರು ಆಸಿರ್‌ಗಢ ಕೋಟೆಯ ಸುತ್ತಲೂ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಹೂಳಲಾಗಿದೆ ಎಂಬ ವದಂತಿಯನ್ನು ಹರಡಿದರು. ನಂತರ  ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಶೀಘ್ರದಲ್ಲೇ, ಗ್ರಾಮಸ್ಥರ ಗುಂಪು ಸಂಜೆ 7 ರಿಂದ ಬೆಳಗಿನ ಜಾವ 3 ರವರೆಗೆ ಟಾರ್ಚ್‌ಗಳು ಮತ್ತು ಲೋಹ ಶೋಧಕಗಳೊಂದಿಗೆ ಅಗೆಯಲು ಒಟ್ಟುಗೂಡಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಆಡಳಿತವು ಕಾರ್ಯಪ್ರವೃತ್ತವಾಯಿತು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು, ಆದರೆ ಆ ಹೊತ್ತಿಗೆ ಅಲ್ಲಿ ಅಗೆದ ಹೊಂಡಗಳು ಮಾತ್ರ ಉಳಿದಿದ್ದವು. ಅಕ್ರಮ ಅಗೆಯುವಿಕೆಯನ್ನು ನಿಲ್ಲಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಇಲ್ಲಿ ವಾಸ್ತವವಾಗಿ ಯಾವುದೇ ನಿಧಿ ಇದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಐತಿಹಾಸಿಕ ದಾಖಲೆಗಳ ಪ್ರಕಾರ, ಬುರ್ಹಾನ್ಪುರವು ಒಂದು ಕಾಲದಲ್ಲಿ ಮೊಘಲರ ಪ್ರಮುಖ ಕೇಂದ್ರವಾಗಿತ್ತು. ಯುದ್ಧದ ಸಮಯದಲ್ಲಿ ಜನರು ತಮ್ಮ ಸಂಪತ್ತನ್ನು ನೆಲದಲ್ಲಿ ಅಡಗಿಸಿಡುತ್ತಿದ್ದರು ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಜನರು ಇಲ್ಲಿ ನಿಧಿ ಸಿಗುವ ಭರವಸೆಯನ್ನು ಹೊಂದಲು ಪ್ರಾರಂಭಿಸಿದ್ದಾರೆ. ಇನ್ನು ಚಿತ್ರದ ಕುರಿತು ಹೇಳುವುದಾದರೆ, ಲಕ್ಷ್ಮಣ್ ಉಟೇಕರ್ ನಿರ್ದೇಶನದ 'ಛಾವಾ' ಚಿತ್ರವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಚಿತ್ರದಲ್ಲಿ ವಿಕ್ಕಿ ಕೌಶಲ್ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದರೆ, ಅಕ್ಷಯ್ ಖನ್ನಾ ಮತ್ತು ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಆಳ್ವಿಕೆ ನಡೆಸುತ್ತಿದ್ದು, 500 ಕೋಟಿ ಕ್ಲಬ್‌ನತ್ತ ಸಾಗುತ್ತಿದೆ. ಫೆಬ್ರವರಿ 14 ರಂದು ಹಿಂದಿಯಲ್ಲಿ ಬಿಡುಗಡೆಯಾದ ಈ ಚಿತ್ರದ ತೆಲುಗು ಆವೃತ್ತಿ ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌